ಚೇಂಪಿ (ಬ್ರಹ್ಮಾವರ): ಹಿಂದೆ ಮುನಿಗಳು ನುಡಿದಂತೆ ಮುಂದಿನ ಕಲಿಯುಗದಲ್ಲಿ ಅಧರ್ಮ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಧರ್ಮ ನೆಲೆಯೂರಲು ಪೂಜಾ ಹೋಮ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಪಾಂಡೇಶ್ವರದ ರಕ್ತೇಶವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ರಮೇಶ್ ರಾವ್ ಹೇಳಿದರು.
ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಭಾಂಗಣದಲ್ಲಿ ಮಂಗಳವಾರ ಅವರು ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಸಾಸ್ತಾನ ಒಕ್ಕೂಟದ ಬಾರ್ಕೂರು ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ ಪ್ರವಚನಮಾಡಿದ ದಾಮೋದರ ಆಚಾರ್ಯ ಮನುಷ್ಯನ ದೈನಂದಿನ ಬದುಕಿನ ನಡತೆ ಎನ್ನುವುದು ಭಗವಂತ ಪ್ರೇರೇಪಿಸುವ ಶಕ್ತಿಗಳಲ್ಲೊಂದಾಗಿದೆ. ಖಾವಂದರ ಸಮಾಜಮುಖಿ ಚಿಂತನೆ, ಪರಿಪೂರ್ಣ ವ್ಯಕ್ತಿತ್ವವೆಂಬುವುದು ನಮಗೆಲ್ಲ ಆದರ್ಶ ಎಂದರು.
ಸಾಸ್ತಾನ ಒಕ್ಕೂಟದ ಅಧ್ಯಕ್ಷ ಕೃಷ್ಣ ಸಾಸ್ತಾನ ಅಧ್ಯಕ್ಷತೆ ವಹಿಸಿದ್ದರು. ಕೋಟ ಅಮೃತೇಶ್ವರಿ ದೇವಳದ ಧರ್ಮದರ್ಶಿ ಆನಂದ್ ಸಿ ಕುಂದರ್, ಚೇಂಪಿ ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಜನಾರ್ಧನ ಆಚಾರ್ಯ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಶೋಭಾ ಸ್ವಾಗತಿಸಿದರು. ಅನುಸೂಯ ವಂದಿಸಿದರು. ಬಾರ್ಕೂರು ವಲಯದ ಮೇಲ್ವಿಚಾರಕಿ ಚೈತನ್ಯ ಎಸ್ ಶೆಟ್ಟಿ ನಿರೂಪಿಸಿದರು.