ಸಿನಿ ತಾರೆಯರ, ಕ್ರೀಡಾಪಟುಗಳ ಕೇಶವಿನ್ಯಾಸಕ್ಕೆ ಮರುಳಾಗಿ ಅವರಂತೆಯೇ ಕೇಶವಿನ್ಯಾಸ ಮಾಡಿಸಿಕೊಳ್ಳುವ ಅಭಿಮಾನಿಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅದೇ ಮಾದರಿಯ ಕಟ್ಟಾಭಿಮಾನವು ರಾಜಕೀಯ ರಂಗದಲ್ಲಿ ಕಾಣುತ್ತದೆ. ಚುನಾವಣಾ ಸಂದರ್ಭದಲ್ಲಂತೂ ಅದು ತುಸು ಹೆಚ್ಚಾಗಿಯೇ ಕಂಡು ಬರುತ್ತದೆ.
ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯು ದಿನೇ ದಿನೇ ರಂಗೇರುತ್ತಿದೆ. ಎಲ್ಲೆಡೆ ರಾಜಕಾರಣಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದು, ಮತದಾರರ ಮನವೊಲಿಸಲು ಅನೇಕ ತಂತ್ರಗಳನ್ನು ಅವರು ಅನುಸರಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿವಿಧ ರೀತಿಯಲ್ಲಿ ಪ್ರಚಾರ ನಡೆಸುತ್ತ ಮತದಾರರ ಮನವೊಲಿಸುತ್ತಿದ್ದಾರೆ.
ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಾದ ಎಲ್.ರಾಜೇಶ್ ತಲೆಯ ಹಿಂಭಾಗದಲ್ಲಿ ಹಾಗೂ ಮತ್ತೊಬ್ಬ ಕಾರ್ಯಕರ್ತ ವಿ.ಆನಂದ್ ತಮ್ಮ ಗಡ್ಡದ ಒಂದು ಭಾಗದಲ್ಲಿ ಕಮಲ ಚಿಹ್ನೆಯ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಈಚೆಗೆ ನಾಮಪತ್ರ ಸಲ್ಲಿಸಲು ಕೆ.ಆರ್.ಪುರ ತಾಲ್ಲೂಕು ಕಚೇರಿಗೆ ಬಂದಿದ್ದರು. ಅದೇ ದಿನ ಸಾವಿರಾರು ಮಂದಿ ಕಾರ್ಯಕರ್ತರು ಅಲ್ಲಿ ನೆರೆದಿದ್ದರು. ರಾಜೇಶ್ ಹಾಗೂ ಆನಂದ್ ಅವರ ಕೇಶ ವಿನ್ಯಾಸ ನೆರೆದಿದ್ದವರ ಆಕರ್ಷಿಸಿತು.
‘ಪಕ್ಷದ ಪರವಾಗಿ ಪ್ರಚಾರಕ್ಕಾಗಿ ಮನೆ ಮನೆಗೆ ಹೋಗುತ್ತಿದ್ದೇವೆ. ಆಗ ಜನರು ನಮ್ಮ ಕೇಶ ವಿನ್ಯಾಸ ಕಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಅದರಿಂದ ನಮಗೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ರಾಜೇಶ್ ಹಾಗೂ ಆನಂದ್. ಅಂದಹಾಗೆ ಇವರಿಗೆ ಈ ರೀತಿಯ ಕೇಶ ವಿನ್ಯಾಸ ಮಾಡಿದ್ದು ವೈಟ್ಫಿಲ್ಡ್ನ ಸುಷ್ಮಾ ಸಲೂನ್ನ ರವಿವಂಶಿ.