ನವದೆಹಲಿ: ಕರ್ನಾಟಕದ ಡಬಲ್ಸ್ ವಿಭಾಗದ ಆಟಗಾರ ರೋಹನ್ ಬೋಪಣ್ಣ ಮತ್ತು ನವದೆಹಲಿಯ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಅವರ ಹೆಸರುಗಳನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಗುರುವಾರ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಈ ವಿಷಯವನ್ನು ಎಐಟಿಎ ಮಹಾ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ ಖಚಿತಪಡಿಸಿದ್ದಾರೆ.
ಕೊಡಗಿನ ರೋಹನ್, ಹೋದ ವರ್ಷ ನಡೆದಿದ್ದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು. ಆಗ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಅಷ್ಟರಲ್ಲಾಗಲೇ ಗಡುವು ಮುಗಿದಿದ್ದರಿಂದ ರೋಹನ್ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿರಲಿಲ್ಲ.
ಯೂಕಿ ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 83ನೇ ಸ್ಥಾನಕ್ಕೇರಿದ್ದರು. ಜೊತೆಗೆ ಹಲವು ಚಾಲೆಂಜರ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು.
‘ನನ್ನ ಸಾಧನೆಯನ್ನು ಪರಿಗಣಿಸಿ ಎಐಟಿಎ ಅರ್ಜುನ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಿದೆ. ಇದರಿಂದ ತುಂಬಾ ಸಂತಸವಾಗಿದೆ’ ಎಂದು ಯೂಕಿ ಹೇಳಿದ್ದಾರೆ.
‘ರೋಹನ್, ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಗ್ರ್ಯಾನ್ಸ್ಲಾಮ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅರ್ಜುನ ಪ್ರಶಸ್ತಿಗೆ ಅವರು ಅರ್ಹರಾಗಿದ್ದಾರೆ’ ಎಂದೂ ಯೂಕಿ ತಿಳಿಸಿದ್ದಾರೆ.