ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿ ಬಿಚ್ಚಿಟ್ಟ ಸೋನು

Last Updated 10 ಮೇ 2018, 19:30 IST
ಅಕ್ಷರ ಗಾತ್ರ

‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ಸೋನು ಗೌಡ. ‘ಮಾರಿಕೊಂಡವರು’ ಚಿತ್ರದಲ್ಲಿ ಅವರದು ಬಂಡಾಯಗಾತಿ ಪಾತ್ರ. ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ಬಂಡಾಯದ ಇನ್ನೊಂದು ಮುಖದಂತೆ ಕಾಣುವ ‘ಗಯ್ಯಾಳಿ’ ಪಾತ್ರ. ‘ಕಾನೂರಾಯಣ’ದಲ್ಲಿ ಹಳ್ಳಿಯ ಬಡ ಹುಡುಗಿಯಾಗಿ, ಹೋರಾಟದ ಮುಂದಾಳು. ‘ಗುಳ್ಟು’ ಚಿತ್ರದಲ್ಲಿ ಕಂಪ್ಯೂಟರ್‌ ಶಿಕ್ಷಕಿ ಪಾತ್ರ. ಹೀಗೆ ವೃತ್ತಿಜೀವನದ ಒಂದು ದಶಕದ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬಿದ ಹೆಮ್ಮೆ ಅವರಲ್ಲಿದೆ.

ಸೋನು ಬಣ್ಣದಲೋಕ ಪ್ರವೇಶಿಸಿದ್ದು ಅನಿರೀಕ್ಷಿತ. ಒಂದಿಷ್ಟು ಕಾಲ ಇಲ್ಲಿ ವಿಹರಿಸಿ ಸಿನಿಮಾ ಸಹವಾಸವೇ ಬೇಡವೆಂದು ಜಾಹೀರಾತು ಕ್ಷೇತ್ರದತ್ತ ಮುಖ ಮಾಡಿದರು. ಆದರೆ, ಬೆಳ್ಳಿತೆರೆಯಲ್ಲಿ ಅವಕಾಶ ಸಿಗುವುದು ಅಪರೂಪ. ಕೆಲವರಿಗಷ್ಟೇ ಅವಕಾಶ ಹುಡುಕಿಕೊಂಡು ಬರುತ್ತವೆ ಎಂಬ ಸತ್ಯದ ಅರಿವಾಗಲು ಅವರಿಗೆ ಬಹುಕಾಲ ಬೇಕಾಗಲಿಲ್ಲ. ಆ ಕ್ಷಣವೇ ಮತ್ತೆ ಬಣ್ಣದ ಜಗತ್ತಿನ ಒಳಹೊಕ್ಕರು.

‘‌ನಾನು ಚಿತ್ರರಂಗ ಪ್ರವೇಶಿಸಿದ್ದು ರೀಲ್‌ ಯುಗದಲ್ಲಿ. ಆಗ ಚಿತ್ರೀಕರಣದ ವೇಳೆ ಭಯಪಡುತ್ತಿದ್ದೆ. ಈಗ ಡಿಜಿಟಲ್ ಕಾಲ. ಸಿನಿಮಾ ನಿರ್ಮಾಣದ ಸ್ವರೂಪವೂ ಬದಲಾಗಿದೆ. ಚಿತ್ರರಂಗ ನವೀನ ತಂತ್ರಜ್ಞಾನವನ್ನು ಹೊದ್ದುಕೊಂಡಿದೆ. ಪ್ರಸ್ತುತ ಎಲ್ಲವೂ ಸುಲಭವಾಗಿದೆ. ಎರಡು ಮಾದರಿಯಲ್ಲೂ ನಟಿಸಿದ ಖುಷಿ ನನಗಿದೆ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

ಕಲಾತ್ಮಕ ಹಾಗೂ ವ್ಯಾಪಾರಿ ಎರಡೂ ಪ್ರಕಾರಗಳಲ್ಲೂ ವಿಭಿನ್ನ ಅನುಭವ ಪಡೆದ ಖುಷಿ ಅವರದು. ಆದರೆ, ನಟನೆಯಲ್ಲಿ ಅವರಿಗೆ ಇನ್ನೂ ತೃಪ್ತಿಯಾಗಿಲ್ಲವಂತೆ. ‘ಮೂವತ್ತು ವರ್ಷ ಕಾಲ ಚಿತ್ರರಂಗದಲ್ಲಿರುವ ಕಲಾವಿದರನ್ನು ನೀವೊಮ್ಮೆ ಕೇಳಿನೋಡಿ. ನನಗೆ ಇನ್ನೂ ಉತ್ತಮ ಅವಕಾಶ ಸಿಕ್ಕಿಲ್ಲ; ನಟನೆಯಲ್ಲಿ ತೃಪ್ತಿ ಸಿಕ್ಕಿಲ್ಲ ಎನ್ನುತ್ತಾರೆ. ನನ್ನದೂ ಇದೇ ಅಭಿಪ್ರಾಯ. ಆದರೆ, ನನಗೆ ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿರುವ ತೃಪ್ತಿ ಇದೆ’ ಎಂದು ನಗೆ ಬೀರುತ್ತಾರೆ ಸೋನು.

ಪ್ರಯೋಗಾತ್ಮಕ ಪಾತ್ರಗಳಿಗೂ ಅವರು ಒಗ್ಗಿಕೊಂಡಿದ್ದಾರೆ. ‘ಉತ್ತಮ ನಿರ್ದೇಶಕರಿದ್ದರೆ ಮಾತ್ರ ನಾವು ಎಂತಹ ಪಾತ್ರವನ್ನಾದರೂ ನಿಭಾಯಿಸಬಹುದು. ಜೊತೆಗೆ, ಉತ್ತಮ ತಂಡವೂ ಇರಬೇಕು. ನಟಿಯೊಬ್ಬಳ ನಟನೆಯ ಪರಿಪೂರ್ಣತೆ ಹಿಂದೆ ನಿರ್ದೇಶಕನ ಪಾತ್ರ ಹಿರಿದು. ದೀಪಿಕಾ ಪಡುಕೋಣೆ ಅವರ ಯಶಸ್ಸಿನ ಹಿಂದೆ ಒಳ್ಳೆಯ ನಿರ್ದೇಶಕರ ಶ್ರಮವೂ ಇದೆ’ ಎಂದು ನುಡಿಯುತ್ತಾರೆ. ಸೋನು ಯಾವುದೇ ಸಿನಿಮಾವನ್ನು ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲವಂತೆ. ‘ಕಥೆ ಸ್ಫೂರ್ತಿ ನೀಡುವಂತಿರಬೇಕು. ಅದರಲ್ಲಿ ಸಾಮಾಜಿಕ ಕಳಕಳಿ ಮಿಳಿತವಾಗಿರಬೇಕು. ಆ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಲು ಸಾಧ್ಯವೇ ಎನ್ನುವುದು ಪರಾಮರ್ಶಿಸುತ್ತೇನೆ. ಕೇವಲ ಡಾನ್ಸ್‌ ಮಾಡಿ ಹೋಗುವ ಪಾತ್ರಗಳು ನನಗಿಷ್ಟವಿಲ್ಲ’ ಎನ್ನುವುದು ಅವರ ಸ್ಪಷ್ಟೋಕ್ತಿ.

‘ನನ್ನ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾದ ಅರಿವು ಇದೆ. ನಮಗೆ ಗೊತ್ತಿಲ್ಲದೆ ಬಹಳಷ್ಟು ಜನರನ್ನು ನಮ್ಮನ್ನು ಅನುಸರಿಸುತ್ತಾರೆ. ನಾವು ಮಾಡುವ ಪ್ರತಿ ಚಟುವಟಿಕೆ ದಾಖಲಾಗುತ್ತಿರುತ್ತದೆ. ನಾವು ತಮಾಷೆಯಾಗಿ ಹೇಳುವ ಮಾತು ಪೇಚಿಗೆ ಸಿಲುಕಿಸುವ ಸಾಧ್ಯತೆಯೂ ಇದೆ. ಬಿಕ್ಕಟ್ಟಿನ ಸುಳಿಗೆ ಸಿಲುಕದಂತೆ ಎಚ್ಚರವಹಿಸಬೇಕು’ ಎಂದು ವಿವರಿಸುತ್ತಾರೆ.

ಗಾಸಿಪ್‌ಗಳು ಹರಡುವ ಬಗ್ಗೆಯೂ ಅವರಿಗೆ ಬೇಸರವಿದೆ. ‘ಬಹಳಷ್ಟು ವೇಳೆ ಪರಿಚಯದವರು ನಮ್ಮ ಹತ್ತಿರವೇ ಇಲ್ಲಸಲ್ಲದ ವಿಷಯ ಹೇಳುತ್ತಾರೆ. ಆ ವೇಳೆ ಮಾನಸಿಕ ಒತ್ತಡ ಸಹಜ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ಮೇಲೆ ನಮಗೆ ವಿಶ್ವಾಸವಿದ್ದರೆ ಸಾಕು’ ಎಂಬುದು ಅವರ ಖಚಿತ ನುಡಿ.

ಚಿತ್ರರಂಗಕ್ಕೆ ಅಂಟಿದ ‘ಕಾಸ್ಟಿಂಗ್‌ ಕೌಚ್‌’ ಕಳಂಕದ ಬಗ್ಗೆ ಅವರಿಗೆ ಬೇಸರವಿದೆ. ಪ್ರತಿಭೆ ನಟಿಯರ ಮಾನದಂಡ ಆಗಬೇಕು. ಅನ್ಯಮಾರ್ಗಗಳ ಮೂಲಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ ಎಂಬುದು ಮೂರ್ಖತನದ ಪರಮಾವಧಿ ಎನ್ನುವುದು ಅವರ ಸ್ಪಷ್ಟವಾದ ಹೇಳಿಕೆ.

‘ಎಲ್ಲ ಕ್ಷೇತ್ರಗಳಲ್ಲೂ ಕಾಸ್ಟಿಂಗ್‌ ಕೌಚ್‌ ಇದೆ. ಖಾಸಗಿ ಸಂಸ್ಥೆಗಳು ಇದರಿಂದ ಹೊರತಲ್ಲ. ಆದರೆ, ಅಲ್ಲಿ ನಡೆಯುವ ಘಟನಾವಳಿಗಳು ಬೆಳಕಿಗೆ ಬರುವುದಿಲ್ಲ. ಈ ಅನಿಷ್ಟ ಪದ್ಧತಿ ವಿರುದ್ಧ ಕೆಲವು ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಸಂತ್ರಸ್ತ ನಟಿಯರು ದಿಟ್ಟತನದಿಂದ ಇದನ್ನು ಎದುರಿಸಬೇಕಿದೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಶುದ್ಧವಾದ ದಾರಿಯಲ್ಲಿ ನಡೆದಾಗ ಇಂತಹ ಸುಳಿಗೆ ಸಿಲುಕುವುದಿಲ್ಲ’ ಎನ್ನುತ್ತಾರೆ ಅವರು.

‘ಗುಳ್ಟು’ ಸಿನಿಮಾ ಅವರ ನಟನಾಪಯಣಕ್ಕೆ ಹೊಸದಿಕ್ಕು ನೀಡಿದೆ. ಅವರ ನಟನೆಯ ‘ಒಂಥರ ಬಣ್ಣಗಳು’ ಚಿತ್ರ ಜೂನ್‌ ವೇಳೆಗೆ ತೆರೆಗೆ ಬರುವ ಹಾದಿಯಲ್ಲಿದೆ. ‘ಫಾರ್ಚುನರ್‌’ ಚಿತ್ರ ಮಾತಿನ ಮರುಲೇಪನದ ಹಂತದಲ್ಲಿದೆ. ‘ಚಂಬಲ್‌’ನಲ್ಲೂ ಅವರು ಬ್ಯುಸಿ. ‘ಶಾಲಿನಿ ಐಎಎಸ್‌’ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಕನ್ನಡದಲ್ಲಿಯೇ ನಟನೆಗೆ ಅವಕಾಶಗಳು ಹೆಚ್ಚಿವೆ. ಹಾಗಾಗಿ, ತಮಿಳಿನಲ್ಲಿ ಅವಕಾಶ ಲಭಿಸಿದರೂ ನಟಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಇನ್ನೊಂದೆಡೆ ನಟನೆ ನಡುವೆ ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಕೊರಗು ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT