ಹಾಸನ: ಮತದಾರರ ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಹಿನ್ನಲೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭಾ ಚುನಾವಣೆ ಮುಂದೂಡಿರುವ ಚುನಾವಣಾ ಆಯೋಗ ಕ್ರಮವನ್ನು ಸಂಸದ ಎಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ.
‘ಕಾಂಗ್ರೆಸ್ ಅಭ್ಯರ್ಥಿ ಅಕ್ರಮ ನಡೆಸಿದ್ದನ್ನು ಆಯೋಗ ಗಂಭೀರವಾಗಿ ಪರಿಗಣಿಸಿ, ಆಯೋಗ ಮತ್ತು ಪೊಲೀಸರು ಉತ್ತಮ ನಿರ್ಣಯ ಕೈಗೊಂಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು. ಪ್ರಜಾಪ್ರಭತ್ವದಲ್ಲಿ ಇದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
ಅಕ್ರಮ ಮದ್ಯ ಸಾಗಣೆ ಮಾಹಿತಿ ನೀಡಿದಕ್ಕೆ ಹಲ್ಲೆಗೆ ಒಳಗಾಗಿ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತ ಅನಂತ್ ಆರೋಗ್ಯವನ್ನು ದೇವೇಗೌಡರು ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ನಡವಳಿಕೆ ಕುರಿತು ಏನು ಹೇಳುವುದಿಲ್ಲ. ಚಾಮರಾಜನಗರ ಜಿಲ್ಲೆ ಹನೂರಿನ ಜೆಡಿಎಸ್ ಅಭ್ಯರ್ಥಿ ಕಾವಲಿಗೆ ಡಿವೈಎಸ್ಪಿ ನೇಮಕ ಅಗತ್ಯವಿರಲಿಲ್ಲ. ಕೆಂಪಯ್ಯ ಮೈಸೂರು ಜಿಲ್ಲೆಯಲ್ಲಿಯೇ ಬೀಡುಬಿಟ್ಟಿದ್ದಾರೆ. ಏನು ಮಾಡೋಕಾಗುತ್ತೆ’ ಎಂದು ಪ್ರಶ್ನಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಷದ ಗೆಲುವಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಬೇಕಾದ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ಮೇಲೆ 3ನೇ ಡಿ.ಸಿ ಹಾಕಿದ್ದಾರೆ. ಹೀಗಾಗಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ ’ ಎಂದು ಬೇಸರ ವ್ಯಕ್ತಪಡಿಸಿದರು.