ಬಳ್ಳಾರಿ: ಸಂಡೂರು ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಕಾಂಗ್ರೆಸ್ನ ಈ ತುಕಾರಾಂ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಡಿ.ರಾಘವೇಂದ್ರ ಸೋಲುಂಡಿದ್ದಾರೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರ ಊರಾದ ಇಲ್ಲಿ ಆ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ವಸಂತಕುಮಾರ್ ಸಮೀಪಸ್ಪರ್ಧೆಯನ್ನು ನೀಡಲು ಆಗಲಿಲ್ಲ.
ಸಂಡೂರು ಕ್ಷೇತ್ರದ ಅಭಿವೃದ್ಧಿ ಮತ್ತು ಗಣಿ ಸಂತ್ರಸ್ತರ ಅಭಿವೃದ್ಧಿ ಪರವಾಗಿ ಶಾಸಕ ತುಕಾರಾಂ ದನಿ ಎತ್ತಲಿಲ್ಲ ಎಂಬ ಆರೋಪದ ನಡುವೆಯೇ ಅವರು ಗೆದ್ದಿದ್ದಾರೆ. ಈ ವಿಷಯಗಳನ್ನೇ ಎದುರಾಳಿ ಪಕ್ಷಗಳು, ಅದರಲ್ಲೂ ಎಸ್ಯುಸಿಐ ಪ್ರತ್ಯಸ್ತ್ರವನ್ನಾಗಿ ಪ್ರಯೋಗಿಸಿತ್ತು. ಆದರೆ ಅವು ಯಾವುವೂ ತುಕಾರಾಂ ಅವರ ಗೆಲುವನ್ನು ತಡೆಯಲು ಆಗಿಲ್ಲ.
ಕಾಂಗ್ರೆಸ್ನ ಭದ್ರಕೋಟೆಯೂ ಆಗಿರುವ ಸಂಡೂರಿನಲ್ಲಿ ಇದುವರೆಗೆ ನಡೆದಿರುವ 13 ಚುನಾವಣೆಗಳ ಪೈಕಿ 11ರಲ್ಲಿ ಕಾಂಗ್ರೆಸ್ ಗೆದ್ದಿತ್ತು. 14ನೇ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ. ಇದು ಪಕ್ಷದ ಅಭ್ಯರ್ಥಿಗಿಂತಲೂ, ಪಕ್ಷದೆಡೆಗಿನ ಮತದಾರರ ವಿಶ್ವಾಸದ ಕಡೆಗೂ ಬೆರಳು ತೋರುತ್ತದೆ.
ಕ್ಷೇತ್ರದ ಕುಡಿತಿನಿ ಗ್ರಾಮದ ನಿವಾಸಿ ರಾಮಾಂಜನಿ, ‘ಸರ್ಕಾರ ನಮಗೆ ಅನ್ನ ಭಾಗ್ಯ ಕೊಟ್ಟಿದೆ. ಆ ಪಕ್ಷದಿಂದ ಯಾರೇ ನಿಂತರೂ ಅವರಿಗೇ ನನ್ನ ಮತ ಎಂದಿದ್ದರು’. ಈ ಮನಸ್ಥಿತಿಯುಳ್ಳ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿರುವುದು ಕೂಡ ತುಕಾರಾಂ ಅವರನ್ನು ಮೂರನೇ ಬಾರಿ ಗೆಲ್ಲುವಂತೆ ಮಾಡಿದೆ.
ಅಕ್ರಮ ಗಣಿಗಾರಿಕೆ ಮತ್ತು ಸಂತ್ರಸ್ತರ ಸಂಕಟದ ವಿಷಯ ಈ ಬಾರಿ ಚುನಾವಣೆ ವಿಷಯ ಆಗಿರಲೇ ಇಲ್ಲ. ಅದನ್ನು ಒಂದು ಪ್ರಮುಖ ವಿಷಯ ಎಂದು ಮಂಡಿಸಿದ ಎಸ್ಯುಸಿಐ ಕೂಡ ಆಶಾದಾಯಕ ಮತಗಳನ್ನು ಪಡೆಯಲು ಆಗಲಿಲ್ಲ.
ಸಂಡೂರು : ಗೆಲುವಿಗೆ ಕಾರಣವಾದ ಐದು ಅಂಶಗಳು
1 ಕ್ಷೇತ್ರದಲ್ಲಿ ಆರಂಭದಿಂದಲೂ ಇರುವ ಕಾಂಗ್ರೆಸ್ ಪರ ಒಲವು
2 ಬಿಜೆಪಿ ಅಭ್ಯರ್ಥಿ ಡಿ.ರಾಘವೇಂದ್ರ ಕೊನೇ ಕ್ಷಣದವರೆಗೂ ಕಾಂಗ್ರೆಸ್ನಲ್ಲಿದ್ದವರು
3 ಪ್ರಬಲ ಪೈಪೋಟಿ ನೀಡದ ಜೆಡಿಎಸ್
4 ಪ್ರತಿಭಟನೆಯಾಗಿ ಪರಿವರ್ತನೆಯಾಗದ ಗಣಿ ಸಂತ್ರಸ್ತರ ಅಸಮಾಧಾನ
5 ಜಾಗೃತಿಗಷ್ಟೇ ಸೀಮಿತವಾದ ಎಸ್ಯುಸಿಐಸಿ
ಸಂಡೂರು
ಈ.ತುಕಾರಾಂ (ಕಾಂಗ್ರೆಸ್)78,106 (ಗೆಲುವಿನ ಅಂತರ 14,010)
ಡಿ.ರಾಘವೇಂದ್ರ (ಬಿಜೆಪಿ)64,096
ಬಿ.ವಸಂತಕುಮಾರ್ (ಜೆಡಿಎಸ್) 4,343
ಎನ್.ಚೇತನ್ (ಎಐಎಂಇಪಿ) 928
ಬಂಗಾರ ಹನುಮಂತು (ಪಕ್ಷೇತರ) 719
ರಾಮಾಂಜನಪ್ಪ (ಎಸ್ಯುಸಿಐಸಿ) 124
ನೋಟಾ 180
ಸಂಡೂರು: ಮೂರು ಚುನಾವಣೆಗಳ ಫಲಿತಾಂಶ
2008 ಈ.ತುಕಾರಾಂ: ಕಾಂಗ್ರೆಸ್
2013ಈ.ತುಕಾರಾಂ :ಕಾಂಗ್ರೆಸ್
2018ಈ.ತುಕಾರಾಂ :ಕಾಂಗ್ರೆಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.