ಚಿತ್ರದುರ್ಗ: ತಾಂತ್ರಿಕ ಸಮಸ್ಯೆಯಿಂದಾಗಿ ಚಿತ್ರದುರ್ಗ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಸಮ್ಮುಖದಲ್ಲಿಯೆ ಎಣಿಕೆ ಕಾರ್ಯ ಮತ್ತೆ ಆರಂಭವಾಗಿದೆ.
3ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ನಡೆಸಿದ ಲೆಕ್ಕಾಚಾರದಲ್ಲಿ ತಪ್ಪಾಗಿತ್ತು. ಇದನ್ನು ಗಮನಿಸಿದ ಚುನಾವಣಾ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಮತ ಎಣಿಕೆ ಕೆಲ ಹೊತ್ತು ಸ್ಥಗಿತಗೊಂಡಿತ್ತು.
ಬಳಿಕ ಪ್ರತಿ ಸುತ್ತಿನ ಮತ ಎಣಿಕೆಯನ್ನು ಕುಲಂಕಷವಾಗಿ ನಡೆಸಲಾಯಿತು. 18 ಸುತ್ತಿನ ಮತ ಎಣಿಕೆ ಮುಗಿದರೂ ಅಂಚೆ ಮತ ಎಣಿಕೆ ಇನ್ನೂ ಬಾಕಿ ಉಳಿದಿತ್ತು. ಇದನ್ನು ಪೂರ್ಣಗೊಳಿಸುವ ಉದ್ದೇಶದಿಂದ ವಿದ್ಯುನ್ಮಾನ ಮತಯಂತ್ರದಲ್ಲಿನ ಮತ ಎಣಿಕೆ ಸ್ಥಗಿತ ಮಾಡಲಾಗಿತ್ತು.
ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಗಿದಿದೆ. 3 ಗಂಟೆಯಾದರೂ ಚಿತ್ರದುರ್ಗ ಕ್ಷೇತ್ರದ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ.