ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಪಾಟೀಲರ ಪಾರುಪತ್ಯ..!

ಗೆದ್ದವರು ಬೆಂಗಳೂರಿಗೆ, ಗದ್ದುಗೆ ಗುದ್ದಾಟಕ್ಕಾಗಿ; ಸೋತವರಿಗೆ ಆಪ್ತರಿಂದ ಸಾಂತ್ವನ
Last Updated 17 ಮೇ 2018, 6:55 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಿಗೆ, ಶಾಸಕರಾಗಿ ಆಯ್ಕೆಗೊಂಡವರು ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ಪಯಣಿಸಿದ್ದಾರೆ. ತೀವ್ರ ಪೈಪೋಟಿ ನೀಡಿಯೂ ಸೋತವರು ತಮ್ಮ ಮನೆ ಗಳಲ್ಲಿಯೇ ಉಳಿದಿದ್ದು, ಆಪ್ತರು ಸಾಂತ್ವನ ಹೇಳಲು ಬುಧವಾರ ನಸುಕಿ ನಿಂದಲೇ ಭೇಟಿಯಾದ ಚಿತ್ರಣ ವಿವಿಧೆಡೆ ಗೋಚರಿಸಿತು.

ರಾಜ್ಯದಲ್ಲಿನ ಅಧಿಕಾರದ ಚುಕ್ಕಾಣಿ ಯನ್ನು ಬಿಜೆಪಿ ಹಿಡಿದರೆ, ಅಥವಾ ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದರೇ ಜಿಲ್ಲೆಯ ಚುಕ್ಕಾಣಿ ಸಹ ಪಾಟೀಲರ ಹಿಡಿತದಲ್ಲೇ ಇರಲಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬಸನಗೌಡ ಪಾಟೀಲ ಯತ್ನಾಳ ಸಚಿವರಾಗುವುದು ಬಹುತೇಕ ಖಚಿತ. ಬಿ.ಎಸ್‌.ಯಡಿಯೂರಪ್ಪ ಸಹ ಚುನಾವಣಾ ಪ್ರಚಾರದಲ್ಲೇ ಇದನ್ನು ಖಚಿತಪಡಿಸಿರುವುದು ಯತ್ನಾಳ ಬೆಂಬಲಿಗರಲ್ಲಿ ಸಂತಸದ ಹೊನಲು ಮೂಡಿಸಿದೆ.

ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದರೇ ಜಿಲ್ಲೆ ಇಬ್ಬರು ಸಚಿವರನ್ನು ಹೊಂದುವ ಸಾಧ್ಯತೆಗಳೇ ಹೆಚ್ಚಿವೆ. ಕಾಂಗ್ರೆಸ್‌ನಿಂದ ಎಂ.ಬಿ.ಪಾಟೀಲ ಸಚಿವರಾಗಬಹುದು. ಎಚ್‌.ಡಿ.ದೇವೇಗೌಡ ಜತೆ ಈಚೆಗಿನ ದಿನಗಳಲ್ಲಿನ ದೋಸ್ತಿಯ ಪರಿಣಾಮ ಉಪ ಮುಖ್ಯಮಂತ್ರಿಯೂ ಆಗಬಲ್ಲರು ಎಂಬ ವಿಶ್ವಾಸ ಪಾಟೀಲ ಬೆಂಬಲಿಗ ಪಡೆಯಿಂದ ಈಗಾಗಲೇ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಜಿಲ್ಲೆಯಲ್ಲಿ ಪಕ್ಷ ಸದೃಢಗೊಳಿಸಲು, ಹಿರಿತನದ ಆಧಾರದ ಮೇಲೆ ಸಿಂದಗಿಯಿಂದ ಆಯ್ಕೆಯಾಗಿರುವ ಎಂ.ಸಿ.ಮನಗೂಳಿ ಜೆಡಿಎಸ್‌ ಕೋಟಾದಡಿ ಸಚಿವರಾಗುವುದು ಬಹುತೇಕ ಖಚಿತ ಎಂಬುದು ಮನಗೂಳಿ ಆಪ್ತ ವಲಯದಿಂದ ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಆಪ್ತರ ಜತೆ ವಿಜಯೋತ್ಸವ ಆಚರಿಸಿದ ಮನಗೂಳಿ, ‘ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವೆ. ಸಚಿವನಾಗಿಯೇ ಮರಳುವೆ’ ಎಂದು ತಿಳಿಸಿದ್ದಾರೆ ಎಂದು ಮನಗೂಳಿ ಬೆಂಬಲಿಗರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಟೀಲರದ್ದೇ ಪಾರುಪತ್ಯ: ವಿಜಯ ಪುರ ಜಿಲ್ಲೆಯಲ್ಲಿ ಈ ಬಾರಿ ಪಾಟೀಲರದ್ದೇ ಪಾರುಪತ್ಯ. ಆರು ವಿಧಾನಸಭಾ ಕ್ಷೇತ್ರಗಳ ಚುಕ್ಕಾಣಿ ಪಾಟೀಲರ ಕೈ ವಶವಾಗಿದೆ.

ಇಂಡಿಯಿಂದ ಯಶವಂತರಾ ಯಗೌಡ ಪಾಟೀಲ, ಬಸವನಬಾಗೇವಾಡಿ ಯಿಂದ ಶಿವಾನಂದ ಪಾಟೀಲ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ, ದೇವರಹಿಪ್ಪರಗಿಯಿಂದ ಸೋಮನಗೌಡ ಪಾಟೀಲ ಸಾಸನೂರ, ಮುದ್ದೇಬಿಹಾಳದಿಂದ ಎ.ಎಸ್‌.ಪಾಟೀಲ ನಡಹಳ್ಳಿ, ಬಬಲೇಶ್ವರದಿಂದ ಎಂ.ಬಿ.ಪಾಟೀಲ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಜಿಲ್ಲೆಯ ಮತದಾರ ಮೂವರು ಪಂಚಮಸಾಲಿ ಸಮಾಜದ ವರನ್ನು (ಬಸನಗೌಡ ಪಾಟೀಲ ಯತ್ನಾಳ, ಶಿವಾನಂದ ಪಾಟೀಲ, ಎಂ.ಸಿ.ಮನಗೂಳಿ) ಶಾಸಕರನ್ನಾಗಿ ಆಯ್ಕೆ ಮಾಡಿದ್ದರೆ; ರಡ್ಡಿ ಸಮಾಜದಿಂದ ಸೋಮನಗೌಡ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿಗೆ ಅವಕಾಶ ದೊರೆತಿದೆ.

ಉಳಿದಂತೆ ಆದಿ ಬಣಜಿಗ ಸಮಾಜ ದಿಂದ ಯಶವಂತರಾಯಗೌಡ ಪಾಟೀಲ, ಕುಡು ಒಕ್ಕಲಿಗ ಸಮುದಾಯದಿಂದ ಎಂ.ಬಿ.ಪಾಟೀಲ ಪುನರಾಯ್ಕೆಯಾದರೆ, ದಶಕದ ನಂತರ ಲಂಬಾಣಿ ಸಮಾಜದ ದೇವಾನಂದ ಚವ್ಹಾಣ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಗಾಣಿಗ ಸಮಾಜ, ಅಲ್ಪಸಂಖ್ಯಾತರ ಪ್ರಾತಿನಿಧ್ಯ ಜಿಲ್ಲೆಯಿಂದ ಇಲ್ಲವಾಗಿದೆ. ಬಿಜೆಪಿ ಮೂವರು ಗಾಣಿಗರಿಗೆ ಟಿಕೆಟ್‌ ನೀಡಿದರೂ; ಯಾರೊಬ್ಬರೂ ವಿಜಯಿಗಳಾಗಿಲ್ಲ. ಕಾಂಗ್ರೆಸ್‌ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಅವಕಾಶ ನೀಡಿದ್ದರೂ; ಅಭ್ಯರ್ಥಿ ಆಯ್ಕೆಯಲ್ಲಿ ನಡೆದ ಪ್ರಮಾದದಿಂದ ಅವಕಾಶ ಕಳೆದುಕೊಂಡಿದೆ.

ಹಿಂದಿನ ಅವಧಿಯಲ್ಲಿ ಶಿವಾನಂದ ಪಾಟೀಲ ಮಾತ್ರ ಪಂಚಮಸಾಲಿ ಸಮಾಜ ಪ್ರತಿನಿಧಿಸಿದ್ದರೆ, ರಡ್ಡಿ ಸಮಾಜವನ್ನು ಎ.ಎಸ್.ಪಾಟೀಲ ನಡಹಳ್ಳಿ, ಸಿ.ಎಸ್‌.ನಾಡಗೌಡ ಪ್ರತಿನಿಧಿಸಿದ್ದರು. ರಮೇಶ ಭೂಸನೂರ ಗಾಣಿಗ ಸಮುದಾಯದ ಜನಪ್ರತಿನಿಧಿಯಾಗಿದ್ದರು.

ಕುಡು ಒಕ್ಕಲಿಗ ಸಮಾಜವನ್ನು ಎಂ.ಬಿ.ಪಾಟೀಲ, ಆದಿ ಬಣಜಿಗ ಸಮುದಾಯವನ್ನು ಯಶವಂತರಾ ಯಗೌಡ ಪಾಟೀಲ, ದಲಿತ ಬಲಗೈ ಜನಾಂಗವನ್ನು ಪ್ರೊ.ಎಚ್‌.ಆರ್‌.ಆಲಗೂರ, ಅಲ್ಪಸಂಖ್ಯಾತರ ಪ್ರತಿನಿಧಿ ಯಾಗಿ ಡಾ.ಮಕ್ಬೂಲ್‌ ಎಸ್‌.ಬಾಗವಾನ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT