ರಾಯಚೂರು: ಆರೋಗ್ಯ ಕ್ಷೇತ್ರದ ಸೇವೆ ಯಲ್ಲಿರುವ ಪ್ರತಿಯೊಬ್ಬರೂ ಕೆಲಸದಲ್ಲಿ ಆನಂದವನ್ನು ಕಂಡು ಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿ ಸಲು ಸಾಧ್ಯ ಎಂದು ಮಂಗಳೂರಿನ ಯನೆಪೊಯಾ ವಿಶ್ವವಿದ್ಯಾಲಯ ಕುಲಪತಿ ಎಂ.ವಿಜಯಕುಮಾರ ಹೇಳಿದರು.
ನಗರದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥೆಯ ರಜತ ಮಹೋತ್ಸವ ಉದ್ಘಾಟನೆ ಹಾಗೂ ವೈದ್ಯಕೀಯ ಕಾಲೇಜುಗಳ ಘಟಿಕೋತ್ಸವದಲ್ಲಿ ಮಾತನಾಡಿದರು.
ಯಶಸ್ಸು ಪಡೆಯುವುದೊಂದೇ ಗುರಿಯಾಗಬಾರದು. ಕೆಲಸವನ್ನು ಆನಂದದಿಂದ ಮಾಡುವುದರೊಂದಿಗೆ ಸಮಾಜದ ಸೇವೆಯನ್ನು ಶಕ್ತಿ ಮೀರಿ ಮಾಡುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ಆರೋಗ್ಯ ಕ್ಷೇತ್ರದಲ್ಲಿರುವವರು ಇತರರೊಂದಿಗೆ ಹೋಲಿಕೆ ಮಾಡಿ ಕೊಳ್ಳದೇ ಸೇವಾ ಕ್ಷೇತ್ರವೆಂಬುದನ್ನು ಗಮನದಲ್ಲಿಟ್ಟುಕೊಂಡು ದೃಢವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ರೆಡ್ಡಿ ಮಾತನಾಡಿ, ಪದವಿ ಪಡೆದಿರುವ ವಿದ್ಯಾರ್ಥಿಗಳು ಸುಖ ಜೀವನದ ಬಗ್ಗೆ ಯೋಚಿಸದೆ ಪೋಷಕರ ಹಾಗೂ ಕುಟುಂಬದವರ ಶ್ರಮ– ತ್ಯಾಗಗಳನ್ನು ನೆನಪಿನಲ್ಲಿಟ್ಟುಕೊಂಡು ನಿಜಜೀವನದ ಬಗ್ಗೆ ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ತಂದೆ– ತಾಯಿ ಶ್ರಮದಿಂದ ಈ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಯಶಸ್ಸಿನ ಜೀವನಕ್ಕೆ ಸೂಕ್ತವಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ಕುಟುಂಬದ ಹಾಗೂ ಸಮಾಜದ ಋಣ ತೀರಿಸುವಂತ ಕಾರ್ಯವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಜೊತೆಗೆ ಅತಿಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.
ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಟಿ.ಶ್ರೀನಿವಾಸ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ವಿಜಯಚಂದ್ರ, ಅಶೋಕ ಮಹೇಂದ್ರಕರ್, ವಿಜಯಕುಮಾರ ಇದ್ದರು.
**
ವೈದ್ಯಕೀಯ ವೃತ್ತಿಯಲ್ಲಿ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಕ್ರಿಯಾಶೀಲತೆ ಇದ್ದರೆ ಮಾತ್ರ ವೈದ್ಯಕೀಯ ರಂಗದಲ್ಲಿ ಯಶಸ್ವಿಯಾಗಲು ಸಾಧ್ಯ. – ಎಂ.ವಿಜಯಕುಮಾರ, ಮಂಗಳೂರಿನ ಯನೆಪೊಯಾ ವಿಶ್ವವಿದ್ಯಾಲಯ ಕುಲಪತಿ