ಬೆಂಗಳೂರು: ನಮಗೆ ಕೇಳಿದರೆ ಇಂದೇ ಬಹುಮತ ಸಾಬೀತುಪಡಿಸುತ್ತೇವೆ. ಆದರೆ, ಬಿಜೆಪಿಗೆ ಆ ಸಾಮರ್ಥ್ಯ ಇಲ್ಲ. ಆದರೂ ರಾಜ್ಯಪಾಲರು ಅವರನ್ನೇ ಸರ್ಕಾರ ರಚಿಸಲು ಕರೆದರು. ಇದು ಭಾರತ ಇತಿಹಾಸದ ಕಪ್ಪುಚುಕ್ಕೆ. ದೇಶದ ಯಾವುದೇ ರಾಜ್ಯಪಾಲರು ಹೀಗೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಆಪಾದಿಸಿದರು.
ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ ಬಂದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಮಣಿಪುರ, ಗೋವಾದಲ್ಲಿಯೂ ಹೀಗೆಯೇ ಆಗಿತ್ತು ಎಂದರು.
ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್–ಕಾಂಗ್ರೆಸ್ ಮೈತ್ರಿ 117 ಸದಸ್ಯರ ಸಂಖ್ಯೆ ಇತ್ತು. ನಾವು ತಕ್ಷಣ ರಾಜ್ಯಪಾಲರನ್ನು ಭೇಟಿಯಾದೆವು. ಮೂರು ಸಲ ಅವರನ್ನು ಭೇಟಿಯಾಗಿದ್ದೆವು. ಬಿಜೆಪಿ ನಾಯಕರು ಅವಕಾಶ ಕೋರುವ ಸಾಕಷ್ಟು ಮೊದಲು ನಾವು ಕೋರಿದ್ದೆವು ಎಂದರು.
ಗೋವಾ, ಮೇಘಾಲಯ, ಮಣಿಪುರದ ರಾಜ್ಯಪಾಲರುಗಳು ಸರ್ಕಾರ ರಚಿಸುವ ಆಟಕ್ಕೆ ಹೊಸ ನಿಯಮಗಳನ್ನೇ ರೂಪಿಸಿದ್ದಾರೆ. ಅದೇ ಮಾದರಿಯಲ್ಲಿ ನಾವು ರಾಜ್ಯಪಾಲರನ್ನು ಭೇಟಿಯಾದೆವು. ಆದರೆ, ನಮಗೆ ಅವಕಾಶ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಕೇಳಿದರೆ ಇಂದೇ ಬಹುಮತ ಸಾಬೀತುಪಡಿಸುತ್ತೇವೆ. ಆದರೆ, ಬಿಜೆಪಿಗೆ ಆ ಸಾಮರ್ಥ್ಯ ಇಲ್ಲ. ಆದರೂ ರಾಜ್ಯಪಾಲರು ಅವರನ್ನೇ ಸರ್ಕಾರ ರಚಿಸಲು ಕರೆದರು. ಇದು ಭಾರತ ಇತಿಹಾಸದ ಕಪ್ಪುಚುಕ್ಕೆ. ದೇಶದ ಯಾವುದೇ ರಾಜ್ಯಪಾಲರು ಹೀಗೆ ಮಾಡಿರಲಿಲ್ಲ ಎಂದು ಟೀಕಿಸಿದರು.
ಬಹುಮತ ಸಾಬೀತುಪಡಿಸಲು ಯಾವುದೇ ಮುಖ್ಯಮಂತ್ರಿಗೆ ಹೆಚ್ಚು ಅಂದ್ರೆ ಒಂದು ವಾರ ಸಮಯ ಕೊಡ್ತಾರೆ. ಆದರೆ, ಇಲ್ಲಿ ರಾಜ್ಯಪಾಲರು 15 ದಿನಗಳ ಅವಕಾಶ ಕೊಟ್ಟಿದ್ದಾರೆ. ಇದರರ್ಥ ದುರದೃಷ್ಟದ ಸಂಗತಿ. ರಾಜ್ಯದ ಮುಖ್ಯಸ್ಥರು ಸಂವಿಧಾನದ ಆಶಯ ಉಲ್ಲಂಘಿಸಿದ್ದಾರೆ ಎಂದು ದೂರಿದರು.