ಇಸ್ಲಾಮಾಬಾದ್: ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನದ ಉಗ್ರರ ಕೈವಾಡವಿದೆ ಎಂಬುದರ ಕುರಿತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಂದರ್ಶನವನ್ನು ಪ್ರಕಟಿಸಿದ್ದ ‘ಡಾನ್’ ಪತ್ರಿಕೆಯ ವಿತರಣೆಗೆ ಅಡ್ಡಿಪಡಿಸಿದ್ದನ್ನು ಅಂತರರಾಷ್ಟ್ರೀಯ ಮಾಧ್ಯಮ ಕಣ್ಗಾವಲು ಸಮಿತಿ ಖಂಡಿಸಿದೆ.
‘ಷರೀಫ್ ಅವರ ಸಂದರ್ಶನ ಪಾಕಿಸ್ತಾನ ಹಾಗೂ ಭಾರತದಲ್ಲಿ ಬಿರುಗಾಳಿ ಸೃಷ್ಟಿಸಿದ್ದು, ಅವರು, ಪಾಕಿಸ್ತಾನದ ಭದ್ರತಾ ಪಡೆಗಳ ಟೀಕೆಗೆ ತುತ್ತಾಗಿದ್ದಾರೆ. ಪ್ರಮುಖ ಇಂಗ್ಲಿಷ್ ಪತ್ರಿಕೆಯಾದ ‘ಡಾನ್’ ವಿತರಣೆಗೆ ದೇಶದಾದ್ಯಂತ ನಿರ್ಬಂಧ ಹೇರಲಾಗಿದೆ’ ಎಂದು ಸಮಿತಿ ಹೇಳಿದೆ.
‘ಸಂದರ್ಶನ ಪ್ರಕಟಿಸಿದ್ದಕ್ಕೆ ಪಾಕಿಸ್ತಾನದ ಮಿಲಿಟರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮೇ 15 ರಿಂದ ಪತ್ರಿಕೆಯ ವಿತರಣೆಗೆ ಅಡ್ಡಿಪಡಿಸಲಾಗಿದೆ. ಸಿಂಧ್ ಪ್ರಾಂತ್ಯದ ಅನೇಕ ನಗರಗಳಲ್ಲಿ, ಬಲೂಚಿಸ್ತಾನ್ ಪ್ರಾಂತ್ಯದ ಬಹುತೇಕ ಭಾಗಗಳಲ್ಲಿ ವಿತರಣೆಯನ್ನು ನಿರ್ಬಂಧಿಸಲಾಗಿದೆ’ ಎಂದು ಸಮಿತಿ ಹೇಳಿಕೆ ನೀಡಿದೆ.