ಕಾರವಾರ: ಅರಬ್ಬಿ ಸಮುದ್ರದಲ್ಲಿ ಸೋಮವಾರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೆಲವು ದಿನಗಳ ಹಿಂದಷ್ಟೇ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ‘ಸಾಗರ್’ ಹೆಸರಿನ ಚಂಡಮಾರುತ ಕ್ಷೀಣಿಸುತ್ತಿದ್ದು, ಇದು ಮತ್ತೊಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಲಕ್ಷಣವಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ.
ಕೇರಳ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಗೋವಾ ರಾಜ್ಯದ ಮೇಲೆ ಇದು ಪ್ರಭಾವ ಬೀರಲಿದ್ದು, ಇಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಮೇ 21ರಿಂದ 23ರ ವರೆಗೆ ರಾಜ್ಯದ ಕರಾವಳಿ ಭಾಗದ ಅರಬ್ಬಿ ಸಮುದ್ರದ ಮಧ್ಯ ಭಾಗಕ್ಕೆ ಮೀನುಗಾರರು ತೆರಳದಂತೆ ಎಚ್ಚರಿಕೆ ನೀಡಿದೆ.
‘ಈ ಚಂಡಮಾರುತದ ತೀವ್ರತೆ ನಮ್ಮ ಜಿಲ್ಲೆಯ ಕರಾವಳಿ ಭಾಗಕ್ಕೆ ಅಷ್ಟೊಂದು ತಟ್ಟುವುದಿಲ್ಲ. ಸಮುದ್ರದಲ್ಲಿ ಗಾಳಿಯು ಗಂಟೆಗೆ 19 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಇದು ಎಂದಿನಂತೆ ಸಾಮಾನ್ಯವಾಗಿದೆ’ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ ತಿಳಿಸಿದರು.