ನವದೆಹಲಿ: ಗೋವಾ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಗೋವಾ ಸರ್ಕಾರದ ಇತ್ತೀಚಿನ ಆದೇಶದ ಪ್ರತಿಯೊಂದಿಗೆ ಹೊಸ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ನವೀನ್ ಸಿನ್ಹಾ ಒಳಗೊಂಡ ಪೀಠ ಮುತಾಲಿಕ್ಗೆ ಸೂಚಿಸಿದ್ದು, ಮುಂದಿನ ಆಗಸ್ಟ್ ಮೊದಲ ವಾರದಲ್ಲಿ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
‘ಮುತಾಲಿಕ್ ವಿರುದ್ಧ 50 ಕ್ರಿಮಿನಲ್ ಪ್ರಕರಣಗಳಿವೆ. ಗೋವಾದಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದರಿಂದ ಅಲ್ಲಿನ ಹೈಕೋರ್ಟ್ನಲ್ಲಿಯೇ ಈ ಬಗ್ಗೆ ಮೊದಲು ಅರ್ಜಿ ಸಲ್ಲಿಸಬೇಕಿತ್ತು’ ಎಂದು ಗೋವಾ ವಾದಿಸಿದೆ.
‘ಬಹುತೇಕ ಕೇಸ್ಗಳಲ್ಲಿ ಮುತಾಲಿಕ್ ಖುಲಾಸೆಗೊಂಡಿದ್ದಾರೆ. ಹಾಗಾಗಿ, ಜೂನ್ 1ರಂದು ಅವರು ಗೋವಾ ಪ್ರವೇಶಿಸಬಹುದು’ ಎಂದು ಮುತಾಲಿಕ್ ಪರ ವಕೀಲರು ವಾದಿಸಿದ್ದಾರೆ.
ಮುತಾಲಿಕ್ ರಾಜ್ಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಗೋವಾ ಸರ್ಕಾರ ಹಲವು ಆದೇಶ ಹೊರಡಿಸಿದೆ.