ಬೆಟ್ಟದಪುರ: ಗ್ರಾಮದ ಬಳಿ ಕುಶಾಲನಗರ ರಸ್ತೆಯಲ್ಲಿ ಪ್ರಾಚೀನ ಕಾಲದ ಸುರಂಗವನ್ನು ಹೋಲುವ 20 ಅಡಿ ಆಳದ ಬಾವಿ ಪತ್ತೆಯಾಗಿದೆ.
ಬಿಎಸ್ಎನ್ಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಬಾವಿ ಪತ್ತೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಕುತೂಹಲದಿಂದ ವೀಕ್ಷಿಸಿದರು.
ಬಾವಿಯ ಸಮೀಪದಲ್ಲೇ ಬಸವೇಶ್ವರ ದೇವಸ್ಥಾನ ಹಾಗೂ ಕೆಲ ಶಾಸನಗಳು ಇವೆ. ನಿಧಿ ಇರಬಹುದೆಂದು ಕೆಲವರು ಸಂಶಯ ವ್ಯಕ್ತಪಡಿಸಿದರು. ಬೆಟ್ಟದಪುರವು ಇತಿಹಾಸ ಪ್ರಸಿದ್ಧವಾದ ತಾಣವಾಗಿದ್ದು, ಚಂಗಾಳ್ವ ರಾಜರು ಸೇರಿದಂತೆ ಹಲವಾರು ಪಾಳೇಗಾರರು ಈ ಗ್ರಾಮವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಆಳ್ವಿಕೆ ನಡೆಸಿದ್ದಾರೆ. ಹೀಗಾಗಿ, ಇದು ರಾಜರ ಕಾಲದ ಸುರಂಗ ಮಾರ್ಗವಿರಬಹುದು ಎಂದು ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದರು.
ಜಿಲ್ಲಾ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಗವಿಸಿದ್ಧಯ್ಯ ಮತ್ತು ಎನ್.ಎಲ್ ಗೌಡ ನೇತೃತ್ವದ ತಂಡ ಸ್ಥಳಕ್ಕೆ ಬಂದು ಪರಿಶೀಲಿಸಿದೆ. ‘ಇದು ಸುರಂಗವನ್ನು ಹೋಲುವ ಪ್ರಾಚೀನ ಕಾಲದ ಬಾವಿಯಾಗಿದೆ’ ಎಂದು ವರದಿ ನೀಡಿ ಎಲ್ಲ ಕುತೂಹಲಗಳಿಗೆ ತೆರೆ ಎಳೆದರು.
ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ, ಮುಂದೆ ಯಾವುದೇ ಹಾನಿಯಾಗಬಾರದೆಂಬ ಉದ್ದೇಶದಿಂದ ಬಾವಿಯನ್ನು ಮುಚ್ಚಿಸಲಾಯಿತು.
ಪ್ರಭಾರ ತಹಶಿಲ್ದಾರ್ ಪ್ರಕಾಶ್, ಉಪತಹಶಿಲ್ದಾರ್ ಕುಬೇರ್, ಸಿಪಿಐ ಪ್ರದೀಪ್, ಬೆಟ್ಟದಪುರ ಪಿಎಸ್ಐ ಡಿ.ಆರ್ ಜಯಸ್ವಾಮಿ, ಎಎಸ್ಐ ರುದ್ರಪ್ಪಗೌಡ, ನಟರಾಜು, ಸಿಬ್ಬಂದಿ ಮಧುಕುಮಾರ್, ಗಣೇಶ್, ಸ್ವಾಮಿ, ಮಲ್ಲೇಶ್ ಇದ್ದರು.