ಹುಬ್ಬಳ್ಳಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಸಾಲ ಮನ್ನಾ ವಿಷಯದಲ್ಲಿ ‘ಯೂ ಟರ್ನ್’ ತೆಗೆದುಕೊಂಡಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.
ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಕಷ್ಟ ಎಂದು ಹೇಳುವ ಮೂಲಕ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಹೇಳಿದಂತೆ ನಡೆದುಕೊಳ್ಳದೇ 'ಯೂ ಟರ್ನ್' ತೆಗೆದುಕೊಳ್ಳುವುದನ್ನು ಹಿಂದಿನಂತೆಯೇ ಮುಂದುವರಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸರ್ಕಾರ ರಚನೆ ವಿಷಯದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಜೆಡಿಎಸ್ ಮುಂದೆ ಮಂಡಿಯೂರಿ ಕುಳಿತುಕೊಂಡಿರುವುದನ್ನು ನೋಡಿದರೆ, ಇದು ಆ ಪಕ್ಷಕ್ಕೆ ಒದಗಿದ ಅಧೋಗತಿಯನ್ನು ತೋರಿಸುತ್ತದೆ. ಹೊಂದಾಣಿಕೆ ಬದಲು ಜೆಡಿಎಸ್ನಲ್ಲಿ ಕಾಂಗ್ರೆಸ್ ವಿಲೀನಗೊಳಿಸುವದೇ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ವಿಜಯಪುರ ಜಿಲ್ಲೆಯಲ್ಲಿ ದೊರೆತಿರುವ ವಿವಿ ಪ್ಯಾಟ್ಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಶೆಟ್ಟರ್ ಉತ್ತರಿಸಿದರು.