ಬೆಂಗಳೂರು, ಮೇ 22– ನಾಳೆ ಬೆಳಿಗ್ಗೆ 10 ಗಂಟೆಗೆ ಸೇರಲಿರುವ ವಿಧಾನಮಂಡಲದ ಕಾಂಗ್ರೆಸ್ ಪಕ್ಷ, ತನ್ನ ನೂತನ ನಾಯಕನನ್ನು ಸರ್ವಾನುಮತದಿಂದ ಆರಿಸುವ ಸಂಭವದ ಸೂಚನೆಗಳು ಇಂದು ಸಂಜೆಯ ಹೊತ್ತಿಗೆ ಕಂಡುಬಂದಿತಾದರೂ ಮಧ್ಯರಾತ್ರಿ ದೊರೆತ ಸೂಚನೆಗಳ ರೀತ್ಯ ಈ ಬಗ್ಗೆ ಖಾತರಿಯೇನೂ ಇಲ್ಲ.
ನಾಯಕ ಸ್ಥಾನಕ್ಕೆ ಸ್ಪರ್ಧಿಗಳಾದ ಸಚಿವ ಶ್ರೀ ವೀರೇಂದ್ರ ಪಾಟೀಲ್ ಹಾಗೂ ಸಚಿವ ಶ್ರೀ ಬಿ.ಡಿ. ಜತ್ತಿ ಅವರ ಬೆಂಬಲಿಗರ ವಲಯಗಳಲ್ಲಿನ ಒಂದು ವಾರದ ಬಿರುಸಿನ ಚಟುವಟಿಕೆಗಳು ಈ ಸಂಭವದತ್ತ ಸಾಗಿದರೂ ಒಪ್ಪಂದದ ಸ್ವರೂಪ ಹಾಗೂ ಅನುಸರಿಸುವ ವಿಧಾನಗಳ ಬಗ್ಗೆ ಈ ಎರಡು ಗುಂಪುಗಳ ನಿಲುವುಗಳು ಬೇರೆ ಬೇರೆಯಾಗಿವೆ.
ಒಪ್ಪಂದ ಸಾಧ್ಯವಾಗದಿದ್ದರೆ ಸ್ಪರ್ಧೆಯನ್ನು ಎದುರಿಸಲು ಎರಡೂ ಗುಂಪುಗಳು ಸಿದ್ಧವಾಗಿವೆ.
**
ಸ್ಪರ್ಧಿ ಆಗಲು ಸಚಿವ ವೀರೇಂದ್ರರ ಸಮ್ಮತಿ
ಬೆಂಗಳೂರು, ಮೇ 22– ಗುರುವಾರ ನಡೆಯುವ ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರ ಚುನಾವಣೆಗೆ ಉಮೇದುವಾರರಾಗಲು ಲೋಕೋಪಯೋಗಿ ಇಲಾಖೆ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಜೆ ಒಪ್ಪಿಕೊಂಡರು.
‘ಅರಿಸಿ ಬಂದರೆ ಎಲ್ಲರ ಸಹಕಾರದೊಂದಿಗೆ ಶುದ್ಧ, ದಕ್ಷ ಸರ್ಕಾರ, ಆಡಳಿತದ ಭರವಸೆ ನೀಡುತ್ತೇನೆ’ ಎಂದು ಕುಮಾರ ಕೃಪಾ ಬಳಿಯಿರುವ ತಮ್ಮ ಮನೆಯ ಉದ್ಯಾನದಲ್ಲಿ ನೆರೆದ ಶಾಸಕರ ಭಾರಿ ಸಭೆಯಲ್ಲಿ ಹೇಳಿದರು.