ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ನಗರದ ಹಿರಿಯ ಕಾರ್ಮಿಕ ಪರಿವೀಕ್ಷಕ ಮತ್ತು ಬಂಗಾರಪೇಟೆ ಪುರಸಭೆ ಆರೋಗ್ಯ ಪರಿವೀಕ್ಷಕರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ವಿಜಯನಗರ ಐಸ್ ಕ್ರೀಂ ಪಾರ್ಲರ್ವೊಂದರಲ್ಲಿ ಕಾರ್ಮಿಕರ ದಾಖಲೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಿ ಅಂಗಡಿ ಮಾಲೀಕರಿಂದ ₹ 2,500 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಮಂಜುನಾಥ ಮತ್ತು ಹಣ ಪಡೆಯಲು ಸಹಕರಿಸಿದ ಮಧ್ಯವರ್ತಿ ಚಂದ್ರಪ್ಪ ಅವರನ್ನು ಬಂಧಿಸಲಾಗಿದೆ.
ಪಾರ್ಲರ್ನಲ್ಲಿ ಆರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಬಂಗಾರಪೇಟೆ ಪುರಸಭೆ ಆರೋಗ್ಯ ಇನ್ಸ್ಪೆಕ್ಟರ್ ಸುಬ್ರಮಣಿ, ಪ್ಲಂಬಿಂಗ್ ಗುತ್ತಿಗೆದಾರರೊಬ್ಬರ ಲೈಸೆನ್ಸ್ ನವೀಕರಣ ಮಾಡಲು ₹ 2,640 ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಈ ಅಧಿಕಾರಿ ಗುತ್ತಿಗೆದಾರರಿಂದ ₹ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.