ಬೆಂಗಳೂರು: ‘ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್’ (ಜಿತೊ) ಬೆಂಗಳೂರು ವಿಭಾಗವು ಹತ್ತು ವರ್ಷ ಪೂರೈಸಿದ ಪ್ರಯುಕ್ತ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಜಿತೊ ಗ್ರೋತ್ ಸಮ್ಮಿತ್’ ಎಂಬ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿತೊ ಸದಸ್ಯರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಮಾರ್ಗಸೂಚಿ ಬಿಡುಗಡೆ ಮಾಡಿದರು. ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಶುಕ್ರವಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅನುಪಮ್ ಖೇರ್, ಸೋನು ಸೂದ್ ಸೇರಿದಂತೆ ಹಲವು ಸಿನಿಮಾ ನಟರು ಪಾಲ್ಗೊಳ್ಳಲಿದ್ದಾರೆ.
‘ಸಮಾಜದ ಸಂಕೀರ್ಣ ಅಭಿವೃದ್ಧಿಯಲ್ಲಿ ನಮ್ಮ ಸಂಸ್ಥೆಯ ಪಾತ್ರವನ್ನು ಪ್ರತಿಬಿಂಬಿಸುವುದು ಹಾಗೂ ಸಂಸ್ಥೆಯ ಬೆಳವಣಿಗೆಗೆ ಕಾರಣರಾದವರನ್ನು ಒಂದೇ ತಾಣದಲ್ಲಿ ಸೇರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಜಿತೊ ನಿರ್ವಹಣಾ ಮಂಡಳಿ ಸದಸ್ಯ ಸಜ್ಜನ್ ರಾವ್ ಮೆಹ್ತಾ ಹೇಳಿದರು.
‘ಮೂರು ದಿನಗಳಲ್ಲಿ ಹಲವು ವಿಚಾರ ಸಂಕಿರಣಗಳ ಜತೆಗೆ ಸಾಧಕರ ಜತೆ ಸಂವಾದವೂ ಇರುತ್ತದೆ. ಭಾನುವಾರ ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ’ ಎಂದು ವಿವರಿಸಿದರು.