ಆನವಟ್ಟಿ: 7ನೇ ವೇತನ ಆಯೋಗ ಜಾರಿ ಹಾಗೂ ಜಿಡಿಎಸ್ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೈಗೊಂಡ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ನವೋದಯ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರವೇಶ ಬಯಸಿ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳ ಮಾಹಿತಿ ಅಂಚೆ ಮುಖಾಂತರ ಬರುವುದರಿಂದ, ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು. ಹಾಗಾಗಿ ಅಂಚೆ ಜಿಡಿಎಸ್ ನೌಕರರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ನವೋದಯ ತರಬೇತಿ ಶಿಕ್ಷಕ ತುಂಗಪ್ಪ ತಿಳಿಸಿದರು.
ನೌಕರರ ಮುಷ್ಕರ ಇರುವುದರಿಂದ ಸಾಮಾನ್ಯ ಟಪಾಲು, ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥ ಪ್ರಭುಲಿಂಗಪ್ಪ ಅಸಮಧಾನ ವ್ಯಕ್ತಪಡಿಸಿದರು.
ಕಳೆದ ತಿಂಗಳ ಸಂಧ್ಯಾ ಸುರಕ್ಷಾ ಹಣ ಬಂದಿಲ್ಲ. ಅಂಚೆ ಕಚೇರಿಗೆ ಹೋಗಿ ಕೇಳಿದರೆ ಅಂಚೆ ಜಿಡಿಎಸ್ ನೌಕರರ ಮುಷ್ಕರ ಇದೆ. ಅದು ಮುಗಿದ ಮೇಲೆ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು ಎಂದು ಫಲಾನುಭವಿ ಫಕ್ಕಿರಮ್ಮ ಅಳಲು ತೋಡಿಕೊಂಡರು.
ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ. ಕೂಡಲೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ವಲಯ ಕಾರ್ಯದರ್ಶಿ ಎಚ್. ರವೀಂದ್ರನಾಥ ಅಗ್ರಹಿಸಿದರು.