ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ಇರುವ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಕಸದ ರಾಶಿಯೇ ಬಿದ್ದಿದ್ದು, ನಿವಾಸಿಗರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಇಲ್ಲಿ ಸುಮಾರು 30ಕ್ಲೂ ಹೆಚ್ಚಿನ ಕುಟುಂಬಗಳು ವಾಸವಾಗಿವೆ. ಈ ಜಾಗದಲ್ಲಿ ಪುರಸಭೆಯವರು ಕಸ ಸಂಗ್ರಹಣೆಗೆ ಯಾವುದೇ ಡಬ್ಬಗಳನ್ನು ಇಟ್ಟಿಲ್ಲ. ಆದ್ದರಿಂದ ಮನೆಯಲ್ಲಿ ಬಳಕೆಯಾದ ತ್ಯಾಜ್ಯವನ್ನು ಇಲ್ಲಿಯೇ ಹಾಕುತ್ತಿದ್ದಾರೆ.
ಪುರಸಭೆ ಸಿಬ್ಬಂದಿ ದಿನನಿತ್ಯ ಈ ತ್ಯಾಜ್ಯವನ್ನು ವಿಲೇವರಿ ಮಾಡಿದರೆ ಯಾವುದೇ ತೊಂದರೆಯಿಲ್ಲ. ತ್ಯಾಜ್ಯವನ್ಮು ವಾರಗಟ್ಟಲೆ ಅಲ್ಲೇ ಬಿಡುವುದರಿಂದ ಅದು ಕೊಳೆತು ನಾರುತ್ತಿದೆ. ಸೊಳ್ಳೆಗಳು ಹೆಚ್ಚಾಗುತ್ತವೆ, ಅಲ್ಲದೆ ನಾಯಿಗಳ ಕಾಟ
ಹೆಚ್ಚಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ವಸತಿ ಗೃಹದ ಆವರಣದಲ್ಲಿರುವ ಕಸವನ್ನು ಶೀಘ್ರವೇ ವಿಲೇವಾರಿ ಮಾಡಿಸುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ತಿಳಿಸಿದರು.