ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆಯ ಹೊಸ್ತಿಲಲ್ಲಿ ಜಿಲ್ಲಾ ಆಸ್ಪತ್ರೆ

ಹದಗೆಟ್ಟಿದ್ದ ಆಸ್ಪತ್ರೆಗೆ ಈಗ ಹೊಸ ರೂಪ, ಅಭಿವೃದ್ಧಿ ಕಾಣುತ್ತಿರುವ ಸೌಲಭ್ಯ–ಸೇವೆ– ಸ್ವಚ್ಛತೆ
Last Updated 26 ಮೇ 2018, 13:34 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತೆ, ಸೇವೆ ಮತ್ತು ಸೌಲಭ್ಯಗಳಲ್ಲಿ ಕಂಡು ಬರುತ್ತಿರುವ ಸುಧಾರಣೆಯು ಹೊಸ ನಿರೀಕ್ಷೆ ಮೂಡಿಸಿದೆ. ‘ಸರ್ಕಾರಿ ಆಸ್ಪತ್ರೆ’ ಎಂದು ಮೂಗು ಮುರಿಯುವವರೂ ಇತ್ತ ಚಿತ್ತ ಹರಿಸುತ್ತಿದ್ದಾರೆ.

ಶೇ 65ರಷ್ಟು ಸಿಬ್ಬಂದಿ ಕೊರತೆ ನಡುವೆಯೂ ಮರಣ ಪ್ರಮಾಣ (ಹೆರಿಗೆ ಸಂದರ್ಭ ತಾಯಿ, ಮಗು) ಇಳಿಮುಖ
ಗೊಳ್ಳುತ್ತಿದೆ. ಸ್ವಚ್ಛತೆ, ಸೇವೆ ಹಾಗೂ ಸೌಲಭ್ಯ ಸುಧಾರಣೆಯ ಬಗ್ಗೆ ರೋಗಿಗಳೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 400 ಹಾಸಿಗೆಗಳ ಆಸ್ಪತ್ರೆಗೆ ಪ್ರತಿನಿತ್ಯ 500ಕ್ಕೂ ಹೆಚ್ಚು ಹೊರರೋಗಿ ಹಾಗೂ 100 ಒಳರೋಗಿಗಳು ಬರುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಗುಟ್ಕಾ, ಬೀಡಾ, ಪಾನ್ ತಿಂದು ಉಗುಳಿದ ಕಲೆಗಳು, ಹದಗೆಟ್ಟ ವಾರ್ಡ್‌ಗಳು, ಹೊಲಸಿನಿಂದ ಕೂಡಿದ್ದ ಶೌಚಾಲಯ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ಪರಿಣಾಮ ಇಲ್ಲಿನ ವಾತಾವರಣ ಕೆಟ್ಟು
ಹೋಗಿತ್ತು. ಅಲ್ಲಲ್ಲಿ ಕಸ ಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ‘ಸರ್ಕಾರಿ ಆಸ್ಪತ್ರೆ’ಯು ದೇವರಿಗೇ ಪ್ರೀತಿ ಎನ್ನುವಂತಾಗಿತ್ತು.

ಬದಲಾವಣೆ ತಂದ ರೌಂಡ್ಸ್: 2017ರ ಜುಲೈ 12ರಂದು ಇಲ್ಲಿನ ಜಿಲ್ಲಾ ಶಸ್ತ್ರಚಿಕಿತ್ಸರಾದ ಡಾ. ಟಿ.ನಾಗರಾಜ ನಾಯ್ಕ ಪ್ರತಿ ನಿತ್ಯ 2 ರಿಂದ 3 ಬಾರಿ ರೌಂಡ್ಸ್ ಆರಂಭಿಸಿದ್ದಾರೆ. ಪ್ರತಿ ವಾರ್ಡ್, ಘಟಕಗಳಿಗೆ ಭೇಟಿ ನೀಡುತ್ತಿದ್ದಾರೆ. ವಾರ್ಡ್, ಐಸಿಯು, ಆವರಣಗಳು ಮಾತ್ರವಲ್ಲ, ಶೌಚಾಲಯದ ಸ್ವಚ್ಛತೆ ಬಗ್ಗೆಯೂ ಖುದ್ದು ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

‘ಡಿ.ಎಸ್ (ಜಿಲ್ಲಾ ಶಸ್ತ್ರಚಿಕಿತ್ಸಕ) ಅವರು ಕೇವಲ ರೌಂಡ್ಸ್‌ ಮಾತ್ರವಲ್ಲ, ಆಗಾಗ ದಿಢೀರ್‌ ಬಂದು ಪರಿಶೀಲಿಸುತ್ತಾರೆ. ಹಾಜರಿ ಪುಸ್ತಕ, ರೆಕಾರ್ಡ್‌ಗಳು, ದಾಸ್ತಾನು, ರೋಗಿಗಳಿಗೆ ಸೇವೆ, ಸೌಲಭ್ಯಗಳ ಪರಿಶೀಲನೆ ಮಾಡುತ್ತಾರೆ. ಶೌಚಾಲಯದ ಸ್ವಚ್ಛತೆಯನ್ನೂ ಖುದ್ದು ಪರಿಶೀಲಿಸುತ್ತಾರೆ. ಹೀಗಾಗಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗುವುದಲ್ಲದೇ, ಕರ್ತವ್ಯವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಿಬ್ಬಂದಿ ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ: ಆಸ್ಪತ್ರೆಯ 29 ಕಡೆಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ, ಮೂಲಕ ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಯುತ್ತದೆ’ ಎಂದೂ ಆ ಸಿಬ್ಬಂದಿ ತಿಳಿಸಿದರು.

‘ಗುಟ್ಕಾ, ಬೀಡಾ, ಪಾನ್ ಬಗ್ಗೆ ಸಿಬ್ಬಂದಿಯನ್ನು ತಪಾಸಣೆ ಮಾಡಲು ಆರಂಭಿಸಿದೆವು. ಚಟ ಬಿಡುವಂತೆ ಮನವಿ ಮಾಡಿದೆವು. ಆ ಬಳಿಕ ರೋಗಿಗಳ ಜೊತೆ ಬರುವವರಲ್ಲಿ ಮನವಿ ಮಾಡುತ್ತಿದ್ದೇವೆ. ಇದರಿಂದ ಶೇ 75ರಷ್ಟು ಹೊಲಸು ಕಡಿಮೆಯಾಗಿದೆ. ಸಂಪೂರ್ಣ ಸ್ವಚ್ಛತೆಗೆ ಪ್ರಯತ್ನ ನಡೆದಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ನಾಗರಾಜ ತಿಳಿಸಿದರು.

ಭದ್ರತೆ:  ರಾತ್ರಿ ಇತರ ಎಲ್ಲ ಗೇಟುಗಳನ್ನು ಹಾಕಿ, ತುರ್ತು ನಿಗಾ ಘಟಕದ ಪ್ರವೇಶ ದ್ವಾರ ಮಾತ್ರ ತೆರೆದಿಡುತ್ತೇವೆ. ಹೀಗಾಗಿ, ಪ್ರತಿಯೊಬ್ಬರ ಚಲನವಲನವು ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗುತ್ತದೆ. ಇದರಿಂದ ಕಳವು ಮತ್ತಿತರ ಘಟನೆಗಳು ತಕ್ಷಣವೇ ಬೆಳಕಿಗೆ ಬರುತ್ತಿದೆ.

‘ಇನ್ನೂ ಎಲ್ಲ ಸೌಲಭ್ಯಗಳು ಸಮರ್ಪಕವಾಗಿಲ್ಲ. ಆದರೆ, ಸಿಬ್ಬಂದಿ ಸಹಕಾರದಿಂದ ಹಂತ ಹಂತವಾಗಿ ಸುಧಾರಣೆ ನಡೆದಿದೆ. ರಕ್ತ ವಿದಳನ ಘಟಕ, ಸಿ.ಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಆರಂಭಗೊಳ್ಳಬೇಕಿದೆ. ಇದರೊಂದಿಗೆ ಜನೌಷಧ ಮಳಿಗೆ, ಕುಡಿಯುವ ನೀರಿನ ಘಟಕ, ಪಾರ್ಕಿಂಗ್ ಸೌಲಭ್ಯ, ಸಹಾಯವಾಣಿ, ಕ್ಯಾಂಟೀನ್ ಮತ್ತಿತರ ಸೌಲಭ್ಯಗಳಿವೆ. ಸ್ವತಃ ವೈದ್ಯರಾದ ಜಿಲ್ಲಾಧಿಕಾರಿ ಅವರ ಮುತುವರ್ಜಿ, ಜನಪ್ರತಿನಿಧಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ’ ಎಂದು ಡಾ.ಟಿ. ನಾಗರಾಜ ನಾಯ್ಕ ಅವರು ವಿವರಿಸಿದರು.

ಏಜೆಂಟ್‌ಗಳಿಗೆ ಎಚ್ಚರಿಕೆ

‘ರೌಂಡ್ಸ್‌’ ಸಂದರ್ಭದಲ್ಲಿ ಲೋಪ ಕಂಡುಬಂದರೆ, ತಿಳಿ ಹೇಳುತ್ತೇವೆ. ತಪ್ಪು ಮುಂದುವರಿದರೆ ‘ಮೆಮೋ’ ನೀಡುತ್ತೇವೆ. ಆ ಬಳಿಕ ಶಿಸ್ತುಕ್ರಮ ಕೈಗೊಳ್ಳುತ್ತವೆ. ‘ಖಾಸಗಿ’ ಜೊತೆ ಶಾಮೀಲಾದ ಸಿಬ್ಬಂದಿಯನ್ನು ವಜಾ ಮಾಡಿ ಸರ್ಕಾರ ಆದೇಶಿಸಿದೆ. ಮಧ್ಯವರ್ತಿಗಳು (ಏಜೆಂಟರು) ಸಾಕ್ಷಿ ಸಹಿತ ಸಿಕ್ಕಿಬಿದ್ದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ. ಇಂತಹ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಅವರು ಗುತ್ತಿಗೆ ಸಿಬ್ಬಂದಿ ಸಂಬಳ ಹೆಚ್ಚಳ ಮಾಡಿಸುವ ಜೊತೆಗೆ ಹಲವು ಬಗೆಯ ಸಹಕಾರ ನೀಡಿದ್ದಾರೆ ಎಂದು ನಾಗರಾಜ ನಾಯ್ಕ ತಿಳಿಸಿದರು.

ರಕ್ತ ನಿಧಿ ಹಾಗೂ ಆಸ್ಪತ್ರೆಗೆ ಅಭಿವೃದ್ಧಿಗೆ ಗೆ ಶಾಲಾ–ಕಾಲೇಜು, ಸಂಘ–ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಅಗತ್ಯ
– ಡಾ.ಟಿ. ನಾಗರಾಜ ನಾಯ್ಕ, ಜಿಲ್ಲಾ ಶಸ್ತ್ರಚಿಕಿತ್ಸಕ
**

ಹಿಂದೆಲ್ಲ ವಾರ್ಡ್‌ಗಳಲ್ಲಿ ರೋಗಿಗಳು ಉಳಿದು ಕೊಳ್ಳುವುದು ಕಷ್ಟವಾಗಿತ್ತು. ಈಗ ಸ್ವಚ್ಛತೆ ಇದೆ. ದಾದಿಯರೂ ಉತ್ತಮ ಸೇವೆ ನೀಡುತ್ತಿದ್ದಾರೆ
ಸಂಗವ್ವ, ತವರಮೆಳ್ಳಿಹಳ್ಳಿ
**
ನಾವು ಹಲವಾರು ವರ್ಷಗಳಿಂದ ಆಸ್ಪತ್ರೆಗೆ ಬರುತ್ತಿದ್ದೇವೆ. ಆದರೆ, ಕಳೆದ ಆರು ತಿಂಗಳಲ್ಲಿ ಶೇ 75ರಷ್ಟು ಸುಧಾರಣೆ ಆಗಿದೆ
ಭೀಮನಗೌಡ, ಕಬ್ಬೂರು
**
ಮೊದಲೆಲ್ಲ ಆಸ್ಪತ್ರೆಯಲ್ಲಿ ವಾಸನೆ ಬಂದು, ಅಸಹ್ಯವಾಗುತ್ತಿತ್ತು. ಈಗ ಸ್ವಚ್ಛತೆ ಇದೆ. ಜನರೂ, ಸ್ವಚ್ಛತೆ ಕಾಪಾಡಲು ಸಹಕರಿಸಬೇಕು
– ಶಾಂತನಗೌಡ ಸಣ್ಣಗೌಡ ಬಡಮಲ್ಲಿ, ಹಾನಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT