ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಗೆ ಬೀಳದ ‘ಫ್ಲೈಯಿಂಗ್‌ ಸ್ಕ್ವಾಡ್‌’!

ಆರ್‌ಸಿಯು ಪದವಿ ಪರೀಕ್ಷೆ l ಕೇಂದ್ರಗಳಿಗೆ ಭೇಟಿ ನೀಡದ ಅಕ್ರಮಗಳನ್ನು ತಡೆಯುವ ತಂಡ
Last Updated 27 ಮೇ 2018, 8:36 IST
ಅಕ್ಷರ ಗಾತ್ರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಒಂದು ವಾರದಿಂದ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಇದುವರೆಗೆ ಯಾವುದೇ ಪರೀಕ್ಷಾ ಕೇಂದ್ರಕ್ಕೆ ಫ್ಲೈಯಿಂಗ್‌ ಸ್ಕ್ವಾಡ್‌ಗಳು ಭೇಟಿ ನೀಡಿಲ್ಲ ಎನ್ನುವ ವಿಷಯ ತಿಳಿದು ಬಂದಿದೆ.

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ 300ಕ್ಕೂ ಹೆಚ್ಚು ಕಾಲೇಜುಗಳು ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಟ್ಟಿವೆ. ಇಲ್ಲಿ ಬಿ.ಎ, ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಸ್ಸಿ (ಕಂಪ್ಯೂಟರ್‌ ಸೈನ್ಸ್‌), ಬಿ.ಎಸ್‌.ಡಬ್ಲು ವಿಭಾಗಗಳ ಸೆಮಿಸ್ಟರ್‌ ಪರೀಕ್ಷೆಗಳು ಇದೇ ತಿಂಗಳ 20ರಿಂದ ಆರಂಭವಾಗಿದ್ದು, 40,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

‘ಪರೀಕ್ಷೆಗಳು ಆರಂಭವಾಗಿ ಒಂದು ವಾರ ಕಳೆಯಿತು. ಹಲವು ಕೋರ್ಸ್‌ಗಳ ಪರೀಕ್ಷೆಗಳು ಅಂತಿಮ ಹಂತಕ್ಕೆ ಬಂದು ತಲುಪಿವೆ. ಇದುವರೆಗೆ ನಮ್ಮ ಪರೀಕ್ಷಾ ಕೇಂದ್ರಕ್ಕೆ ಯಾವುದೇ ಫ್ಲೈಯಿಂಗ್‌ ಸ್ಕ್ವಾಡ್‌ ಬಂದಿಲ್ಲ. ವಾಸ್ತವದಲ್ಲಿ ಸ್ಕ್ವಾಡ್‌
ಗಳನ್ನು ಈ ಸಲ ರಚಿಸಿಯೇ ಇಲ್ಲ. ಪರೀಕ್ಷಾ ಕೇಂದ್ರದಲ್ಲಿರುವ ಮೇಲ್ವಿಚಾರಕರು, ಪರಿವೀಕ್ಷಕರೇ ಪರೀಕ್ಷಾ ಅಕ್ರಮ
ಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಇದೇ ರೀತಿಯ ಅಭಿಪ್ರಾಯವನ್ನು ಹಲವು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ವ್ಯಕ್ತಪಡಿಸಿದ್ದಾರೆ.

‘ಪ್ರತಿ ವರ್ಷ ಪರೀಕ್ಷೆಗಳು ಆರಂಭಗೊಳ್ಳುವ ಒಂದು ವಾರ ಮೊದಲು ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗು
ತ್ತಿತ್ತು. ಪ್ರತಿ ಕಾಲೇಜಿನ ಹಿರಿಯ ಉಪನ್ಯಾಸಕರನ್ನು ಸೇರಿಸಿಕೊಂಡು, 4–5 ಸದಸ್ಯರ ತಂಡಗಳನ್ನು ರಚಿಸ
ಲಾಗುತ್ತಿತ್ತು. ಆದರೆ, ಈ ಸಲ ಇಂತಹ ಯಾವ ತಂಡಗಳನ್ನೂ ರಚಿಸಲಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಕಾರಣವೇನು?: ವಿಶ್ವವಿದ್ಯಾಲಯದ ಹಿರಿಯ ಆಡಳಿತಗಾರರಲ್ಲಿ ಸಮನ್ವಯ ಕೊರತೆ ಕಾಡುತ್ತಿದೆ. ಇದರ ಪರಿಣಾಮ
ವಾಗಿ ನಿಯಮಿತವಾಗಿ ನಡೆಯಬೇಕಾದ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿಲ್ಲ. ಎಲ್ಲವೂ ಕಾಟಾಚಾರಕ್ಕೆ ಎನ್ನುವಂತೆ ನಡೆಯುತ್ತಿದೆ. ಫ್ಲೈಯಿಂಗ್‌ ಸ್ಕ್ವಾಡ್‌ ರಚಿಸುವ ಬಗ್ಗೆ ಯಾರೂ ಗಮನಹರಿಸಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ‘ಅತ್ಯಂತ ಕಡಿಮೆ ಭತ್ಯೆ ನೀಡುತ್ತಿರುವುದರಿಂದ ಸ್ಕ್ವಾಡ್‌ ತಂಡದ ಸದಸ್ಯರಾಗಲೂ ಹಿರಿಯ ಉಪನ್ಯಾಸಕರು ಬಯಸುತ್ತಿಲ್ಲ. ತಂಡದ ಸದಸ್ಯರಿಗೆ ದಿನಕ್ಕೆ ₹ 550 ಹಾಗೂ ಮುಖ್ಯಸ್ಥರಿಗೆ ₹ 600 ನೀಡಲಾಗುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ದಿನದ ಊಟ, ತಿಂಡಿ ಹಾಗೂ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎನ್ನುವುದು ಹಿರಿಯ ಉಪನ್ಯಾಸಕರ ಅಳಲು.

ಭತ್ಯೆಯನ್ನು ಹೆಚ್ಚಿಸುವಂತೆ ಕೆಲವು ತಿಂಗಳ ಹಿಂದೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗಮನ ಸೆಳೆಯಲಾಗಿತ್ತು. ಆದರೆ, ಭತ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಹೀಗಾಗಿ ಹಿರಿಯ ಉಪನ್ಯಾಸಕರು ಸದಸ್ಯರಾಗಲು ಹಿಂದೇಟು ಹಾಕಿದ್ದಾರೆ. ಸ್ಕ್ವಾಡ್‌ ರಚಿಸುವ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೂ ತಂದಿಲ್ಲ ಎನ್ನಲಾಗುತ್ತಿದೆ.

ತಂಡ ರಚಿಸಿದ್ದೇವೆ

ಉಪನ್ಯಾಸಕರ ಆರೋಪವನ್ನು ತಳ್ಳಿ ಹಾಕಿರುವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ರಂಗರಾಜ ವನದುರ್ಗ ಅವರು, ‘ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಿದ್ದೇವೆ. ಆದರೆ, ಅವು ಇದುವರೆಗೆ ಎಲ್ಲೆಲ್ಲಿ ಭೇಟಿ ನೀಡಿವೆ, ಎಷ್ಟು ಅಕ್ರಮಗಳನ್ನು ತಡೆದಿವೆ ಎನ್ನುವ ಮಾಹಿತಿ ನನ್ನ ಬಳಿಯಿಲ್ಲ. ಕೆಲವು ಸ್ಕ್ವಾಡ್‌ ಸದಸ್ಯರು ತಮ್ಮ ಕಾಲೇಜು ಕೆಲಸದ ಒತ್ತಡದಲ್ಲಿ ಇದ್ದುದರಿಂದ ಇದುವರೆಗೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಕ್ಕಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT