ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ: ಕರ್ನಾಟಕ ಬಂದ್‌ ಅನುಮಾನ?

Last Updated 27 ಮೇ 2018, 15:16 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತ ಸಮುದಾಯಕ್ಕೆ ದ್ರೋಹ ಬಗೆದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವರ್ತನೆ ಖಂಡಿಸಿ ಇದೇ 28ರಂದು ರಾಜ್ಯದ ರೈತ ಸಮುದಾಯ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‌ ಆಚರಿಸಬೇಕು’ ಎಂದು ಬಿಜೆಪಿ ಕರೆ ನೀಡಿದೆ. ಬಂದ್‌ಗೆ ಹೆಚ್ಚಿನ ಸಂಘಟನೆಗಳು ಬೆಂಬಲ ನೀಡಿಲ್ಲ. ಹಾಗಾಗಿ, ‘ಕರ್ನಾಟಕ ಬಂದ್‌’ ನಡೆಯುವುದು ಅನುಮಾನ.

‘ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸದನದಲ್ಲಿ ಶುಕ್ರವಾರ ಹೇಳಿದ್ದರು. ‘ಸಾಲ ಮನ್ನಾ ಮಾಡದಿದ್ದರೆ ರೈತರು ಬಂದ್‌ ನಡೆಸುತ್ತಾರೆ ಎಂದು ಹೇಳಿದ್ದೆ. ಬಂದ್‌ಗೆ ನಾನು ಕರೆ ನೀಡಿರಲಿಲ್ಲ’ ಎಂದು ಅವರು ಶನಿವಾರ ಹೇಳಿದ್ದರು.

‘ಸಾಲ ಮನ್ನಾ ಆಗುವವರೆಗೆ ಯಡಿಯೂರಪ್ಪ ಸುಮ್ಮನೆ ಕೂರುವವರಲ್ಲ. ರೈತರಿಗೆ ಮೋಸ ಮಾಡಿರುವ ಕುಮಾರಸ್ವಾಮಿ ಮತ್ತೊಮ್ಮೆ ವಚನಭ್ರಷ್ಟರಾಗಿದ್ದಾರೆ. ಹೀಗಾಗಿ ಸ್ವಯಂಪ್ರೇರಿತ ಬಂದ್‌ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಂದ್‌ಗೆ ನಮ್ಮ ಬೆಂಬಲವಿಲ್ಲ. ರೈತರಿಗೆ ಸಾಲ ಹೊರೆ ಆಗಿದೆ. ಮೇ 31ರಂದು ಸಂಘದ ಸಭೆ ಕರೆದಿದ್ದೇವೆ. ಅಲ್ಲಿಯೇ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ರೈತ ಸಂಘ– ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ಸೋಮವಾರ ಕರೆ ನೀಡಿರುವ ಬಂದ್‌ಗೆ ನಮ್ಮ ಬೆಂಬಲವಿಲ್ಲ. 3–4 ದಿನಗಳಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದೇವೆ. ರೈತರ ಸಾಲ ಮನ್ನಾ ಬಗ್ಗೆ ಅವರ ತೀರ್ಮಾನ ಕೇಳಲಿದ್ದೇವೆ. ಬಳಿಕವೇ ಹೋರಾಟದ ಬಗ್ಗೆ ಯೋಚಿಸುತ್ತೇವೆ’ ಎಂದಿದ್ದಾರೆ.

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ‘ಯಡಿಯೂರಪ್ಪ ಅವರಿಗಿಂತಲೂ ರೈತರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದೇವೆ. ಸೋಮವಾರದ ಬಂದ್‌ ಬಗ್ಗೆ ನಮಗೆ ಗೊತ್ತಿಲ್ಲ. ಅದಕ್ಕೆ ನಮ್ಮ ಬೆಂಬಲವೂ ಇಲ್ಲ’ ಎಂದಿದ್ದಾರೆ.

ಬಂದ್‌ಗೆ ಬೆಂಬಲ ನೀಡದಿರಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ. ‘ಎಂದಿನಂತೆ ಚಲನಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ನಡೆಯಲಿದೆ. ಸ್ವಯಂಪ್ರೇರಿತರಾಗಿ ಯಾರಾದರೂ ಬೆಂಬಲ ಸೂಚಿಸಿದರೆ, ಅದಕ್ಕೆ ಮಂಡಳಿಯು ಅಡ್ಡಿಪಡಿಸುವುದಿಲ್ಲ’ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ತಿಳಿಸಿದರು.

ಬಂದ್‌ಗೆ ಬೆಂಬಲ ಇಲ್ಲ ಎಂದು ‘ಓಲಾ ಟ್ಯಾಕ್ಸಿ ಫಾರ್ ಶೋರ್ ಉಬರ್‌ (ಓಟಿಯು) ಚಾಲಕರು ಹಾಗೂ ಮಾಲೀಕರ ಸಂಘ’, ಅಖಿಲ ಭಾರತೀಯ ಲಾರಿ ಮಾಲೀಕರ ಒಕ್ಕೂಟ ಹಾಗೂ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘ ತಿಳಿಸಿವೆ.

‘ರೈತರು ಮೆರವಣಿಗೆ ನಡೆಸಲಿದ್ದು, ಅದಕ್ಕೆ ಬಿಜೆಪಿ ಬಂಬಲ ನೀಡಿದೆ’ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ರಾಯಚೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಪ್ರತಿಭಟನೆ

ಬಂದ್‌ಗೆ ಬೆಂಬಲ ಸೂಚಿಸಿ ಬಿಜೆಪಿ ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

‘ಬಂದ್‌ಗೆ ಹಲವು ರೈತ ಸಂಘಟನೆಗಳು ಬೆಂಬಲ ನೀಡಿವೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ. ಹಾಗಾಗಿ, ಬೆಂಗಳೂರಿನಲ್ಲಿ ಬಂದ್‌ ಇರುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಗಿ ಭದ್ರತೆಗೆ ಡಿಜಿಪಿ ಸೂಚನೆ

ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ಐಜಿಪಿಗಳು, ಪೊಲೀಸ್ ಕಮಿಷನರ್‌ ಹಾಗೂ ಜಿಲ್ಲಾ ಎಸ್ಪಿಗಳಿಗೆ ಜ್ಞಾಪನಾ ಪತ್ರ ಕಳುಹಿಸಿರುವ ನೀಲಮಣಿ, ‘ಬಂದ್‌ಗೆ ಕರೆ ನೀಡಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಯಾರಾದರೂ ಒತ್ತಾಯದಿಂದ ಬಂದ್‌ ಮಾಡಲು ಮುಂದಾದರೆ, ಅಂಥವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ’ ಎಂದು ಹೇಳಿದ್ದಾರೆ.

‘ಬಂದ್ ನಡೆಸುವುದಾಗಿ ಹೇಳಿರುವ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ತಿಳಿವಳಿಕೆ ಹೇಳಿ. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಿ’ ಎಂದು ಹೇಳಿದ್ದಾರೆ.

ಬಂದ್‌ಗೆ ಅನುಮತಿ ಇಲ್ಲ; ’ನಗರದಲ್ಲಿ ಬಂದ್‌ ನಡೆಸಲು ಅನುಮತಿ ನೀಡಿಲ್ಲ. ಆಕಸ್ಮಾತ್ ಯಾರಾದರೂ ಬಂದ್ ಮಾಡಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ. ಸುನೀಲ್ ಕುಮಾರ್ ಎಚ್ಚರಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಂದ್‌ ಮಾಡದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಅವರು ಏನಾದರೂ ಬಂದ್‌ ಮಾಡಿದರೆ, ಕ್ರಮ ಕೈಗೊಳ್ಳುವಂತೆ ಆಯಾ ವಿಭಾಗಗಳ ಡಿಸಿಪಿಗಳಿಗೆ ನಿರ್ದೇಶನ ನೀಡಿದ್ದೇವೆ’ ಎಂದರು.

ಬಸ್‌ ಸಂಚಾರ ಸರಾಗ

‘ಸೋಮವಾರ ಬಸ್‌ ಸಂಚಾರ ಎಂದಿನಂತೆ ಇರಲಿದೆ. ಪರಿಸ್ಥಿತಿಗನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT