ಕೊಣನೂರು: ಕಳೆದ ವರ್ಷ ಹೊಗೆಸೊಪ್ಪಿಗೆ ಉತ್ತಮ ಬೆಲೆ ದೊರಕಿದ್ದ ಹಿನ್ನೆಲೆಯಲ್ಲಿ ರೈತರು ಈ ವರ್ಷವೂ ನಾಟಿ ಮಾಡಿದ್ದ ಹೊಗೆಸೊಪ್ಪು ವಾರವಿಡಿ ಸುರಿದ ಸತತ ಮಳೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ.
ಕೊಣನೂರು, ರಾಮನಾಥಪುರ ಹೋಬಳಿಗಳ ಭಾಗದಲ್ಲಿನ ಹೊಗೆಸೊಪ್ಪು ನಾಟಿ ಮಾಡಿದ ನಂತರ ಪರದಿಂದ ಬಿಡುವು ಇಲ್ಲದಂತೆ ಸುರಿದ ಮಳೆಯಿಂದಾಗಿ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಧಾರಾಕಾರ ಮಳೆಯಿಂದ ನಾಟಿಮಾಡಿದ ಹೊಗೆಸೊಪ್ಪು ಅತಿ ತೇವಾಂಶದಿಂದ ಮೇಲೇಳದೆ ರೈತರನ್ನು ಚಿಂತೆಗೀಡುಮಾಡಿದೆ. ಹೊಲದಲ್ಲಿ ಕಳೆ ಅತಿಯಾಗಿ ಬೆಳೆದಿದ್ದು ಗಿಡಗಳನ್ನು ಮುಚ್ಚಿ ಮೇಲೇಳದಂತಾಗಿದೆ.
ಈ ವರ್ಷ ಮಳೆ ಬೇಗನೆ ಬಂದ ಕಾರಣ ಹೆಚ್ಚಿನ ರೈತರು ಹೊಗೆಸೊಪ್ಪು ನಾಟಿ ಆರಂಭಿಸಿದರು. ನಾಟಿ ಬಳಿಕ ಸತತ ಮಳೆಯಾಗಿದೆ. ಕಳೆ ಕೀಳಲು ಅವಕಾಶ ಸಿಗದೇ ಹೊಗೆಸೊಪ್ಪು ಬೆಳೆಗೆ ಹಿನ್ನಡೆಯಾಗಿದೆ.
ಕೆಲವೆಡೆ ಹೊಗೆಸೊಪ್ಪು ಹೊಲಗದ್ದೆಗಳು ಜಲಾವೃತವಾಗಿವೆ. ಉತ್ತಮ ಮಳೆ ಸಂತಸ ತಂದರೂ, ಇನ್ನೊಂದೆಡೆ ಸಾಲಮಾಡಿ ಮಾಡಿದ ಖರ್ಚೂ ಕೈಗೆ ಬರದ ಆತಂಕವೂ ಆವರಿಸಿದೆ.
ಅಲ್ಲದೆ, ಬಿತ್ತಿದ ಮುಸುಕಿನ ಜೋಳವೂ ಅತಿಯಾದ ತೇವಾಂಶದಿಂದ ನಲುಗುತ್ತಿದೆ. ನೀರು ನಿಂತು ಮೊಳಕೆ ಕಡೆಯದೆ ಮಣ್ಣಿನಲ್ಲಿ ಕರಗಿದ ಉದಾಹರಣೆಗಳನ್ನು ರೈತರು ಬೇಸರದಿಂದ ಹೇಳುತ್ತಾರೆ.