ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿ ಬಳಿಯಿಂದ ಐಬಿ ರಸ್ತೆಯ ಮೂಲಕ ಕೆಎಸ್ಆರ್ಟಿಸಿ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್ನ ಬ್ರೇಕ್ ವಿಫಲಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ಜಮೀಯಾ ಮಸೀದಿ ಮುಂಭಾಗದ ರಂಗನಾಥ್ ಎಂಟರ್ ಪ್ರೈಸಸ್ ಅಂಗಡಿಗೆ ನುಗ್ಗಿದೆ. ಅದೇ ವೇಳೆ, ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ರಾಜೇಶ್, ರಮೇಶ್ ಮತ್ತು ವಿಜಯ್ ಅವರು ಊಟಕ್ಕೆಂದು ಆ ಅಂಗಡಿಯ ಮುಂದೆ ಹೋಗುತ್ತಿದ್ದರು. ಬಸ್ ಏಕಾಏಕಿ ನುಗ್ಗುತ್ತಿರುವುದನ್ನು ನೋಡಿ ತಕ್ಷಣ ರಮೇಶ್, ವಿಜಯ್ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ರಾಜೇಶ್ ಬಸ್ನ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಟೊ ಚಾಲಕರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆಗೂ ಮುನ್ನವೇ ಅವರು ಮೃತಪಟ್ಟಿದ್ದಾರೆ.