ಆಹಾರ ಅರಸಿ ಮುಂಗುಸಿ ಕಾಡಿಗೆ ಹೋದದ್ದನ್ನು ಗಮನಿಸಿದ ಹಾವು ಸರಸರನೆ ಮುಂಗುಸಿಯ ಬಿಲ ಹೊಕ್ಕು, ಅಲ್ಲಿದ್ದ ಮೊಟ್ಟೆಗಳನ್ನು ತಿನ್ನತೊಡಗಿತು. ಮೊಟ್ಟೆಗಳು ಕಾಣೆ ಆಗುತ್ತಿರುವುದನ್ನು ಕಂಡು ಮುಂಗುಸಿಗೆ ಕೋಪ ಬಂತು, ಅನುಮಾನವೂ ಮೂಡಿತು. ‘ನಾಗಣ್ಣ... ಯಾರೋ ನಾನು ಸಂಗ್ರಹಿಸಿದ ಮೊಟ್ಟೆಗಳನ್ನು ಕದ್ದು ತಿನ್ನುತ್ತಿದ್ದಾರೆ. ಅವರು ಯಾರು ಎಂಬುದು ನಿನಗೆ ಗೊತ್ತೇ’ ಎಂದು ಕೇಳಿತು. ಆಗ ನಾಗರಹಾವು ತಲೆ ಅಲ್ಲಾಡಿಸುತ್ತಾ ‘ಇಲ್ಲಪ್ಪಾ... ನಂಗೊತ್ತಿಲ್ಲಪ್ಪಾ!’ ಎಂದು ಸುಳ್ಳು ಹೇಳಿ ಜಾರಿಕೊಂಡಿತು.