ಗೋಕಾಕ: ‘ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ, ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು’ ಎಂದು ಇಲ್ಲಿನ ಜ್ಞಾನದೀಪ ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಜಿ. ಭರಭರಿ ಹೇಳಿದರು.
ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
‘ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಿ, ಕಾಟನ್ ಚೀಲಗಳನ್ನು ಉಪಯೋಗಿಸಬೇಕು’ ಎಂದರು. ಭಾಷಣ, ಪ್ರಬಂಧ ಸ್ಪರ್ಧೆ, ವಸ್ತು ಪ್ರದರ್ಶನ ಮತ್ತು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ನೃತ್ಯಗಳನ್ನು ಏರ್ಪಡಿಸಲಾಗಿತ್ತು.
ಜೆ.ಎಸ್.ಎಸ್. ಪಿ.ಯು. ಕಾಲೇಜಿನ ಆರ್.ಎಂ. ಮಹೇಂದ್ರಕರ, ಮಯೂರ ಶಾಲೆಯ ಮುಖ್ಯಾಧ್ಯಾಪಕಿ ಎಸ್.ಆರ್. ಮಹೇಂದ್ರಕರ, ಶಿಕ್ಷಕ ಎಂ.ಸಿ. ವಣ್ಣೂರ ಇದ್ದರು. ಶಿಕ್ಷಕಿ ಸ್ಮೀತಾ ಭಂಡಾರಿ ನಿರೂಪಿಸಿ, ವಂದಿಸಿದರು.