ಸಿಂಧನೂರು: ಸ್ವಾಮಿ ವಿವೇಕಾನಂದ ಯುವ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಭಾನುವಾರ ಸನ್ಮಾನಿಸಿದರು. ಸಿಂಧನೂರು ಕ್ಷೇತ್ರದ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಿದರು.
‘ಸಿಂಧನೂರು ನಗರ ಜನರ ಬಹುನಿರೀಕ್ಷಿತ ಯೋಜನೆಗಳಾದ ಒಳಚರಂಡಿ ನಿರ್ಮಾಣ, ನಿರಂತರ ಕುಡಿಯುವ ನೀರಿನ ಯೋಜನೆ ಹಾಗೂ ತುರ್ವಿಹಾಳ ಬಳಿ ನೂತನ ಕೆರೆ ನಿರ್ಮಾಣ ಕಾಮಗಾರಿಗಳು ನೆನಗುದಿಗೆ ಬಿದಿದ್ದು, ಅವುಗಳನ್ನು ಪೂರ್ಣಗೊಳಿಸಲು ಮುಂದಾಗಬೇಕು. ವಾರ್ಡುಗಳಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪಗಳು, ಸಾರ್ವಜನಿಕ ಶೌಚಾಲಯ, ವಾರ್ಡಿಗೊಂದು ಉದ್ಯಾನವನ ನಿರ್ಮಿಸಬೇಕು’ ಎಂದು ವೇದಿಕೆ ಸದಸ್ಯರು ಮನವಿ ಮಾಡಿದರು.
‘ನಿರಾಶ್ರಿತರಿಗೆ ಸರ್ಕಾರದಿಂದ ಭೂಮಿ ಖರೀದಿಸಿ ಮನೆ ಕಟ್ಟಿ ಕೊಡಬೇಕು. ನಗರದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಮಿನಿವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು. ತಾಲ್ಲೂಕಿನ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆಯಿದ್ದು, ಶೀಘ್ರವೇ ಅವುಗಳ ಭರ್ತಿಗೆ ಮುಂದಾಗಬೇಕು. ಸರ್ಕಾರಿ ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸಬೇಕು’ ಎಂದು ಕೋರಿದರು.
ವೇದಿಕೆ ಗೌರವಾಧ್ಯಕ್ಷ ವೀರೇಶ ನಟೇಕಲ್, ಅಧ್ಯಕ್ಷ ಶ್ರೀನಿವಾಸ, ಸದಸ್ಯರಾದ ಶಿವು ಹಿರೇಮಠ, ಅವಿನಾಶ ದೇಶಪಾಂಡೆ, ಪ್ರಶಾಂತ ಕಿಲ್ಲೇದ್, ಬಸವರಾಜ ಕೆ, ಓಂಕಾರ್ ಜಿ, ರಮೇಶ, ಸಿ.ವಿ.ಗೌಡ, ಮಂಜುನಾಥ ಗಾಣಗೇರಾ, ವೀರೇಶ ಮಾಳಗಿ ಇದ್ದರು.