ಕೊಳ್ಳೇಗಾಲ: ರಾಜ್ಯದಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವರು, ‘ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಅವರು ರೈತಪರ ಕಾಳಜಿ ಹೊಂದಿದ್ದು, ರೈತರಿಗೆ ಯಾವುದೇ ಅನ್ಯಾಯ ಮಾಡುವುದಿಲ್ಲ. ಸಮ್ಮಿಶ್ರ ಸರ್ಕಾರ ಇರುವುದರಿಂದ ಸ್ವಲ್ಪ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.
‘ಜಿಲ್ಲೆಯಲ್ಲಿ ಕೆರೆಗಳು ಹೆಚ್ಚಾಗಿದ್ದು, ಹೂಳು ತೆಗೆಯುವ ಕೆಲಸ ಮಾಡುತ್ತೇನೆ’ ಎಂದರು. ಈ ಸಂದರ್ಭದಲ್ಲಿ ಶೈಲೇಂದ್ರ, ಬಸವರಾಜು, ಬಸವಣ್ಣ, ಮಹದೇವ, ಗೌಡೇಗೌಡ, ಎಜಾಜ್, ರವಿ ಹಾಗೂ ರೈತ ಮುಖಂಡರು ಇದ್ದರು.