ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳನ್ನು ಅವಲಂಬಿಸುತ್ತಾರೆ ಎಂಬುದು ಈಗ ಸರ್ವ ವಿದಿತ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಅವರ ಕನಸುಗಳನ್ನು ನನಸಾಗಿಸಬೇಕು ಎಂಬ ಆಸೆ ಈ ಮಕ್ಕಳ ಪಾಲಕರಲ್ಲೂ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ತಮ್ಮ ವೃತ್ತಿಯನ್ನು ಅರೆಕಾಲಿಕ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಅಂಥವರು ಶಾಲೆಯ ಕೆಲಸವನ್ನು ಬದಿಗಿಟ್ಟು, ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಬರುವುದೇ ಅಪರೂಪವಾಗಿದೆ. ಕೆಲವೊಬ್ಬರು ರಾಜಕೀಯ ನಾಯಕರ ಹಿಂಬಾಲಕರಾಗಿ ಅವರ ಹಿಂದೆ–ಮುಂದೆ ಓಡಾಡುತ್ತಾರೆ.