ಕಲಬುರ್ಗಿ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ₹10 ದಾನ ಮಾಡಿ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ಮಾಡಿಸಿರುವ ಸಮೀಕ್ಷೆಯಲ್ಲಿ ನೀವೂ ಸೇರಿ ಆರು ಜನ ಸಂಸದರು ಗೆಲ್ಲುವುದಿಲ್ಲ ಎಂಬ ವರದಿ ಬಂದಿದೆಯಂತಲ್ಲ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ, ‘ಇರಬಹುದು’ ಎಂದು ಪ್ರತಿಕ್ರಿಯಿಸಿದರು.
ಮರುಕ್ಷಣವೇ, ‘ಸಮೀಕ್ಷೆ ಬಗ್ಗೆ ಗೊತ್ತಿಲ್ಲ. ಆ ವರದಿಯನ್ನು ನಾನು ನೋಡಿಯೂ ಇಲ್ಲ’ ಎಂದರು.
ಅವರಾಗಿಯೇ ಬರುತ್ತಿದ್ದಾರೆ: ‘ರಾಜ್ಯದಲ್ಲಿ ನಮ್ಮವರು ಸರ್ಕಾರ ರಚಿಸುತ್ತಾರೆ ಎಂದು ನಿಮಗೆ ಯಾರು ಹೇಳಿದರು? ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಅವರಾಗಿಯೇ ಬರುತ್ತಿದ್ದಾರೆ. ಬರುವವರಿಗೆ ಬೇಡ ಎನ್ನಲು ಆಗುತ್ತಾ? ಇದು ರಾಜಕಾರಣ’ ಎಂದು ಜಾರಕಿಹೊಳಿ ಸಹೋದರರು ಬಿಜೆಪಿ ಸೇರುವ ಪ್ರಶ್ನೆಗೆ ಉತ್ತರಿಸಿದರು.
ಸಿಎಂಗೆ ಏನು ಧಾಡಿ: ‘ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ನಮ್ಮೆಲ್ಲ ಸಚಿವರನ್ನು ಹಳ್ಳಿ ಹಳ್ಳಿ ಸುತ್ತಿಸುತ್ತಿದ್ದರು. ಈಗ ರಾಜ್ಯದ 13 ಜಿಲ್ಲೆಗಳಲ್ಲಿ ಬರ ಇದ್ದು, ಜನರನ್ನು ಕೇಳುವವರು ಇಲ್ಲ’ ಎಂದು ಟೀಕಿಸಿದರು.
‘ಜಾನುವಾರುಗಳಿಗೆ ನೀರು–ಮೇವು ದೊರೆಯುತ್ತಿಲ್ಲ. ಒಬ್ಬ ಸಚಿವರೂ ಪ್ರವಾಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಾದರೂ ತಿಳಿಯಬೇಡವೇ? ಅವರಿಗೆ ಇಲ್ಲಿಗೆ ಬರಲು ಏನು ಧಾಡಿ? ಅವರ ಮನೆಯಿಂದ ಖರ್ಚು ಮಾಡುತ್ತಾರಾ? ಇಂತಹ ವಿಚಿತ್ರ ಸರ್ಕಾರವನ್ನು ನೋಡಿರಲಿಲ್ಲ’ ಎಂದು ಹರಿಹಾಯ್ದರು.