ಎಳ್ಳು ಬೆಳೆಯಿಂದ ಅಧಿಕ ಲಾಭ
ಗುಲ್ಬರ್ಗ: ಎಳ್ಳು ಬೆಳೆಯು ಒಂದು ಪ್ರಮುಖ ಎಣ್ಣೆ ಕಾಳು ಬೆಳೆಯಾಗಿದ್ದು ರೈತರು ಅದನ್ನು ಬೆಳೆದು ಅಧಿಕ ಲಾಭ ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯದಿಂದ ಸಿಗುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ರಾಜು ತೆಗ್ಗೆಳ್ಳಿ ಕರೆ ನೀಡಿದರು.
ಅವರು ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಳ್ಳೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡುತ್ತಿದ್ದರು.
ರೈತರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿದಲ್ಲಿ ಬೆಳೆಗಳಿಗೆ ಬರುವ ಕೀಟ ಮತ್ತು ರೋಗಗಳ ಬಾಧೆ ಕಡಿಮೆಯಾಗಿ ಉತ್ತಮ ಇಳುವರಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರೋತ್ಸವದ ಮುಂದಾಳತ್ವ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಡಿ.ಎಚ್.ಪಾಟೀಲ್ ಮಾತನಾಡಿ ಎಳ್ಳಿನಲ್ಲಿ ಆಧುನಿಕ ಬೇಸಾಯ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಆಧುನಿಕ ತಳಿಗಳಾದ ಡಿ.ಎಸ್-1, ಡಿ.ಎಸ್.ಎಸ್.9 ಮತ್ತು ಇ-8 ಗಳನ್ನು ಬಳಸಿ ಶಿಲೀಂದ್ರ ನಾಶಕಗಳಿಂದ ಬೀಜೋಪಚಾರ ಮಾಡಬೇಕು. ಸಕಾಲಕ್ಕೆ ಗೊಬ್ಬರ ಹಾಗೂ ಕಳೆ ನಿರ್ವಹಣೆ ಮಾಡಿದರೆ ಈಗಿರುವ ಇಳುವರಿಗಿಂತ ಶೇ. 30 ರಿಂದ 40 ರಷ್ಟು ಹೆಚ್ಚಿಗೆ ಇಳುವರಿ ಪಡೆಯಬಹುದು ಎಂದರು.
ಸಸ್ಯರೋಗ ತಜ್ಞ ಡಾ. ಕಾಂತರಾಜು ಎಳ್ಳು ಬೆಳೆಗೆ ಬರುವ ರೋಗಗಳ ಬಗ್ಗೆ ತಿಳಿ ಹೇಳಿದರು. ವಿಜ್ಞಾನಿ ಡಾ. ಜಯಲಕ್ಷ್ಮಿ ತೊಗರಿಗೆ ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ತಿಳಿಸಿದರು.
ಪರಿವರ್ತನ ಸಂಸ್ಥೆಯ ಪಾಂಡುರಂಗ, ಪ್ರಗತಿಪರ ರೈತ ಬಾಬುರಾವ ಹೀರಮಶೆಟ್ಟಿ ಮಾತನಾಡಿದರು. ಪ್ರಗತಿಪರ ರೈತರಾದ ಹಣಮಂತರಾಯ, ಪೋಲಿಸ ಪಾಟೀಲ್ ಮತ್ತು ನಿರಂಜನ ಧನ್ನಿ ಉಪಸ್ಥಿತರಿದ್ದರು. ಪ್ರಹಾದ್ಲ ನಿರೂಪಸಿದರು. ಯುವ ಪ್ರಗತಿಪರ ರೈತ ಶರಣಬಸಪ್ಪ ಮುರಡ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.