ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶಕ್ಕೂ ಮೊದಲೇ ವಿವಾಹ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್‌ ಸಂಸದ!

Last Updated 25 ಮೇ 2019, 9:48 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೂ ಮೊದಲೇ ಜೆಡಿಎಸ್‌–ಕಾಂಗ್ರೆಸ್‌ ಅಭ್ಯರ್ಥಿ ಕೆ.ನಿಖಿಲ್‌ ಸಂಸದ ಪಟ್ಟ ಅಲಂಕರಿಸಿದ್ದಾರೆ. ವಿವಾಹವೊಂದರ ಆಹ್ವಾನ ಪತ್ರಿಕೆಯಲ್ಲಿ ‘ವಿಶೇಷ ಆಹ್ವಾನಿತರು ಕೆ.ನಿಖಿಲ್‌ ಕುಮಾರಸ್ವಾಮಿ, ಸಂಸದರು, ಮಂಡ್ಯ ಜಿಲ್ಲೆ’ ಎಂದು ಭಾವಚಿತ್ರದೊಂದಿಗೆ ಮುದ್ರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮದ ಎಂ.ಎನ್‌.ಅಶೋಕ್‌ಕುಮಾರ್‌ ಅವರ ವಿವಾಹ ಅದೇ ಗ್ರಾಮದ ಬಿ.ಅಭಿಲಾಷಾ ಅವರೊಂದಿಗೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್‌ ಭವನದಲ್ಲಿ ಜೂನ್‌ 8, 9ರಂದು ನಡೆಯಲಿದೆ. ಆಹ್ವಾನ ಪತ್ರಿಕೆ ಬಲಪುಟದಲ್ಲಿ ವಧು–ವರರ ವಿವರ ಮುದ್ರಿಸಲಾಗಿದ್ದು ಎಡ ಭಾಗದ ಒಂದು ಪುಟವಿಡೀ ನಿಖಿಲ್‌ ಭಾವಚಿತ್ರ ಮುದ್ರಿಸಲಾಗಿದೆ. ‘ಯುವ ಸಾರಥಿ’ ಎಂಬ ಬಿರುದಿನೊಂದಿಗೆ ಸಂಸದ ಪಟ್ಟ ನೀಡಲಾಗಿದೆ. ಚುನಾವಣಾ ಫಲಿತಾಂಶದ ಮುನ್ನಾದಿನ ಈ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕುತೂಹಲ ಮೂಡಿಸಿದೆ.

‘ನಾನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಭಿಮಾನಿ. ಚುನಾವಣೆಯಲ್ಲಿ ನಿಖಿಲ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಅವರು ಮಂಡ್ಯ ಜಿಲ್ಲೆಯ ಸಂಸದರಾಗಿದ್ದಾರೆ. ಹೀಗಾಗಿ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಅವರ ಭಾವಚಿತ್ರ ಹಾಕಿಸಿದ್ದೇನೆ’ ಎಂದು ವರ ಅಶೋಕ್‌ಕುಮಾರ್‌ ತಿಳಿಸಿದ್ದಾರೆ.

ಖಾಸಗಿಯಾಗಿ ಆಹ್ವಾನ ಪತ್ರಿಕೆಯಲ್ಲಿ ಸಂಸದ ಎಂದು ಮುದ್ರಿಸಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT