ಕನಕಪುರ: ತಾಲ್ಲೂಕಿನ ಬೇಲಿಕೊತ್ತನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ದಾಳಿ ನಡೆಸಿ ತಮ್ಮಯ್ಯ (65) ಎಂಬುವವರನ್ನು ಗಾಯಗೊಳಿಸಿದೆ.
ಗ್ರಾಮದ ಜಗದೀಶ್ ಅವರಿಗೆ ಸೇರಿದ ರೇಷ್ಮೆ ಹುಳು ಮನೆಯಲ್ಲಿ ಮಲಗಿದ್ದ ತಮ್ಮಯ್ಯ ಮೂತ್ರ ವಿಸರ್ಜನೆಗೆಂದು ಹೊರ ಬಂದಾಗ ಮನೆಯೊಳಗೆ ನುಗ್ಗಿದ ಚಿರತೆ ದಾಳಿ ನಡೆಸಿದೆ. ಇವರ ಚೀರಾಟ ಕೇಳಿ ನೆರೆಯ ನಿವಾಸಿಗಳು ಸಹಾಯಕ್ಕೆ ಧಾವಿಸಿದ್ದಾರೆ.
ನೆರವಿಗೆ ಧಾವಿಸಿದ ವ್ಯಕ್ತಿಗಳ ಮೇಲೂ ಚಿರತೆ ದಾಳಿ ನಡೆಸಲು ಯತ್ನಿಸಿತು. ಕೂಡಲೇ ಮನೆ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಲಾಯಿತು. ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಬನ್ನೇರುಘಟ್ಟದ ವೈದ್ಯ ಡಾ.ಉಮಾಕಾಂತ ಅವರ ನೆರವಿನೊಂದಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆ ಹಿಡಿದರು.
ಗಾಯಾಳು ತಮ್ಮಯ್ಯ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.