ADVERTISEMENT

ಶಾಸಕ ಇಕ್ಬಾಲ್‌ ಅನ್ಸಾರಿಗೆ ರವಿ ಪೂಜಾರಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 7:15 IST
Last Updated 3 ಫೆಬ್ರುವರಿ 2018, 7:15 IST
ಇಕ್ಬಾಲ್ ಅನ್ಸಾರಿ
ಇಕ್ಬಾಲ್ ಅನ್ಸಾರಿ   

ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಬೆದರಿಕೆ ಹಾಕಿರುವ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತೀವ್ರ ಕೋಪಗೊಂಡು ಮಾತನಾಡಿದ ಆ ವ್ಯಕ್ತಿ ಅನ್ಸಾರಿ ಅವರನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾನೆ. 'ಹಿಂದೂಗಳ ವಿರುದ್ಧ ಮಾಧ್ಯಮಗಳ ಮುಂದೆ ಮಾತನಾಡಬಾರದು. ಹಾಗೆ ಏನಾದರೂ ಮಾಡಿದರೆ ನನ್ನ ಜನರು ಗುಂಡು ಹೊಡೆದು ಸಾಯಿಸುತ್ತಾರೆ' ಎಂದು ಎಚ್ಚರಿಸಿದ್ದಾನೆ.

ಹಿಂದಿ ಭಾಷೆಯಲ್ಲಿ ನಡೆದ ಸಂಭಾಷಣೆ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಇಕ್ಬಾಲ್‌ ಅನ್ಸಾರಿ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ. ಶೆಟ್ಟಿ ಪ್ರಕರಣ ದಾಖಲಾಗಿರುವುದನ್ನು ದೃಢಪಡಿಸಿದ್ದಾರೆ.

ADVERTISEMENT

'ಘಟನೆಯ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಧ್ವನಿ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದು ರವಿ ಪೂಜಾರಿಯದ್ದೇ ಎಂದು ಖಚಿತಪಡಿಸಬೇಕಿದೆ. ವಿದೇಶದಿಂದ ಬರುವ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಯಬೇಕು' ಎಂದು ತಿಳಿಸಿದರು. 

ಅನ್ಸಾರಿ ಆಪ್ತ ಸಹಾಯಕ ಶಿವಾನಂದ ಮತ್ತು ಕರೆ ಮಾಡಿದ ವ್ಯಕ್ತಿ ನಡುವೆ ನಡೆದ ಸಂಭಾಷಣೆಯ ಸಾರಾಂಶ ಹೀಗಿದೆ...

ಶಿವಾನಂದ್‌: ಹಲೋ ಯಾರು ಸರ್‌ ಮಾತಾಡ್ತಿರೋದು?

ರವಿ: ಹಲೋ, (ಹಿಂದಿಯಲ್ಲಿ) ನಾನು ರವಿಪೂಜಾರಿ ಮಾತನಾಡುತ್ತಿದ್ದೇನೆ.

ಶಿವಾನಂದ್‌: ಸರ್‌ ಹೇಳ್ರಿ

ರವಿ: ತಾವು ಈಗ ಮಿಸ್ ಕಾಲ್‌ ಕೊಟ್ಟಿದ್ದೀರಲ್ಲಾ?

ಶಿವಾನಂದ್‌: ಹಾ....ಅ....

ರವಿ: ದೊಡ್ಡದೊಡ್ಡ ಮಾತನಾಡುತ್ತಿದ್ದವನು ನೀನೇ ಏನು?

ಶಿವಾನಂದ್‌: ಇಲ್ಲ. ಸಾಹೇಬರು ನಿಮಗೆ ಫೋನ್‌ ಹಚ್ಚಿಕೊಡುವಂತೆ ಹೇಳಿದರು. ನಾನು ಡಯಲ್‌ ಮಾಡಿದೆ. ಹೇಳಿ...

ರವಿ: ಎಲ್ಲಿ ಇಕ್ಬಾಲ್‌ ಎಲ್ಲಿ?

ಶಿವಾನಂದ್‌: ವಾರ್ಡ್‌ ವಿಸಿಟ್‌ಗೆ ಹೋಗಿದ್ದಾರೆ.

ರವಿ: ಅದ್ಯಾರು ಈಗ ದೊಡ್ಡದೊಡ್ಡ ಮಾತನಾಡುತ್ತಿದ್ದವರು? ಆಸ್ಟ್ರೇಲಿಯಾದಲ್ಲಿ ಕುಳಿತು ಹಿಂದೂಸ್ತಾನದ ಬಗ್ಗೆ ಏನು ಮಾತನಾಡುತ್ತಿರುವುದು ಎಂದೆಲ್ಲಾ ಕೇಳಿದ್ದಾರಲ್ಲಾ. ಅವರಿಗೆ ಹೇಳು ಆಸ್ಟ್ರೇಲಿಯಾದಲ್ಲಿ ಕುಳಿತು ಕರ್ನಾಟಕದಲ್ಲಿ ಕೊಲೆ ಮಾಡಿಸುತ್ತೇವೆ. ಗೊತ್ತಿದೆಯಲ್ಲಾ ನಿನಗೆ? ಏನು ಮಾತನಾಡುತ್ತಿದ್ದಾನೆ ಎಂದು ತಿಳಿದಿದೆಯೇ? ರವಿ ಪೂಜಾರಿ ಯಾರು ಎಂದು ಕರ್ನಾಟಕದಲ್ಲಿ ಗೊತ್ತಿಲ್ಲವೇ?

ಶಿವಾನಂದ: ಏನು ವಿಷಯ ಹೇಳಿ ಸರ್‌...

ರವಿ: ವಿಷಯ ಏನೂ ಇಲ್ಲ. ಹಿಂದೂಗಳ ಮೇಲೆ ಮಾಧ್ಯಮಗಳ ಮುಂದೆ ಇಲ್ಲ ಸಲ್ಲದ್ದನ್ನು ಮಾತನಾಡುತ್ತಿದ್ದಾನೆ. ಹೀಗೆ ಮಾಡಿದರೆ ನನ್ನ ಜನರು ಹೊಡೆದುಹಾಕುತ್ತಾರೆ.

ಶಿವಾನಂದ: ಶಾಸಕರಾಗಿ ಅವರು ಕೆಲಸ ಮಾಡಿದ್ದಾರೆ...

ರವಿ: ಏನು ಕೆಲಸ ಮಾಡಿದ್ದಾರೆ. ಕೆಲಸ... ನನ್ನ ಜನ ಹೊಡೆದು ಹಾಕುತ್ತಾರೆ. ಹೀಗೆ ಇಲ್ಲಸಲ್ಲದ್ದನ್ನು ಮಾತನಾಡಬಾರದು. ಅವನಿಗೆ ಹೇಳು. ಈಗ ದೊಡ್ಡ ಮಾತುಗಳನ್ನಾಡುತ್ತಿದ್ದನಲ್ಲಾ. ಅವನ ಎಲ್ಲ ಮಾಹಿತಿ ತೆಗೆಯುತ್ತಿದ್ದೇನೆ.

ಶಿವಾನಂದ: ನೀವು ನೋಡಿ, ನೀವು ನೇರ ಬಂದು ನೋಡಿ.

ರವಿ: ನಾನು ನೋಡುವುದೇನು? ನನ್ನ ಜನ ಬಂದು ಹೊಡೆದುಹಾಕುತ್ತಾರೆ. ನಾನು ಆಸ್ಟ್ರೇಲಿಯಾದಲ್ಲಿದ್ದೇನಲ್ಲಾ. ನನ್ನ ಜನ ಬಂದು ನೇರವಾಗಿ ಗುಂಡು ಹೊಡೆದು ನೋಡುತ್ತಾರೆ. ಇನ್ನೊಂದು ಬಾರಿ ನಾನು ಫೋನ್‌ ಮಾಡಿದಾಗ ಫೋನ್‌ ಎತ್ತದಿದ್ದರೆ ನೋಡು... ನನಗೆ ಫೋನ್‌ ಮಾಡಲು ಇಕ್ಬಾಲ್‌ಗೆ ಹೇಳು...

ಶಿವಾನಂದ: ಇಷ್ಟೊಂದು ಕೋಪಗೊಳ್ಳುತ್ತೀರೇಕೆ?

ರವಿ: ನಾನು ಕೋಪಗೊಳ್ಳುತ್ತಿಲ್ಲ. ಹೊಡೆಯುವ ಬಗ್ಗೆ ಮಾತನಾಡುತ್ತಿದ್ದೇನೆ. ನನ್ನ ಕೆಲಸವೇ ಗುಂಡು ಹೊಡೆಯುವುದು. ನನ್ನ ಗುಂಡಿನಿಂದ ನಿನ್ನ ಜೆಡಿಎಸ್‌ ಅಥವಾ ಕಾಂಗ್ರೆಸ್‌ನವರು ಪಾರಾಗಲು ಸಾಧ್ಯವಿಲ್ಲ. ನನಗೆ ಕರೆ ಮಾಡಲು ಅನ್ಸಾರಿಗೆ ಹೇಳು.

ಶಿವಾನಂದ: ಇದು ನಿಮ್ಮ ಸಂಖ್ಯೆಯಾ?

ರವಿ: ಹೌದು ಇದು ನನ್ನದೇ ನಂಬರ್‌... ಸರಿ ( ಕರೆ ಸ್ಥಗಿತಗೊಳಿಸುತ್ತಾನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.