ADVERTISEMENT

ಹೂವು-ಹೈನು ಜುಗಲ್‌ಬಂದಿ

ಶೈಲಜಾ ಬೆಳ್ಳಂಕಿಮಠ
Published 23 ಸೆಪ್ಟೆಂಬರ್ 2019, 19:30 IST
Last Updated 23 ಸೆಪ್ಟೆಂಬರ್ 2019, 19:30 IST
ಹೂವಿನ ಬೆಳೆಯೊಂದಿಗೆ ನೇರ್ಲಿ
ಹೂವಿನ ಬೆಳೆಯೊಂದಿಗೆ ನೇರ್ಲಿ   

ವೈವಿಧ್ಯಮಯ ಕೃಷಿ ಬೆಳೆಗಳ ತವರು ಬೆಳಗಾವಿ ಜಿಲ್ಲೆ. ಕಬ್ಬು, ಅರಿಸಿನ ಗೋವಿನಜೋಳದಂಥ ಕೃಷಿ ಬೆಳೆಗಳೊಂದಿಗೆ ಹೂವು, ಹಣ್ಣು ತರಕಾರಿಗಳನ್ನು ಬೆಳೆಯುವವರ ಸಂಖ್ಯೆ ಹೆಚ್ಚು. ಹಸಿರು ಮೇವಿನ ಲಭ್ಯತೆಯಿಂದ ಹೈನುಗಾರಿಕೆಗೂ ವಿಫುಲ ಅವಕಾಶಗಳಿವೆ ಇಲ್ಲಿ. ಇಂಥ ಅವಕಾಶ ಬಳಸಿ, ಹೂವು ಹಾಗೂ ಹೈನುಗಾರಿಕೆ ಮೂಲಕ ಸುಸ್ಥಿರ ಆರ್ಥಿಕತೆಯತ್ತ ಹೆಜ್ಜೆ ಹಾಕಿದ್ದಾರೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ 33ರ ಕೃಷಿಕ ಆನಂದ ಮಲ್ಲಿಕಾರ್ಜುನ ನೇರ್ಲಿ.

ಓದಿದ್ದು ಪಿಯುಸಿ. ನಂತರ ಆಯ್ಕೆ ಮಾಡಿಕೊಂಡಿದ್ದು ಕೃಷಿಯನ್ನು. ಅವರಿಗೆ ಇರುವುದು ಒಟ್ಟು ಎರಡೂವರೆ ಎಕರೆ ಜಮೀನು. ಬೆಳೆ ನಿರ್ವಹಣೆಗೆ ಒಂದು ಕೊಳವೆ ಬಾವಿ ಜತೆಗೆ ಒಂದು ತೆರೆದ ಬಾವಿಯೂ ಇದೆ. ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಮೂಲಕವೇ ನೀರು ಹನಿಸುತ್ತಾರೆ.

ಚೆಂಡು ಹೂವು ಕೃಷಿ

ADVERTISEMENT

ಒಂದು ಎಕರೆಯಲ್ಲಿ ಕೋಲ್ಕತ್ತಾ ಆರೆಂಜ್ ತಳಿ ಚೆಂಡುಹೂವು ಹಾಕಿದ್ದಾರೆ. ಇದು ಏಕಬೆಳೆ ಸಾಗುವಳಿ. ಪ್ಲಾಸ್ಟಿಕ್ ಹೊದಿಕೆಯಲ್ಲಿ ಮೆಣಸಿನಕಾಯಿ ಜೊತೆ ಅಂತರ ಬೆಳೆಯಾಗಿ ಟೆನಿಸ್ ಬಾಲ್ (ಹಳದಿ ವರ್ಣ) ತಳಿ ಬೆಳೆದಿದ್ದಾರೆ. ಏಳು ಅಡಿ ಅಂತರದ ಸಾಲುಗಳಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಮೆಣಸಿನಕಾಯಿ ಸಸಿಗಳಿವೆ. ಸಾಲಿನ ಮಧ್ಯ ಚೆಂಡು ಹೂವು ಸಸಿ ನಾಟಿ ಮಾಡಿದ್ದಾರೆ. ಹದಿನೈದು ದಿನಕ್ಕೊಮ್ಮೆ ಹನಿ ನೀರಾವರಿ ಮೂಲಕ ದ್ರವಗೊಬ್ಬರ ಪೂರೈಕೆ ಮಾಡುತ್ತಾರೆ. ಪ್ರತಿ ವಾರಕ್ಕೆ ಪೂರಕ ಗೊಬ್ಬರಗಳು, ಲಘುಪೋಷಕಾಂಶಗಳನ್ನು ಕೊಡುತ್ತಾರೆ.

ನಾಟಿ ಮಾಡಿದ 45 ರಿಂದ 50 ದಿನಕ್ಕೆ ಹೂವುಬಿಟ್ಟು, ಕಟಾವಿಗೆ ಸಿದ್ಧವಾಗುತ್ತದೆ. ‌ವಾರಕ್ಕೆ ಎರಡು ಬಾರಿ ಕಟಾವು ಮಾಡುತ್ತಾರೆ. ಸದ್ಯ, ಎಂಟು ಕಟಾವಿನಲ್ಲಿ 4.5 ಟನ್ ಹೂವು ಸಿಕ್ಕಿದೆ. ಮಾರಾಟವಾಗಿದೆ. ಹೆಚ್ಚು ಇಳುವರಿ ನೀಡುವ ಟೆನಿಸ್ ಬಾಲ್ ತಳಿ ಈಗ ನಾಟಿ ಮಾಡಿದ್ದು. ಬೆಳವಣಿಗೆ ಹಂತದಲ್ಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಶುರುವಾಗುವ ಹೊತ್ತಿಗೆ, ಈ ತಳಿ ಕೊಯ್ಲಿಗೆ ಬರುತ್ತದೆ. ಒಳ್ಳೆಯ ಬೆಲೆ ಸಿಗುತ್ತದೆ. ಇದು ಅವರ ಪಕ್ಕಾ ಲೆಕ್ಕಾಚಾರದ ಕೃಷಿ.

ಹೂವು ಕೊಯ್ಲಿಗೆ, ಗಿಡಗಳ ನಿರ್ವಹಣೆಗೆ ಜನರಿದ್ದಾರೆ. ಬಾಡಿಗೆ ವಾಹನದಲ್ಲಿ ಹೂವನ್ನು ಮಾರುಕಟ್ಟೆ ಸಾಗಿಸುತ್ತಾರೆ. ಮುಂಬೈ ಹೂವು ಮಾರುಕಟ್ಟೆಯ ನಿಯಮಿತ ಖರೀದಿದಾರರಿಗೆ ನೇರ ಮಾರಾಟ ಮಾಡುತ್ತಾರೆ. ಮಾರಾಟವಾದ ಹೂವಿನ ಹಣ ಇವರ ಬ್ಯಾಂಕ್ ಖಾತೆಗೆ ನೇರ ವರ್ಗವಾಗುತ್ತದೆ. ಆ ಮೊತ್ತದಲ್ಲಿ ಸಾಗಾಟ ಸೇರಿದಂತೆ ಇನ್ನಿತರ ವೆಚ್ಚವನ್ನು ಕಳೆದಿರುತ್ತಾರೆ. ಇಷ್ಟು ನಿಖರವಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಕೆಜಿಗೆ ₹80 ದರ ಸಿಕ್ಕರೂ ಒಳಸುರಿ, ಆಳು, ಮಾರುಕಟ್ಟೆಗೆ ಸಾಗಾಟ, ಇನ್ನಿತರ ವೆಚ್ಚ ಕಳೆದು ಕೆ.ಜಿಗೆ ₹60 ಉಳಿಯುತ್ತದೆ’ ಎಂದು ವಿವರಿಸುತ್ತಾರೆ ಆನಂದ.

ನಿಶ್ಚಿತ ವಾಹನ ಸೌಕರ್ಯ ಹಾಗೂ ನಿಗದಿತ ಖರೀದಿದಾರ ಇರುವುದರಿಂದ ಮಾರಾಟ ಸಮಸ್ಯೆ ಕಾಡಿಲ್ಲ. ಪ್ರತಿ ಕೊಯ್ಲಿಗೆ 500ಕೆಜಿ ಮಾತ್ರ ಮಾರಾಟ ಮಾಡುತ್ತಾರೆ. ಫಸಲು ಇದ್ದರೂ ಕಟಾವು ಮಾಡುವುದಿಲ್ಲ. ಒಂದೇ ಬಾರಿ ಕಳುಹಿಸಿ ದರ ಕಡಿಮೆಯಾಗಿ ನಷ್ಟ ಅನುಭವಿಸುವುದಕ್ಕಿಂತ ಬೇಡಿಕೆ ಅನುಸಾರ ಪೂರೈಸುವ ಜಾಣ್ಮೆ ಇವರದು. ‘ವಾರಕ್ಕೆ 2 ಟನ್‌ನಂತೆ ಇನ್ನೂ ಎರಡು ತಿಂಗಳು ಕೊಯ್ಲು ಮಾಡಬಹುದು’ ಎನ್ನುತ್ತಾರೆ ಆನಂದ. ಟೆನಿಸ್‌ಬಾಲ್ ತಳಿ ಹೂವು ಹಳದಿ ಬಣ್ಣವಿದ್ದು ಗಾತ್ರದಲ್ಲಿ ಸ್ವಲ್ಪ ಹಿರಿದು. ಬೇಡಿಕೆ ಅನುಗುಣವಾಗಿ ದರವೂ ಹೆಚ್ಚು.

ಹೂವಿನೊಂದಿಗೆ ಹೈನು

ಕೃಷಿ ಜತೆಗೆ ಹೈನೋದ್ಯಮವೂ ಇವರ ಆರ್ಥಿಕ ಬೆಳವಣಿಗೆಗೆ ಹೆಗಲು ನೀಡಿದೆ. ಹತ್ತು ಎಚ್‌ಎಫ್‌, ಎರಡು ಜರ್ಸಿ ಹಸುಗಳಿವೆ. ನಾಲ್ಕು ನಾಟಿ ಆಕಳು–ಕರುಗಳಿವೆ. ನಾಲ್ಕು ಎಮ್ಮೆ, ಎರಡು ಕಿಲಾರಿ ಎತ್ತುಗಳು. ಇವುಗಳನ್ನು ನಿಗದಿತ ಜಾಗದಲ್ಲಿ ಮೇಯಿಸುತ್ತಾರೆ. ಕೊಳವೆಬಾವಿ, ತೆರೆದಬಾವಿಯಲ್ಲಿ ನೀರು ಇರುವುದರಿಂದ ಜೋಳ, ಗೋವಿನಜೋಳ, ನೇಪಿಯರ್ ಹುಲ್ಲು, ಸಜ್ಜೆ ಬೆಳೆಯುತ್ತಾರೆ.

ಎರಡು ಸಾವಿರ ಚದರ ಅಡಿಯಷ್ಟು ವಿಸ್ತೀರ್ಣದ ತೆರೆದ ಕೊಟ್ಟಿಗೆ (ಓಪನ್ ಯಾರ್ಡ್‌) ಇದೆ. ಗರ್ಭ ಧರಿಸಿದ ರಾಸು ಬಿಟ್ಟು ಉಳಿದವನ್ನು ಇಲ್ಲಿ ಬಿಡುತ್ತಾರೆ. ಕೊಟ್ಟಿಗೆಯ ತುಂಬಾ ಕಬ್ಬಿನ ರವದಿ, ಚಗಳ (ಬೆಳೆಯುಳಿಕೆ) ಹರಡಿರುತ್ತಾರೆ. ಗಂಜಲ ಹಾಗೂ ಸಗಣಿಯೊಂದಿಗೆ ಬೆರೆತು ಇದು ಉತ್ಕೃಷ್ಟ ಗೊಬ್ಬರವಾಗುತ್ತದೆ. ಎರಡು ತಿಂಗಳಿಗೆ ಒಮ್ಮೆ ರವದಿ ಬದಲಾಯಿಸುತ್ತಾರೆ. ‘ತೆರೆದ ಕೊಟ್ಟಿಗೆಯಲ್ಲಿ ಬಿಡುವುದರಿಂದ ರೋಗ, ಸೋಂಕು ಕಡಿಮೆ. ಆರೋಗ್ಯಯುತ ಆಕಳು ಹಾಗೂ ನಿರ್ವಹಣಾ ವೆಚ್ಚ ಕಡಿಮೆ’ – ಅನುಭವ ಹಂಚಿಕೊಳ್ಳುತ್ತಾರೆ ಸಹೋದರ ಮಹೇಶ.

ಮೇವು ಬೆಳೆದುಕೊಳ್ಳವುದರಿಂದ ಹೊರಗಿನ ಮೇವಿನ ಅವಲಂಬನೆ ಇಲ್ಲ. ವರ್ಷಕ್ಕೆ 20 ಟನ್ ಸೈಲೇಜ್ ಮೇವನ್ನು ತಾವೇ ತಯಾರಿಸಿಕೊಂಡು ಸಂಗ್ರಹಿಸುತ್ತಾರೆ. ಹಾಗಾಗಿ ನಿತ್ಯ ನಿಗದಿತ ಸಮಯಕ್ಕೆ ಮೇವು ಪೂರೈಕೆ. ಸೈಲೇಜ್‌, ಹತ್ತಿಕಾಳು, ಹಿಂಡಿ, ಗೋವಿನಜೋಳದ ಹಿಟ್ಟು, ಜತೆಗೆ ಒಣಮೇವು ಕೊಡುತ್ತಾರೆ.

ನಿತ್ಯ ಸರಾಸರಿ 140 ಲೀಟರ್‌ನಿಂದ 150ಲೀಟರ್‌ ಹಾಲು ಲಭ್ಯ. ಕೆಎಂಎಫ್‌ ಸಂಸ್ಥೆಯಿಂದ ಪ್ರತಿ ಲೀಟರ್‌ಗೆ ಕೊಡುವ ಸಬ್ಸಿಡಿ ಸೇರಿ ₹21 ಸಿಗುತ್ತದೆ. ಲೀಟರ್ ಹಾಲು ಉತ್ಪಾದನೆಗೆ ₹12 ಖರ್ಚು. ಉಳಿದಿದ್ದು ₹15 ಪ್ರತ್ಯಕ್ಷ ಲಾಭ. ಪರೋಕ್ಷವಾಗಿ ಉತ್ಕೃಷ್ಟವಾದ ಗೊಬ್ಬರ ಸಿಗುತ್ತದೆ ಎನ್ನುತ್ತಾರೆ ಇವರ ತಂದೆ ಮಲ್ಲಿಕಾರ್ಜುನ.

ಹೂವು– ಹೈನು ಜತೆಗೆ, ಕಬ್ಬು ಬೆಳೆಯುತ್ತಾರೆ. ಅಂಗಾಂಶ ಕೃಷಿಯ 93ವಿ98 ತಳಿ ಕಬ್ಬಿನ ಸಸಿ ನಾಟಿ ಮಾಡಿದ್ದಾರೆ. ಒಂದು ಗುಣಿಯಲ್ಲಿ 12 ರಿಂದ 15 ಮರಿಗಳಿದ್ದು ಒಂದು ಕಬ್ಬು 1.5 ಕೆಜಿ ತೂಕವಿದೆ. ಇದು ಹೊಸ ತಳಿಯಾಗಿದ್ದು, ಈ ಹವಾಮಾನಕ್ಕೆ ಒಗ್ಗಿ ಬೆಳೆದು ಉತ್ತಮ ಇಳುವರಿ ನೀಡುವ ನಿರೀಕ್ಷೆ ಆನಂದ್ ಕುಟುಂಬದವರದ್ದು.

ಕಳೆದ ನವೆಂಬರ್ ತಿಂಗಳಲ್ಲಿ ನಾಟಿ ಮಾಡಿದ ಒಂದು ಎಕರೆ ಕಬ್ಬು ಈಗ ಮಾಗುವ ಹಂತದಲ್ಲಿದೆ. ದಸರೆ ನಂತರ ಕಟಾವುಗೊಳ್ಳುತ್ತದೆ. ಇದರಲ್ಲಿ ಅಂತರ ಬೆಳೆಯಾಗಿ ಸಿಹಿ ಗೋವಿನಜೋಳ ಬೆಳೆದಿದ್ದರು. ಅವುಗಳ ತೆನೆ ಮಾರಾಟವಾಗಿದೆ. ಮೇವು ಸೈಲೇಜ್ ತಯಾರಿಕೆಗೆ ಬಳಕೆಯಾಗಿದೆ.

ಕಬ್ಬಿನವಾಡೆ (3ತಿಂಗಳಿಂದ 10ತಿಂಗಳು ಲಭ್ಯವಾಗುವ ಕಬ್ಬಿನ ಗರಿ) ರಾಸುಗಳಿಗೆ ಉತ್ತಮ ಹಸಿರು ಮೇವು ಒದಗಿಸುತ್ತದೆ. ಒಣಗಿದ ರವದಿ ಕೊಟ್ಟಿಗೆಯಲ್ಲಿ ಹರಡಿದಾಗ ಉತ್ಕೃಷ್ಟ ಗೊಬ್ಬರ. ಇದು ಮಣ್ಣಿನ ಆರೋಗ್ಯಕ್ಕೆ ಪೂರಕ.

‘ಹೂವು, ಕಬ್ಬಿನ ಬೆಳೆಯ ಜತೆಗೆ, ಹೈನುಗಾರಿಕೆ ಅಳವಡಿಕೆ ಉತ್ತಮ ಸಂಯೋಜನೆಯ ಕೃಷಿಯಾಗಿದೆ. ಈ ನಾಲ್ಕು ತಿಂಗಳಿನಲ್ಲಿ ಖರ್ಚು ತೆಗೆದು ಸುಸ್ಥಿರ ಎನ್ನುವಂಥ ಆದಾಯ ಬಂದಿದೆ. ಉತ್ತಮ ಬೆಳೆ ಆಯ್ಕೆ, ಸತತ ನಿರೀಕ್ಷಣೆ, ಪರಿಶ್ರಮ ಹಾಗೂ ಚುರುಕಿನ ನಿರ್ಧಾರದಂತಹ ಶಿಸ್ತನ್ನು ಪಾಲಿಸಿದರೆ ನಿರೀಕ್ಷೆ ಹುಸಿಯಾಗುವುದಿಲ್ಲ’ ಖಚಿತಪಡಿಸುತ್ತಾರೆ ಆನಂದ.

ಕೃಷಿ ಕಾರ್ಯಗಳಲ್ಲಿ ಪತ್ನಿ ಅನಿತಾ, ಸಹೋದರ ಮಹೇಶ, ವಿದ್ಯಾ ಹಾಗೂ ತಂದೆ ಮಲ್ಲಿಕಾರ್ಜುನ ಇವರ ಪಾಲ್ಗೊಳ್ಳುವಿಕೆಯನ್ನು ಸ್ಮರಿಸುತ್ತಾರೆ. ಎಲ್ಲರೂ ಒಂದೊಂದು ಜವಾಬ್ದಾರಿ ವಹಿಸಿಕೊಂಡಿ ದ್ದಾರೆ. ಅದರಲ್ಲೇ ಸಂತೃಪ್ತಿ ಕಂಡುಕೊಂಡಿದ್ದಾರೆ.

ಬೆಳೆ ಸಂಯೋಜನೆ ‘ಫಸಲು’

ಹಾಲು ಮಾರಾಟದಿಂದ ಸಿಗುವ ಮೊತ್ತ, ವಾರಾಂತ್ಯಕ್ಕೆ ಆಳುಗಳ ಕೂಲಿ ನೀಡಲು ಬಳಕೆಯಾಗುತ್ತದೆ. ಹೂವಿನ ಆದಾಯ, ಕೃಷಿಗೆ ಬಳಸುವ ಒಳಸುರಿ ಹಾಗೂ ಇನ್ನಿತರ ಖರ್ಚು ನಿಭಾಯಿಸಲು ಸಹಾಯವಾಗುತ್ತದೆ. ಇದು ಬೆಳೆ ಸಂಯೋಜನೆಯ ಫಸಲು.

ಹೂವು ತ್ರೈಮಾಸಿಕ ಬೆಳೆ. ಆ ಬೆಳೆ ತೆಗೆದ ನಂತರ ಗಡ್ಡೆಕೋಸು, ಹೂಕೋಸು, ಟೊಮೆಟೊ, ಮೆಂತ್ಯ, ಕೊತ್ತಂಬರಿಯಂಥ ಬೆಳೆಗಳನ್ನು ಹವಾಮಾನ ಹಾಗೂ ಮಾರುಕಟ್ಟೆ ಬೇಡಿಕೆ ಅನುಸಾರ ಸಂಯೋಜಿಸುತ್ತಾರೆ. ವಾರ್ಷಿಕ ಅಲ್ಪಾವಧಿ ಮೂರು ಹಾಗೂ ಅಂತರ ಬೆಳೆ ಒಟ್ಟು ನಾಲ್ಕು ಬಾರಿ ಫಸಲು ಪಡೆಯುವಂತೆ ಬೆಳೆ ಪರಿವರ್ತನೆ ಮಾಡುತ್ತಾರೆ ಆನಂದ.

ಕಬ್ಬು ಆದಾಯ ವಾರ್ಷಿಕ ಠೇವಣಿ. ಹೈನು ಮಾಸಿಕ, ಹೂವು ತ್ರೈಮಾಸಿಕ ಗಳಿಕೆ. ಇವುಗಳಲ್ಲಿ ಅಂತರ ಬೆಳೆಯಾಗಿ ಬೆಳೆಯುವ ಸೊಪ್ಪು ತರಕಾರಿಗಳು ನಿತ್ಯದ ಖರ್ಚು ಸರಿದೂಗಿಸಲು ನೆರವಾಗುತ್ತವೆ. ಮಿಶ್ರ ಬೆಳೆ ಬೆಳೆಯುವುದರಿಂದ, ಮನೆ ಮಂದಿಗೆ ನಿರಂತರ ಉದ್ಯೋಗ ಮತ್ತು ದುಡಿಮೆ. ‘ಯೋಜನಾಪೂರ್ವಕ ಕೃಷಿಯಿಂದ ಸಂತೃಪ್ತಿ ನೆಲೆಸಿದೆ’ ಎನ್ನುತ್ತಾರೆ ಆನಂದ ನೇರ್ಲಿ.

ಹೆಚ್ಚಿನ ಮಾಹಿತಿಗೆ ಆನಂದ್ ಅವರ ಸಂಪರ್ಕ ಸಂಖ್ಯೆ: 97424 04243

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.