ಹಾವೇರಿ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ರಾಜ್ಯದಲ್ಲಿ ಶೇ 32.95ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ನೂತನ ಯೋಜನೆಗೆ ಅನ್ನದಾತರಿಂದ ನಿರೀಕ್ಷಿತ ಮಟ್ಟದಲ್ಲಿ ಒಲವು ವ್ಯಕ್ತವಾಗಿಲ್ಲ.
ಕೃಷಿ ಇಲಾಖೆಯು 2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ‘ರೈತರ ಬೆಳೆ ಸಮೀಕ್ಷೆ ಆ್ಯಪ್’ ಅಭಿವೃದ್ಧಿಪಡಿಸಿತ್ತು. ಈ ತಂತ್ರಾಂಶದ ಮೂಲಕ ರೈತರೇ ತಮ್ಮ ಜಮೀನಿನಲ್ಲಿ ನಿಂತು ಬೆಳೆಯ ಫೋಟೊ ತೆಗೆದು, ವಿವರ ದಾಖಲಿಸಲು ಪ್ರಥಮ ಬಾರಿಗೆ ಅವಕಾಶ ನೀಡಲಾಗಿತ್ತು. ರಾಜ್ಯದ ಒಟ್ಟಾರೆ 2.12 ಕೋಟಿ ಪ್ಲಾಟ್ಗಳಲ್ಲಿ ಇದುವರೆಗೆ 69 ಲಕ್ಷ ಪ್ಲಾಟ್ಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಇನ್ನು ಮೂರು ದಿನ ಮಾತ್ರ (ಸೆ.10ರ ಕಡೆಯ ದಿನ) ಕಾಲಾವಕಾಶವಿದೆ.
ಬೆಳೆ ಸಮೀಕ್ಷೆ ಕಾರ್ಯಕ್ಕೆ ಆ.10ರಂದು ಚಾಲನೆ ನೀಡಿ, ಆ.24ರೊಳಗೆ ರಾಜ್ಯದ ಎಲ್ಲ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಯ ವಿವರಗಳನ್ನು ದಾಖಲಿ ಸಲು ಕೃಷಿ ಇಲಾಖೆ ಅವಕಾಶ ನೀಡಿತ್ತು. ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಮತ್ತೆ ಸೆ.10ರವರೆಗೆ ಅವಧಿ ವಿಸ್ತರಿಸಲಾಗಿತ್ತು. ಅಂಡ್ರಾಯ್ಡ್ ಫೋನ್ ಸೌಲಭ್ಯವಿಲ್ಲದವರಿಗೆ, ರೈತರ ಪರವಾಗಿ ಖಾಸಗಿ ನಿವಾಸಿಗಳ (ಪಿ.ಆರ್) ಮೂಲಕ ಅಪ್ಲೋಡ್ ಮಾಡಲೂ ಅವಕಾಶ ಕಲ್ಪಿಸಲಾಗಿತ್ತು. ಆದರೂ ಪ್ರಗತಿ ಸಾಧ್ಯವಾಗಿಲ್ಲ.
ವಿಜಯಪುರ ಪ್ರಥಮ: ವಿಜಯಪುರ (ಶೇ 58.32), ಬಾಗಲಕೋಟೆ (ಶೇ 56.12), ದಾವಣಗೆರೆ (ಶೇ 54.46) ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿದ ಮೊದಲ ಮೂರು ಸ್ಥಾನದಲ್ಲಿವೆ. ಕೊಡಗು (ಶೇ 11.57), ಉಡುಪಿ (ಶೇ 14.32), ಬೆಂಗಳೂರು ನಗರ (ಶೇ 14.52) ಜಿಲ್ಲೆಗಳು ಕೊನೆಯ ಮೂರು ಸ್ಥಾನದಲ್ಲಿವೆ. ಹಾವೇರಿ ಜಿಲ್ಲೆಯಲ್ಲಿ ಶೇ 43.25ರಷ್ಟು ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ನೆಟ್ವರ್ಕ್ ಸಮಸ್ಯೆ:‘ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಗಂಭೀರವಾಗಿದೆ. ಎಲ್ಲ ರೈತರ ಬಳಿ ಅಂಡ್ರಾಯ್ಡ್ ಮೊಬೈಲ್ಗಳಿಲ್ಲ. ಕೆಲವು ರೈತರಿಗೆ ತಾಂತ್ರಿಕ ಜ್ಞಾನದ ಕೊರತೆ ಇದೆ. ಕೃಷಿ ಇಲಾಖೆಯು ರೈತರಿಗೆ ತರಬೇತಿಯನ್ನೇ ನೀಡಿಲ್ಲ. ಹೀಗಾಗಿ ಬೆಳೆ ಸಮೀಕ್ಷೆ ಕಾರ್ಯ ಕುಂಠಿತಗೊಂಡಿದೆ’ ಎಂದು ರೈತ ಮುಖಂಡ ರಾಮಣ್ಣ ಕೆಂಚೆಳ್ಳೇರ ದೂರಿದರು.
***
ರೈತರಿಗೆ ತಾಂತ್ರಿಕ ತರಬೇತಿ ನೀಡಬೇಕು. ನಿಮ್ಮ ಬೆಳೆ– ನಿಮ್ಮ ಹಕ್ಕು ಎಂದು ಕೃಷಿ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಮಲ್ಲಿಕಾರ್ಜುನ ಬಳ್ಳಾರಿ
– ರೈತ ಮುಖಂಡ, ಹಾವೇರಿ
***
ಪ್ರಥಮ ಬಾರಿಗೆ ರೈತರೇ ಬೆಳೆ ಸಮೀಕ್ಷೆ ಮಾಡಿದ್ದು ಆಶಾದಾಯಕ ಬೆಳವಣಿಗೆ. ಸೆ.10ರ ನಂತರ ಬಾಕಿ ಕಾರ್ಯವನ್ನು ಪಿ.ಆರ್.ಗಳಿಂದ ಮಾಡಿಸುತ್ತೇವೆ
– ಮಂಜುನಾಥ ಕೃಷಿ ಜಂಟಿ ನಿರ್ದೇಶಕ, ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.