ಬೆಂಗಳೂರು: ಎಕರೆಗೆ 2.8 ಟನ್ ಇಳುವರಿ ನೀಡುವ ಭತ್ತ, 10 ತಿಂಗಳಲ್ಲಿ ಕಟಾವಿಗೆ ಬರುವ ಕಬ್ಬು ಸೇರಿ ಏಳು ಹೊಸ ತಳಿಗಳು ರೈತರಿಗೆ ಲಭ್ಯವಾಗಲಿವೆ.
ಜಿಕೆವಿಕೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ತಳಿಗಳನ್ನು ಬಿಡುಗಡೆ ಮಾಡಿದರು.
ಜುಲೈನಿಂದ ನವೆಂಬರ್ ತನಕ ನಾಟಿ ಮಾಡಬಹುದಾದ ಕಬ್ಬು, 3.2 ಕ್ವಿಂಟಲ್ ಇಳುವರಿ ಸಾಮರ್ಥ್ಯದ ಅಲಸಂದೆ, ಈ ಹಿಂದಿಗಿಂತ ಶೇ 15ರಷ್ಟು ಹೆಚ್ಚುವರಿ ಇಳುವರಿ ಸಾಮರ್ಥ್ಯದ ಸೂರ್ಯಕಾಂತಿ, 80 ದಿನಗಳಲ್ಲಿ ಕಟಾವಿಗೆ ಬರುವ ಉದ್ದಿನ ತಿಳಿಗಳು ಬಿಡುಗಡೆಯಾದವು. ಬರ, ನೀರಿನ ಕೊರತೆ, ರೋಗ ನಿರೋಧಕ ಶಕ್ತಿಯನ್ನು ಈ ತಳಿಗಳು ಹೊಂದಿವೆ ಎಂದು ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.
800 ಕೆಜಿ ಇಳುವರಿಯ ಹಲಸು
ಲಾಲ್ಬಾಗ್ ಮಧುರ ಎಂಬ ಹಲಸಿನ ತಳಿಯನ್ನು ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. 10ರಿಂದ 15 ವರ್ಷಗಳಲ್ಲಿ ಈ ತಳಿಯ ಮರ 80ರಿಂದ 100 ಕಾಯಿಗಳನ್ನು ಬಿಡಲಿದೆ.
ಸರಾಸರಿ ಪ್ರತಿ ಮರಕ್ಕೆ 640ರಿಂದ 800 ಕೆಜಿ ಇಳುವರಿ ಪಡೆಯಬಹುದು. ಪ್ರತಿ ಹಣ್ಣಿನ ತೂಕ 8ರಿಂದ 10 ಕೆಜಿ ಇರಲಿದೆ. ಒಂದು ತೊಳೆ ತೂಕ 68ರಿಂದ 120 ಗ್ರಾಂ ಇರುತ್ತದೆ. ತೊಳೆ ಹಳದಿ ಬಣ್ಣ ಇರಲಿದ್ದು, ಸಕ್ಕರೆ ಅಂಶವು 29ರಿಂದ 30 ಬ್ರಿಕ್ಸ್ನಷ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.