ADVERTISEMENT

ಬಹು ಬೆಳೆಯತ್ತ ಮನ್ಮಥ ಹೊಂಡಾಳೆ ಚಿತ್ತ

ಎರಡು ಎಕರೆ ಜಮೀನಿನಲ್ಲಿ 600 ಹೆಬ್ಬೇವು, 400 ಶ್ರೀಗಂಧ,

ಮನ್ನಥಪ್ಪ ಸ್ವಾಮಿ
Published 18 ಫೆಬ್ರುವರಿ 2020, 10:21 IST
Last Updated 18 ಫೆಬ್ರುವರಿ 2020, 10:21 IST
ಡೋಣಗಾಂವ್ ಯುವ ರೈತ ಮನ್ಮಥ ಹೊಂಡಾಳೆ ತಮ್ಮ ಹೊಲದಲ್ಲಿ ಬೆಳೆದ ಶ್ರೀಗಂಧ, ಹೆಬ್ಬೇವು ತೋರಿಸುತ್ತಿರುವುದು
ಡೋಣಗಾಂವ್ ಯುವ ರೈತ ಮನ್ಮಥ ಹೊಂಡಾಳೆ ತಮ್ಮ ಹೊಲದಲ್ಲಿ ಬೆಳೆದ ಶ್ರೀಗಂಧ, ಹೆಬ್ಬೇವು ತೋರಿಸುತ್ತಿರುವುದು   

ಔರಾದ್:ಇಲ್ಲಿಯ ಸಮೀಪದ ಡೋಣಗಾಂವ್ ಗ್ರಾಮದ ಯುವ ರೈತ ಕೃಷಿಯಲ್ಲಿ ಬಹು ಬೆಳೆ ಪದ್ಧತಿ ಅನುಸರಿಸಿ ಯಶಸ್ವಿಯಾಗಿದ್ದಾರೆ.

ಅವರೇ ಯುವ ರೈತ ಮನ್ಮಥ ಹೊಂಡಾಳೆ. ಅವರು ಕಳೆದರಡು ವರ್ಷಗಳಿಂದ ಬಹು ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ.

ಕೇವಲ ಎರಡು ಎಕರೆ ಪ್ರದೇಶದಲ್ಲಿ ಶುಂಠಿ, ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆದು ವರ್ಷಕ್ಕೆ ₹1.50 ಲಕ್ಷ ಆದಾಯ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಎರಡು ಎಕರೆ ಜಮೀನಿನಲ್ಲಿ 600 ಹೆಬ್ಬೇವು, 400 ಶ್ರೀಗಂಧ, 150 ಮಾವಿನ ಸಸಿ ನಾಟಿ ಮಾಡಿದ್ದಾರೆ. ಈ ಗಿಡಗಳ ನಡುವೆ ಶುಂಠಿ, ಈರುಳ್ಳಿ, ತರಕಾರಿ ಬೆಳೆದು ಕೃಷಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ನಮಗೆ 12 ಎಕರೆ ಜಮೀನು ಇದೆ. ಆದರೆ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಹಾಗೂ ಕಾರ್ಮಿಕರ ಸಮಸ್ಯೆಯಿಂದ ಹಾಕಿದ ಹಣ ವಾಪಸ್ ಬರುತ್ತಿಲ್ಲ. ಆದರಿಂದ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಎರಡು ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಡಿಸಲಾಗಿದೆ. ಹೆಚ್ಚು ನಿರ್ವಹಣೆ ಇಲ್ಲದ ದೀರ್ಘ ಕಾಲದಲ್ಲಿ ಆದಾಯ ಕೊಡಬಲ್ಲ ಶ್ರೀಗಂಧ ಮತ್ತು ಹೆಬ್ಬೇವು ನಾಟಿ ಮಾಡಲಾಗಿದೆ. 10-15 ವರ್ಷಗಳ ನಂತರ ಇವುಗಳಿಂದ ಉತ್ತಮ ಆದಾಯ ನಿರೀಕ್ಷೆ ಇದೆ. ಜತೆಗೆ ನಿತ್ಯದ ಖರ್ಚಿಗಾಗಿ ತೋಟಗಾರಿಕೆ ಬೆಳೆ ಅನುಕೂಲವಾಗಿದೆ’ ಎಂದು ರೈತ ಮನ್ಮಥ ಹೊಂಡಾಳೆ ಹೇಳುತ್ತಾರೆ.

ಸಾಂಪ್ರದಾಯಿಕ ಬೆಳೆಗಳಿಗಿಂತ ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ಹೆಚ್ಚಿನ ಅನುಕೂಲತೆಗಳಿವೆ. ಸರ್ಕಾರದ ನೆರವಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರಂತೂ ಇನ್ನೂ ತುಂಬಾ ಅನುಕೂಲ.

ಶ್ರೀಗಂಧ ಮತ್ತು ಹೆಬ್ಬೇವು ನಾಟಿ ಮಾಡಲು ಅರಣ್ಯ ಇಲಾಖೆಯವರು ಸಹಾಯಧನ ನೀಡುತ್ತಾರೆ. ಈ ಸಸಿಗಳ ಆರಂಭಿಕ ಮೂರು ವರ್ಷ ನಿರ್ವಹಣೆಗೂ ಆರ್ಥಿಕ ನೆರವು ಇದೆ. ಮಾವು, ಶುಂಠಿಯಂತಹ ತೋಟಗಾರಿಕೆ ಬೆಳೆಗಳಿಗೂ ಪ್ರೋತ್ಸಾಹಧನ ನೀಡಲಾಗುತ್ತದೆ. ಅದಕ್ಕೆ ಮಾರುಕಟ್ಟೆ ಸೌಲಭ್ಯವೂ ಇದೆ. ಹೀಗಾಗಿ ದೀರ್ಘ ಕಾಲದ ನಂತರ ಆದಾಯ ಕೊಡುವ ಗಿಡಗಳ ನಡುವೆ ಬಹು ಬೆಳೆ ಪದ್ಧತಿ ಅನುಸರಿಸಿದರೆ ರೈತರ ಕೈಯಲ್ಲಿ ಸದಾ ಹಣ ಇರುತ್ತದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.