ರಾಣೆಬೆನ್ನೂರು: ತಾಲ್ಲೂಕಿನ ಕಜ್ಜರಿ ಗ್ರಾಮದ ನಾಗಪ್ಪ ಬಸಪ್ಪ ಬಿದರಕಟ್ಟಿ ಅವರ ವೈವಿಧ್ಯಮಯ ಕೃಷಿ ಇತರರಿಗೆ ಪ್ರೇರಣೆಯಾಗಿದೆ.
ಮೂರು ಎಕರೆ ಜಮೀನಿನಲ್ಲಿ ಅಂತರ ಬೇಸಾಯವಾಗಿ ಬಿತ್ತನೆ ಮಾಡಿದ್ದ ಸಾವಿಯಿಂದ ಪ್ರತಿ ಎಕರೆಗೆ 7 ರಿಂದ 8 ಕ್ವಿಂಟಲ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಇವರ ಸಾವಿ ಬೇಸಾಯ ಸುತ್ತ ಮುತ್ತಲಿನ ರೈತರನ್ನು ಆಕರ್ಷಿಸುತ್ತಿದೆ. ಪ್ರತಿ ಎಕರೆಗೆ ₹ 5 ರಿಂದ 6 ಸಾವಿರ ಖರ್ಚನ್ನು ಮಾಡಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಯುವುದು ಕಡಿಮೆ ಕ್ಷೇತ್ರವಾಗಿದೆ. ಈ ಬೆಳೆಗೆ ರೋಗ ಮತ್ತು ಕೀಟಗಳ ಬಾಧೆ ಇಲ್ಲದೆ ಕಡಿಮೆ ಪೋಷಕಾಂಶಗಳೊಂದಿಗೆ ಬೆಳೆಯಬಹುದು ಹಾಗೂ ಆರೋಗ್ಯಕ್ಕೆ ತುಂಬಾ ಉತ್ತಮವಾದ ಆಹಾರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ನಿರೀಕ್ಷಿಸುತ್ತಿದ್ದೇನೆ. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನ ಪಡೆದು ಸಾವಿ ಬೆಳೆದಿದ್ದೇನೆ ಎನ್ನುತ್ತಾರೆ ಬಸಪ್ಪ ಬಿದರಕಟ್ಟಿ.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ.ಅಶೋಕ ಪಿ ಅವರು ಮಾತನಾಡಿ, ‘ಕೃಷಿಯಲ್ಲಿ ಆಸಕ್ತಿ ಹೊಂದಿದವರೆಲ್ಲ ನೋಡಲೇ ಬೇಕಾದ ಒಂದು ಮಾದರಿ ಸಾವೆ ಬೆಳೆದ ಜಮೀನು ಎಂದರೆ ತಪ್ಪಾಗಲಿಕ್ಕಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬೆಳೆಯಬಹುದು. ಮತ್ತೆ ನಮ್ಮ ಪೂರ್ವಜರ ಆಹಾರ ಪದ್ದತಿ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದು ಸಂತೋಷ ತಂದಿದೆ. ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಬೇಡಿಕೆಯಿದೆ. ಈ ಸಿರಿಧಾನ್ಯಗಳಲ್ಲಿ ಪ್ರೊಟೀನ್, ಲವಣಗಳು, ನಾರಿನಾಂಶ, ಸುಣ್ಣ, ಕಬ್ಬಿಣ ಇತ್ಯಾದಿಗಳನ್ನು ಹೊಂದಿರುವುದರಿಂದ ಹೆಚ್ಚು ಉಪಯುಕ್ತವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.