ADVERTISEMENT

ತಂಬಾಕು ಬಿಟ್ಟು ಪರ್ಯಾಯ ಬೆಳೆಯತ್ತ ವಾಲಿದ ಹುಣಸೂರಿನ ರೈತರು: ಕಾರಣವೇನು?

ಉತ್ತಮ ಹವಾಮಾನ: ತಂಬಾಕು ಹೆಚ್ಚು ಇಳುವರಿ ನಿರೀಕ್ಷೆ

ಎಚ್.ಎಸ್.ಸಚ್ಚಿತ್
Published 12 ಜುಲೈ 2020, 3:37 IST
Last Updated 12 ಜುಲೈ 2020, 3:37 IST
ಹುಣಸೂರು ತಾಲ್ಲೂಕಿನ ವಾಣಿಜ್ಯ ಬೆಳೆ ತಂಬಾಕು ಹದವಾದ ಮಳೆಗೆ ಉತ್ಕೃಷ್ಠವಾಗಿ ಬಳೆದಿರುವ ತಂಬಾಕು ಹೊಲದಲ್ಲಿ ಕಾರ್ಯನಿರತ ರೈತ.
ಹುಣಸೂರು ತಾಲ್ಲೂಕಿನ ವಾಣಿಜ್ಯ ಬೆಳೆ ತಂಬಾಕು ಹದವಾದ ಮಳೆಗೆ ಉತ್ಕೃಷ್ಠವಾಗಿ ಬಳೆದಿರುವ ತಂಬಾಕು ಹೊಲದಲ್ಲಿ ಕಾರ್ಯನಿರತ ರೈತ.   

ಹುಣಸೂರು: ಹುಣಸೂರು ಉಪವಿಭಾಗದ ವಾಣಿಜ್ಯ ಬೆಳೆ ತಂಬಾಕು ಪ್ರಸಕ್ತ ಸಾಲಿನಲ್ಲಿ ಬೆಳೆಯುವ ಪ್ರಮಾಣವನ್ನು ರೈತರು ಕಡಿಮೆ ಮಾಡಿ ಪರ್ಯಾಯ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ.

2019 ರಲ್ಲಿ ರಾಜ್ಯದಲ್ಲಿ 82 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೇಸಾಯ ಮಾಡಲಾಗಿತ್ತು . 2020ರ ಸಾಲಿನಲ್ಲಿ 76 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬೇಸಾಯ ಸೀಮಿತಗೊಂಡಿದೆ. ಇದರಿಂದ ಶೇ 10ರಿಂದ 12ರಷ್ಟು ರೈತರು ಶುಂಠಿ ಮತ್ತು ಮುಸುಕಿನ ಜೋಳ ಬೆಳೆದಿದ್ದಾರೆ.

ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ರಾಧಾಕೃಷ್ಣ ಮಾತನಾಡಿ, ಕಳೆದ ಸಾಲಿನಲ್ಲಿ ಅತಿಯಾದ ಮಳೆಗೆ ಗುಣಮಟ್ಟ ಕಳೆದುಕೊಂಡು ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರ್ಯಾಯ ಬೆಳೆಗೆ ವಲಸೆ ಹೋಗಿದ್ದಾರೆ ಎನ್ನುವರು. ಪ್ರಸಕ್ತ ಸಾಲಿನಲ್ಲಿ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ ಎನ್ನುವರು.

ADVERTISEMENT

ಮೂರು ತಳಿ: ರಾಜ್ಯದ ವಾತಾವರಣಕ್ಕೆ ಮೂರು ತಳಿಗಳನ್ನು ತಂಬಾಕು ಬಿತ್ತನೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿ ವಿತರಿಸಿದೆ. ಕಾಂಚನ ಮತ್ತು ಸಿ.ಎಸ್. 3 ತಳಿ ಹೆಕ್ಟೇರ್‌ಗೆ 2 ಸಾವಿರ ಕೆ.ಜಿ. ಗರಿಷ್ಠ ಇಳುವರಿ ಬರಲಿದೆ. ಎಫ್‌ಸಿಎಚ್‌ 222 ತಳಿ ಸೊರಗು ರೋಗ ನಿರೋಧಕ ಶಕ್ತಿ ಹೊಂದಿದ್ದು, ಈ ತಳಿ ಎಲೆ ಹದಗೊಳಿಸಿದ ಬಳಿಕ ‘ನಿಂಬೆ ಬಣ್ಣ’ ಕ್ಕೆ ಬರಲಿದೆ. ಈ ತಂಬಾಕಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು ಇಳುವರಿ ಕಡಿಮೆ ಎನ್ನುವರು.

ಮೇ ತಿಂಗಳಲ್ಲಿ 137 ಮಿ.ಮೀ ಮಳೆಯಾಗಿ ಹುಣಸೂರು ಉಪವಿಭಾಗ ಮತ್ತು ಹಾಸನ ಜಿಲ್ಲೆಯ ಕೆಲವು ಭಾಗದಲ್ಲಿ ಒಟ್ಟು 76 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ನಡೆದಿದೆ. ಇದಕ್ಕೆ ಪೂರಕವಾಗಿ ಜೂನ್ ತಿಂಗಳಲ್ಲಿ ಹದವಾದ ಮಳೆ ಆಗಿ, ರಸಗೊಬ್ಬರ ನೀಡಿದ ಪರಿಣಾಮ ತಂಬಾಕು ನಿರೀಕ್ಷೆಗಿಂತಲೂ ಉತ್ತಮ ಇಳುವರಿ ಬರುವ ಎಲ್ಲಾ ಸಾಧ್ಯತೆ ಇದೆ ಎನ್ನುವರು ವಿಜ್ಞಾನಿ ಡಾ.ಮಹದೇವಸ್ವಾಮಿ.

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 88 ದಶಲಕ್ಷ ಕೆ.ಜಿ. ತಂಬಾಕು ಉತ್ಪಾದಿಸಲು ಅನುಮತಿ ನೀಡಿದೆ. ಉತ್ತಮ ಹವಾಮಾನದಿಂದಾಗಿ 90 ರಿಂದ 95 ದಶಲಕ್ಷ ಕೆ.ಜಿ. ತಂಬಾಕು ಉತ್ಪತ್ತಿಯಾಗುವ ನಿರೀಕ್ಷೆ ಇದೆ ಎನ್ನುವರು ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.