ADVERTISEMENT

ಅಡಿಕೆ ಕೌಶಲ ಪಡೆ

ನಾ.ಕಾರಂತ ಪೆರಾಜೆ
Published 22 ಏಪ್ರಿಲ್ 2019, 19:30 IST
Last Updated 22 ಏಪ್ರಿಲ್ 2019, 19:30 IST
ಅಡಿಕೆ ಕೌಶಲ ಪಡೆ
ಅಡಿಕೆ ಕೌಶಲ ಪಡೆ   

ಕೊನೆಗಾರರ ಕೊರತೆಯಿಂದಾಗಿ ಅಡಿಕೆ ಕೃಷಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇದನ್ನು ಅರಿತ ಕೆಲವು ಸಂಘಟನೆಗಳು, ಕೊನೆಗಾರರನ್ನು ರೂಪಿಸುವುದಕ್ಕಾಗಿ ಶಿಬಿರಗಳನ್ನು ನಡೆಸುತ್ತಿವೆ. ಎರಡು ಶಿಬಿರ ಮುಗಿದಿದೆ. 53 ಕೊನೆಗಾರರು ರೂಪುಗೊಂಡಿದ್ದಾರೆ.

***

ಏನಿದು ಅಡಿಕೆ ಕೌಶಲ ಪಡೆ?

ADVERTISEMENT

ತೀರ್ಥಹಳ್ಳಿ, ಮಂಗಳೂರು ಸೇರಿದಂತೆ ಕರಾವಳಿ ಮಲೆನಾಡಿನ ಭಾಗದಲ್ಲಿ ವರ್ಷದಿಂದೀಚೆಗೆ ಕೇಳಿಬರುತ್ತಿರುವ ಪದವಿದು. ಅಡಿಕೆ ಮರ ಏರಿ ಮಾಡಬಹುದಾದ ಕೊನೆಗಾರರ ಕೆಲಸಗಳನ್ನು ಕಲಿಸುವ ತರಬೇತಿ. ತರಬೇತಿಯಲ್ಲಿ ಅಡಿಕೆ ಮರ ಏರುವ ಕೌಶಲಗಳನ್ನು ಕಲಿತು ಸಿದ್ಧವಾಗುವ ತಂಡವೇ ಕೌಶಲ ಪಡೆ.

ಈಗಾಗಲೇ ಎರಡು ತಂಡಗಳು ತರಬೇತಿ ಪಡೆದಿವೆ. ಈಗ ಮೂರನೇ ತಂಡ ಸಿದ್ಧವಾಗಿದೆ. ಕೊನೆಗಾರರು ರೂಪುಗೊಳ್ಳುತ್ತಿದ್ದಾರೆ. ಕಲಿಕೆಗಾಗಿ ಸ್ವಾನುಭವದ ಪ್ರಾಯೋಗಿಕ ಜ್ಞಾನದ ಅಲಿಖಿತ ಸಿಲೆಬಸ್. ಈ ರಂಗದಲ್ಲಿ ಈಗಾಗಲೇ ಒಂದು ಒಂದೂವರೆ ದಶಕಗಳ ಕಾಲ ದುಡಿದು ಅನುಭವಿಗಳೇ ಈ ತರಬೇತಿಯ ಅಧ್ಯಾಪಕರು.

ಮಂಗಳೂರು ಅಡಿಕೆ ಸಹಕಾರಿ ಸಂಸ್ಥೆ ‘ಕ್ಯಾಂಪ್ಕೊ’ ಅನ್ಯಾನ್ಯ ಸಂಸ್ಥೆಗಳ ಹೆಗಲೆಣೆಯಲ್ಲಿ ‘ಅಡಿಕೆ ಕೌಶಲ ಪಡೆ’ಯ ಎರಡು ಶಿಬಿರಗಳನ್ನು ನಡೆಸಿತ್ತು. ಕಳೆದ ಡಿಸೆಂಬರ್ ಮತ್ತು ಫೆಬ್ರವರಿಯಲ್ಲಿ ವಿಟ್ಲ ಸಿ.ಪಿ.ಸಿ.ಆರ್.ಐ ಆವರಣದಲ್ಲಿ ಶಿಬಿರ ಸಂಪನ್ನವಾಗಿದ್ದು, 53 ಶಿಬಿರಾರ್ಥಿಗಳು ಅಡಿಕೆ ಮರ ಏರುವ ಶಿಕ್ಷಣ ಪಡೆದಿದ್ದರು.

ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಮೂರನೇ ಕೌಶಲ ಪಡೆ ತರಬೇತಿ ಶಿಬಿರವು ಏಪ್ರಿಲ್ ಎರಡನೇ ವಾರ ನಡೆಯಿತು. 13 ಮಂದಿ ಭಾಗವಹಿಸಿದ್ದರು. ಕ್ಯಾಂಪ್ಕೋದ ನಿರ್ದೇಶನದಲ್ಲಿ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಇನ್ನಿತರ ಸಹಕಾರಿ ಸಂಘಗಳೊಂದಿಗೆ ಸೇರಿ ಶಿಬಿರ ನಡೆಸಿದೆ.

ತೀರ್ಥಹಳ್ಳಿಯಿಂದ ಆರಂಭ

2018ರ ಅಕ್ಟೋಬರ್ ತಿಂಗಳು. ತೀರ್ಥಹಳ್ಳಿಯ ‘ಎಲೈಟ್’ ಕೃಷಿಕರ ಬಳಗವು ಕೊನೆಗಾರ ತರಬೇತಿ ಏರ್ಪಡಿಸಿತ್ತು. ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ನಡೆದ ಈ ಶಿಬಿರಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ನಿಯೋಗದ ಭೇಟಿ ನೀಡಿತ್ತು. ಚಟುವಟಿಕೆ ಗಮನಿಸಿ, ಕಾಸರಗೋಡು-ಕರಾವಳಿಯಲ್ಲೂ ಶಿಬಿರ ಸಂಯೋಜಿಸುವ ಸಂಕಲ್ಪ ಮಾಡಿತು ನಿಯೋಗ.

ತರಬೇತಿ ಆರಂಭದಲ್ಲೇ ಪ್ರತಿಕ್ರಿಯೆ ನೀರಸ. ‘ಒಂದು ಕ್ಷಣ ಆತಂಕವಾಗಿತ್ತು. ಸಹಕಾರಿ ಸಂಘಗಳಿಗೆ ಈ ಕಾರ್ಯದಲ್ಲಿ ಕೈ ಜೋಡಿಸುವಂತೆ ವಿನಂತಿಸಿದ್ದೆವು. ಜಾಲತಾಣಗಳಲ್ಲಿ ವಿಚಾರ ಹರಿಯ ಬಿಟ್ಟೆವು. ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದುವು.’ ಮೊದಲ ಶಿಬಿರದ ಮಾಹಿತಿ ನೀಡುತ್ತಾರೆ ಶಂ.ನಾ.ಖಂಡಿಗೆ. ಇವರು ಕ್ಯಾಂಪ್ಕೊ ಉಪಾಧ್ಯಕ್ಷರು ಹಾಗೂ ಶಿಬಿರದ ನಿರ್ದೇಶಕರು.

ಪ್ರಾಯೋಗಿಕ ಶಿಕ್ಷಣ

ಕಾಲಿಗೆ ‘ತಳೆ’ ಕಟ್ಟಿ ಅಡಿಕೆ ಮರ ಏರುವಲ್ಲಿಂದ ಕೊಯ್ಲು ತನಕದ ಪ್ರಾಕ್ಟಿಕಲ್ ಶಿಕ್ಷಣ. ಅಡಿಕೆ ಹಾಳೆಯಿಂದ ತಳೆ ಕಟ್ಟುವುದು ಪಾರಂಪರಿಕ ವಿಧಾನ. ಈಗ ಸಿಮೆಂಟಿನ ಅಥವಾ ರಾಸಾಯನಿಕ ಗೊಬ್ಬರದ ಗೋಣಿಯನ್ನು ಬಿಡಿಸಿ ಜಾಗ್ರತೆಯಾಗಿ, ಸಡಿಲಗೊಳ್ಳದಂತೆ ಬಿಗಿಯಾಗಿ ಕಟ್ಟುವುದು ಮೊದಲ ಪಾಠ. ಜತೆಗೆ ಮರ ಏರುವಾಗ ಮರ್ಮಾಂಗಕ್ಕೆ ಏಟು ಬೀಳದಂತೆ ಹಾಳೆಯಿಂದ ತಯಾರಿಸುವ ‘ಸೆಂಟರ್ ಪ್ಯಾಡ್’ ಎನ್ನುವ ರಕ್ಷಕನ ತಯಾರಿ.

ಮರ ಏರುವಾಗ ಕಾಲಿನ ರಚನೆ, ಕೈಯನ್ನು ಮರಕ್ಕೆ ಹೇಗೆ ಸೇರಿಸಿಕೊಳ್ಳಬೇಕು, ಮರದಲ್ಲಿ ಕುಳಿತು ಔಷಧ ಸಿಂಪಡಿಸಲು, ಕೊಯ್ಲು ಮಾಡುವಾಗ ಬಳಸುವ ‘ಕೊಟ್ಟೆಮಣೆ’ ಬಳಕೆ, ಅದಕ್ಕೆ ರಕ್ಷಣಾತ್ಮಕವಾಗಿ ಹಗ್ಗ ಹಾಕುವ ವಿಧಾನ, ಕೊಟ್ಟೆಮಣೆಯೊಂದಿಗೆ ಮರ ಏರುವ, ಇಳಿಯುವ ಜಾಣ್ಮೆ, ಅಡಿಕೆ ಕೊಯ್ಲಿನ ಕೊಕ್ಕೆಗೆ (ಬಿದಿರನ ಗಳ) ಸಿಕ್ಕಿಸುವ ಹಲ್ಲಿನ ತಯಾರಿ, ಕೊಕ್ಕೆ ಹಿಡಿಯವ ಶೈಲಿ, ಹಣ್ಣಡಿಕೆ ಕೊಯ್ಯುವಾಗ ಯಾವ ವಿನ್ಯಾಸದಲ್ಲಿ ಕೊಕ್ಕೆ ಇರಬೇಕೆನ್ನುವ ಪಾಠ.. ಇವೇ ಮೊದಲಾದ ವೃತ್ತಿಸೂಕ್ಷ್ಮಗಳನ್ನು ಅನುಭವಿಗಳು ಕಲಿಸಿಕೊಟ್ಟರು.

ಸುರಕ್ಷತೆಗೆ ಆದ್ಯತೆ

ರಕ್ಷಣೆಯ ದೃಷ್ಟಿಯಿಂದ ಶಿಬಿರಾರ್ಥಿಗಳ ಸೊಂಟಕ್ಕೆ ‘ಸೇಫ್ಟಿ ಬೆಲ್ಟ್’ (ಹಾರ್ನೆಸ್) ಬಿಗಿದು ಮರ ಏರಲು ಅಭ್ಯಾಸ ಮಾಡಿಸಲಾಗಿತ್ತು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕೃಷಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಶಶಿಧರ್ ಸಾಧನದೊಂದಿಗೆ ಎರಡೂ ಶಿಬಿರದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. “ಸೇಪ್ಟಿ ಬೆಲ್ಟ್ ಕೊಟ್ಟೆಮಣೆಗೆ ಪರ್ಯಾಯ. ಆದರೆ ಬೆಲ್ಟಿನ ಹುಕ್ ಇದೆಯಲ್ವಾ, ಅದು ಕೊಟ್ಟೆಮಣೆಯ ಬಳ್ಳಿಗೆ ಸೇರಿಸಿಕೊಂಡರೆ ಡಬ್ಬಲ್ ಸೇಫ್! ಮರ ಏರಿದಾಗ ಅಕಸ್ಮಾತ್ ಬೀಳದ ಹಾಗೆ ಪಾಲ್ ಅರೆಸ್ಟರ್ ಸಾಧನ.” ಎಂದು ಶಿಬಿರಾರ್ಥಿಗಳನ್ನು ಹುರಿದುಂಬಿಸಿದ್ದರು. ಬೇರೆ ಬೇರೆ ಕ್ಷೇತ್ರದಲ್ಲಿ ಬಳಸುವ ಸುರಕ್ಷಾ ಸಾಧನಗಳನ್ನು ಅಭ್ಯಸಿಸಿದ ಶಶಿಧರ್ ಈ ಕೌಶಲ ಪಡೆಗಾಗಿಯೇ ಸೇಫ್ಟಿ ಬೆಲ್ಟ್‌ ಅನ್ನು ವಿನ್ಯಾಸ ಮಾಡಿದ್ದಾರೆ. (ಅನುಭವಿಗಳು ಮೊದಲೇ ಮರ ಏರಿ ಮೇಲ್ತುದಿಯಿಂದ ಹಗ್ಗವೊಂದನ್ನು ಕಟ್ಟಿ ಇಳಿಬಿಡಬೇಕು. ಇದಕ್ಕೆ ಫಾಲ್ ಅರೆಸ್ಟರ್ ಜೋಡಣೆ. ಮರ ಏರುವ ಹೊಸಬರ ದೇಹಕ್ಕೆ ಫಾಲ್ ಅರೆಸ್ಟರನ್ನು ಸಿಕ್ಕಿಸಿದರೆ ಆಯಿತು. ಯಾವುದೇ ಸಂದರ್ಭದಲ್ಲಿ ಅದು ಮರದಿಂದ ಬೀಳಬಿಡುವುದಿಲ್ಲ)

ನೆಟ್‌ ಪ್ರಾಕ್ಟೀಸ್ ಉಂಟು

‘‘ಏನೂ ಅರಿವಿಲ್ಲದವರಿಗೆ ನಾಲ್ಕು ಮರಗಳ ಮಧ್ಯೆ ನಾಲ್ಕಡಿ ಎತ್ತರದಲ್ಲಿ ನೆಟ್ ಬಿಗಿದು ಮರ ಏರಲು ಕಲಿಸಿದ್ದೇವೆ. ಹೊಸಬರು ಇವನ್ನೆಲ್ಲಾ ಬಳಸಿ ಕಲಿತು ಶಿಬಿರದ ಎರಡನೇ ದಿವಸವೇ ಮರ ಏರಲು ಯತ್ನಿಸಿ ಯಶಸ್ವಿಯಾಗಿದ್ದಾರೆ. ಐದು ದಿವಸದ ಕಲಿಕೆಯಲ್ಲಿ ‘ಎಲ್ ಬೋರ್ಡ್’ ಪರವಾನಿಗೆ ಮಾತ್ರ. ಮುಂದೆ ಇವರೆಲ್ಲಾ ಪರಿಣತರ ಜತೆಗಿದ್ದು ಪಳಗಬೇಕು. ಜಾಣ್ಮೆಯ ಸೂಕ್ಷ್ಮಗಳನ್ನು ಅನುಷ್ಠಾನ ಮಾಡುತ್ತಾ ವಿದ್ಯೆಯನ್ನು ತಮ್ಮದನ್ನಾಗಿಸಬೇಕು” ಎನ್ನುವುದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರ ಸೂಚನೆ.

ಇದು ಆಧುನಿಕ ತಂತ್ರಜ್ಞಾನದ ಕಾಲ. ಮರ ಏರಲು ಯಾಂತ್ರಿಕ ವಿಧಾನವನ್ನು ಕಲಿಸಬಹುದಲ್ಲಾ? ಎನ್ನುವ ಪ್ರಶ್ನೆಗೆ ಖಂಡಿಗೆ ಉತ್ತರ : “ಶ್ರಮ ಬೇಡುವ ಕೆಲಸಗಳನ್ನು ಯಾಂತ್ರೀಕರಣಗೊಳಿಸಿದರೆ ಒಳ್ಳೆಯದೇ. ಇದಕ್ಕಾಗಿ ಪರಿಪೂರ್ಣ ಯಂತ್ರಗಳು ಬಂದಿವೆಯೇ? ಬಂದರೆ ಸಂತೋಷ. ಅಪರಿಪೂರ್ಣವಾದ ಯಂತ್ರಗಳನ್ನು ಬಳಸುವುದು ಅಪಾಯ. ಅಡಿಕೆ ಮರದ ಸಿಪ್ಪೆ ಎದ್ದು ಹೋಗುವುದು ಕೂಡಾ ಮರದ ಬೆಳವಣಿಗೆಗೆ ಮಾರಕ. ಮೊದಲು ವೈಯಕ್ತಿಕವಾಗಿ ಮರ ಏರಲು ಕಲಿತು ವಿಶ್ವಾಸ ಹೊಂದುವುದು ಮುಖ್ಯ.”

ರಿಯಾಯಿತಿಯಲ್ಲಿ ಪರಿಕರ

ಶಿಬಿರಾರ್ಥಿಗಳಿಗೆ ಕೊಟ್ಟೆಮಣೆಯನ್ನು ಕ್ಯಾಂಪ್ಕೋ ಉಚಿತವಾಗಿ ನೀಡಿದೆ. ಸ್ವಂತಕ್ಕಾಗಿ ಸೇಫ್ಟಿ ಬೆಲ್ಟ್ ಕೂಡಾ ರಿಯಾಯಿತಿ ದರದಲ್ಲಿ - ಅಂದರೆ ಅಪೇಕ್ಷಿತರು ಶೇ 50ರಷ್ಟು, ಮಿಕ್ಕ ಶೇ 50 ಕ್ಯಾಂಪ್ಕೊ ಭರಿಸಿದೆ. ಶಿಬಿರಾರ್ಥಿಯ ಹೆಸರಿನಲ್ಲಿ ₹5 ಲಕ್ಷ ವಿಮೆ. ಜತೆಗೆ ಗುರುತು ಕಾರ್ಡು. ಕ್ಯಾಂಪ್ಕೊದ ಜಾಲತಾಣದಲ್ಲಿ ಶಿಬಿರಾರ್ಥಿಗಳ ವಿವರಗಳನ್ನು ಅಪ್‍ಲೋಡ್ ಮಾಡಲಿದೆ. ಶಿಬಿರದ ಪೂರ್ವದಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿದೆ. ಜತೆಗೆ ದೈನಂದಿನ ಶಿಷ್ಯ ವೇತನ ಕೂಡಾ ನೀಡುತ್ತಿದೆ.

“ಈ ಕೆಲಸಗಳನ್ನು ಸಹಕಾರಿ ಸಂಘಗಳು ಮುಂದುವರಿಸಬೇಕು. ಕೆಲಸಗಳಿಗೆ ಯುವಕರು ಬರ್ತಾ ಇಲ್ಲ ಎನ್ನುವುದು ಸುಳ್ಳು. ಸರಿಯಾದ ರೀತಿಯಲ್ಲಿ ಯೋಜನೆ ಹಾಕಿಕೊಂಡರೆ ಬರ್ತಾರೆ. ಐದು ದಿವಸದಲ್ಲಿ ಕಲಿಕೆ ಪರಿಪೂರ್ಣ ಆಗದು. ಸೈಕಲ್ ಕಲಿತ ನಂತರ ಸ್ಕೂಟರ್ ಚಲಾಯಿಸಲು ಸುಲಭವಲ್ವಾ. ಅಡಿಕೆ ಕೃಷಿ ನೆಲೆ ನಿಲ್ಲಬೇಕಾದರೆ ಅದಕ್ಕೆ ಅಗತ್ಯವಿರುವ ಕೊಯ್ಲು ವ್ಯವಸ್ಥೆ ರೂಪಿಸಿಕೊಳ್ಳಲು ಕೃಷಿಕ ಸಮುದಾಯ ಕ್ರಿಯಾಶೀಲವಾಗಬೇಕಾಗಿದೆ.” ಅಡಿಕೆ ಕೌಶಲ ಪಡೆಯ ಕನಸನ್ನು ಹೊತ್ತ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಆಶಯ.

ಅಡಿಕೆ ಕೌಶಲ ಪಡೆಯ ತಯಾರಿ ಸುಲಲಿತ ಆಗಬೇಕೆಂದರೆ, ನಮ್ಮ ಮಧ್ಯೆ ಇರುವ ‘ಡ್ರೈವಿಂಗ್ ಸ್ಕೂಲಿನಂತೆ’ ಕಲಿಸುವ ವ್ಯವಸ್ಥೆಗಳು ರೂಪುಗೊಳ್ಳಬೇಕು. ಆಗ ಅಡಿಕೆ ಕ್ಷೇತ್ರದ ಶ್ರಮದ ಕೆಲಸಗಳು ಹಗುರವಾಗುವುದರಲ್ಲಿ ಸಂಶಯವಿಲ್ಲ. ಜತೆಗೆ ಯುವಕರ ನಗರ ವಲಸೆಗೂ ಬ್ರೇಕ್! ವೈಯಕ್ತಿಕವಾಗಿ ಹಾಗೂ ಕೊನೆಗಾರ ವೃತ್ತಿಗೆ ಗೌರವದ ಸ್ಥಾನ, ಮಾನ.

ತರಬೇತಿ ಪಡೆದವರ ಅಭಿಮತ

ಮೊದಲು ಅಡಿಕೆ ಗೊನೆಗಳಿಗೆ ಕೊಕ್ಕೆ ಹಾಕಲು ತಿಳಿದಿರಲಿಲ್ಲ. ಶಿಬಿರದಲ್ಲಿ ಕಲಿತೆ. ನಂತರ ಒಂದು ತಿಂಗಳು ಇದೇ ಕೆಲಸ ಕಲಿತೆ. ಈಗ ಸಲೀಸು.

– ಸುರೇಶ ಪೆರಡಾಲ

ಕೃಷಿಯಲ್ಲಿ ಗೌರವವನ್ನು ನಾವೇ ಇಟ್ಟುಕೊಳ್ಳಬೇಕು. ಆದರೆ ಕಳೆದುಕೊಳ್ಳುತ್ತಿದ್ದೇವೆ. ನನ್ನ ತಂದೆಯವರು ಮರ ಏರಲು ಬಿಡಲಿಲ್ಲ. ಹಾಗಾಗಿ ಕಲಿಕೆಗೆ ಬಂದಿದ್ದೇನೆ. ಕಲಿತಿದ್ದೇನೆ. ಇನ್ನು ತೋಟಕ್ಕೆ ಹೋಗಿ ಪ್ರಯೋಗ.

– ನವೀನ್ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.