ADVERTISEMENT

ಕೀಟದಿಂದ ರಕ್ಷಣೆಗೆ ಪ್ಲಾಸ್ಟಿಕ್ ಅಂಗಿ!

ನಾ.ಕಾರಂತ ಪೆರಾಜೆ
Published 20 ಮೇ 2019, 19:30 IST
Last Updated 20 ಮೇ 2019, 19:30 IST
ಪ್ಲಾಸ್ಟಿಕ್ ಕವಚ
ಪ್ಲಾಸ್ಟಿಕ್ ಕವಚ   

‘ಕರಾವಳಿಯಲ್ಲಿ ಬೀನ್ಸ್ ಕೃಷಿ ವಿರಳ. ಇತರ ತರಕಾರಿಗಳಿಗಿಂತ ಹೆಚ್ಚು ನಿಗಾ ಮತ್ತು ಆರೈಕೆ ಮಾಡಿದರೆ ವಾಣಿಜ್ಯ ಮಟ್ಟದಲ್ಲಿ ಅಲ್ಲದಿದ್ದರೂ ಮನೆ ಬಳಕೆಗಾಗಿ ಧಾರಾಳ ಬೆಳೆಯಬಹುದು.’ ಬೊಮ್ಮೆಟ್ಟಿಯ ರಘುರಾಮ ಹಾಸನಡ್ಕರು ಮಳೆಗಾಲದ ತರಕಾರಿ ಕೃಷಿಗೆ ಅಂಗಳವನ್ನು ಸಿದ್ಧ ಮಾಡುತ್ತಾ ಸ್ವಾನುಭವಕ್ಕೆ ಮಾತು ಕೊಟ್ಟರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕದವರು.

ದಶಕಕ್ಕೂ ಮಿಕ್ಕಿದ ತರಕಾರಿ ಕೃಷಿಯಲ್ಲಿ ರಘುರಾಮರದು ಸ್ವ-ವಿಧಾನ. ‘ಮಾಡಿ-ಬೇಡಿ’ಗಳನ್ನು ಮಾಡುತ್ತಾ ಅನುಭವ ರೂಢಿಸಿಕೊಂಡವರು. ಸಾಮಾನ್ಯವಾಗಿ ತರಕಾರಿ ಕೃಷಿಯಲ್ಲಿ ಅದಕ್ಕೆ ಬಾಧಿಸುವ ಕೀಟಗಳ ನಿಯಂತ್ರಣ ತಲೆನೋವು. ಇವರು ಯಾವುದೇ ಕೀಟನಾಶಕ ಬಳಸದೆ, ರಾಸಾಯನಿಕ ಗೊಬ್ಬರಗಳನ್ನು ಹಾಕದೆ ತಮಗೆ ಬೇಕಾದಷ್ಟು ವೈವಿಧ್ಯ ತರಕಾರಿಗಳನ್ನು ಬೆಳೆಯುತ್ತಾರೆ. ಇದು ಹೇಗ ಸಾಧ್ಯವಾಯಿತು? ಅವರನ್ನು ಮಾತಿಗೆಳೆದೆ.

ಮುಳ್ಳುಸೌತೆ ಮತ್ತು ಪಡುವಲಕಾಯಿ(ಪಟ್ಲಕಾಯಿ)ಗೆ ಬಾಧಿಸುವ ಹಣ್ಣುಹುಳಗಳ ನಿಯಂತ್ರಣಕ್ಕೆ ‘ಪ್ಲಾಸ್ಟಿಕ್ ಅಂಗಿ’ ವಿಧಾನದ ‘ಕೆಣಿ’(ಉಪಾಯ)ಯಲ್ಲಿ ಗೆದ್ದಿದ್ದಾರೆ. ಮಿಡಿ ಕಚ್ಚುವ ಹಂತದಲ್ಲೇ ಮಿಡಿಗಳಿಗೆ ಪ್ಲಾಸ್ಟಿಕ್ ಕವರ್ (ತೊಟ್ಟೆ) ಹೊದಿಸುತ್ತಾರೆ. ತರಕಾರಿಯ ಗಾತ್ರವನ್ನು ಹೊಂದಿಕೊಂಡು ಕವರುಗಳ ಆಯ್ಕೆ. ಪಡುವಲಕಾಯಿಗೆ ಉದ್ದನೆಯ ಗಾತ್ರದ ಪ್ಲಾಸ್ಟಿಕ್ ಬೇಕು. ಬಳಸಿದ ಪ್ಲಾಸ್ಟಿಕನ್ನು ಯಾ ಪ್ಲಾಸ್ಟಿಕ್ ಅಂಗಿಯನ್ನು ಮುಂದಿನ ವರ್ಷವೂ ಮರುಬಳಕೆ.

ADVERTISEMENT

‘ತರಕಾರಿ ಚಪ್ಪರದ ಮಧ್ಯೆ ‘ಮೋಹಕ ಬಲೆ’ಯನ್ನು ತೂಗಿಸಿದ್ದೇನೆ. ತುಂಬಾ ಪ್ರಯೋಜನವಾಗಿದೆ. ಮುಳ್ಳುಸೌತೆಯ ಮಿಡಿಯ ಹೊರಮೈ ತುಂಬಾ ಮೆದುವಾಗಿರುತ್ತದೆ. ಇದನ್ನು ಹಣ್ಣುಹುಳವು ಎಳೆಯದರಲ್ಲೆ ಕಡಿದು ಬಿಡುತ್ತದೆ. ಕಾಯಿ ಬೆಳೆದಂತೆ ಹೊರಮೈ ಗಟ್ಟಿ‌ಯಾಗುತ್ತದೆ. ನಂತರ ಹುಳಗಳ ಬಾಧೆ ಕಡಿಮೆ’ ಎನ್ನುತ್ತಾರೆ.

ಪಡುವಲಕಾಯಿಗೂ ಅಂಗಿ ಪ್ರಯೋಗ
ಸುಮಾರು ಮೂರಡಿ ಬೆಳೆದ ಪಟ್ಲಕಾಯಿಗೆ ಎಳತರಲ್ಲಿ ರೋಗಬಾಧೆ. ಒಂದು ರೀತಿಯ ಕಂಬಳಿ ಹುಳದಂತಿರುವ ಹುಳ. ಇದು ಎಳೆಯ ಕಾಯನ್ನು ತೂತು ಮಾಡುತ್ತದೆ. ಈ ಹುಳವನ್ನು ದಿನಂಪ್ರತಿ ಹುಡುಕಿ ಹುಡುಕಿ ನಾಶ ಮಾಡುವುದೊಂದೇ ದಾರಿ. ರಘುರಾಮರ ತರಕಾರಿ ಕೃಷಿಯಲ್ಲಿ ಬೆಳಗ್ಗಿನ ಪಾಳಿಯು ಹುಳುಗಳ ಹುಡುಕಾಟಕ್ಕೆ ಮೀಸಲು!

ಅಂಗಳದಂಚಿನಲ್ಲಿ ಬೀನ್ಸ್ ಕೃಷಿ. ಸುಡುಮಣ್ಣಿನ ಮಡಿ ಮಾಡಿ ಅದರಲ್ಲಿ ಬೀಜಪ್ರದಾನ. ವಾರಕ್ಕೊಮ್ಮೆ ಸೆಗಣಿ ನೀರಿನ ಉಣಿಕೆ. ಜತೆಗೆ ಹಟ್ಟಿಗೊಬ್ಬರ. ಬಳ್ಳಿ ಬೆಳೆದಂತೆ ಅಡರಿನ (ಮರಗಿಡಗಳ ಒಣ ರೆಂಬೆ) ಆಧಾರ. ಮಡಿ ಎತ್ತರವಾಗಿರಬೇಕು. ಬುಡದಲ್ಲಿ ನೀರು ನಿಂತರೆ ಗಿಡ ಕೊಳೆಯುವ ಸಾಧ್ಯತೆ ಹೆಚ್ಚು. ಹೂ ಬಿಡಲು ಶುರು ಮಾಡಿದಾಗ ಸುಡುಮಣ್ಣು ಅಥವಾ ಪೊಟೇಶ್ ಗೊಬ್ಬರಗಳ ಉಣಿಕೆ.

‘ಈ ಗೊಬ್ಬರಗಳ ಬದಲಿಗೆ ನಾವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಸ್ಲರಿಗೆ ಬೂದಿಯನ್ನು ಮಿಶ್ರ ಮಾಡಿ. ಅದನ್ನು ತೆಳ್ಳಗೆ ಮಾಡಿ ಗಿಡಗಳಿಗೆ ಎರೆಯಿರಿ. ಮಳೆ ಬರುತ್ತಾ ಇದ್ದರೆ ಮಾತ್ರ ಈ ದ್ರಾವಣ ಉಣಿಸಿ. ಮಧ್ಯಾಹ್ನ ಬೇಡ. ಗಿಡವೇ ಸುಟ್ಟು ಹೋಗುವ ಸಾಧ್ಯತೆಯಿದೆ. ಗಿಡದಲ್ಲಿ ಬೀನ್ಸ್ ಬೆಳೆಯುತ್ತಾ ಬಂದಂತೆ ಬುಡಕ್ಕೆ ಮಣ್ಣು ಪೆರಿಸಿ. ಗಿಡದ ಬೆಳವಣಿಗೆ ನೋಡಿಕೊಂಡು ಗೊಬ್ಬರ ಹಾಕಿ’ ಎನ್ನುತ್ತಾರೆ.

ಸೌತೆ, ಕುಂಬಳ, ಸುವರ್ಣಗೆಡ್ಡೆ, ಬೆಂಡೆ... ಹೀಗೆ ವರ್ಷದ ಹತ್ತು ತಿಂಗಳು ತಮ್ಮದೇ ತರಕಾರಿ. ‘ಬೆಂಡೆಗೆ ಹಳದಿ ಎಲೆ ರೋಗ. ಕೆಲವರು ಮಣ್ಣಿನ ಕ್ಷಾರವೇ ಕಾರಣ. ಬಹುಶಃ ಮಣ್ಣಿನಿಂದ ಹಬ್ಬುವ ಯಾವುದೋ ರೋಗವಿರಬೇಕು. ನೆಲಮಟ್ಟದಲ್ಲಿ ಪ್ಲಾಸ್ಟಿಕ್ ಗೋಣಿ ಯಾ ಹಾಳೆಯನ್ನು ಹಾಸಿ ಅದರ ಮೇಲೆ ಮಣ್ಣು ಹಾಕಿ ಬೆಳೆಸಿದರೆ ಪ್ರಯೋಜನವಾಬಹುದೋ ಏನೋ’ ಎನ್ನುವ ಚಿಂತನೆಯಲ್ಲಿದ್ದಾರೆ.

ಬೂದುಗುಂಬಳ, ಸಿಹಿಗುಂಬಳ(ಚೀನಿಕಾಯಿ)ಗಳಿಗೆ ಪ್ರತ್ಯೇಕ ತಾಕುಗಳು. ಮಳೆಯ ರಭಸಕ್ಕೆ ಹೂವಿನ ಪರಾಗ ತೊಳೆದು ಹೋಗಿ ಕಾಯಿ ಕಚ್ಚುವುದಿಲ್ಲ. ಇದಕ್ಕಾಗಿ ಕೃತಕ ಪರಾಗಸ್ಪರ್ಶ. ‘ಬೆಳ್ಳಂಬೆಳಿಗ್ಗೆ ಅರಳಿದ ಹೂವಿಗೆ ಕೃತಕ ಪರಾಗಸ್ಪರ್ಶ ಮಾಡಿ ಪ್ಲಾಸ್ಟಿಕ್ ಅಂಗಿ ತೊಡಿಸುತ್ತೇನೆ. ಮಳೆಗೆ ಪರಾಗ ತೋಯ್ದು ಹೋಗದಂತೆ ಪರಿಹಾರ ಕಂಡುಕೊಂಡಿದ್ದೇನೆ,’ ಎಂಬ ಸೂಕ್ಷ್ಮಗಳನ್ನು ಹೇಳುತ್ತಾರೆ.

ಅಲಸಂಡೆಗೆ ಶತ್ರು ‘ಬಂಬುಚ್ಚಿ’. ಇದನ್ನು ಓಡಿಸಲು ಕೆಂಪಿರುವೆ(ಉರಿ)ಯನ್ನು ಛೂ ಬಿಡುತ್ತಾರೆ. ನಿಯಂತ್ರಣವಾಗಿದೆ. ‘ತರಕಾರಿ ಮಧ್ಯೆ ಕಳೆ ಇದ್ದರೆ ಕೀಟ ಜಾಸ್ತಿ. ಹಾಗಾಗಿ ಕಳೆ ಕೀಳುವುದು ಮುಖ್ಯ. ಇದನ್ನೆಲ್ಲಾ ನೋಡುತ್ತಾ ಕಲಿಕೆ. ಇನ್ನೂ ಕಲಿಯುವುದು ಇದೆ’ ಎನ್ನುತ್ತಾರೆ. ಗೊಬ್ಬರದ ಹುಳ ತಿನ್ನಲು ಬರುವ ಹಂದಿಗಳಿಗೆ ಮಡಿಯ ಸುತ್ತ ನೆಲದಿಂದ ಒಂದಡಿ ಎತ್ತರಕ್ಕೆ ತಂತಿಯನ್ನು ಬಿಗಿದಿದ್ದಾರೆ. ಕೋಳಿಗಳಿಗೆ ಗೇಟ್‍ಪಾಸ್ ನೀಡಲು ಎರಡಡಿ ಎತ್ತರಕ್ಕೆ ನೆರಳು ಬಲೆಯ ಆವರಣ.

ಒಂದೊಂದು ತರಕಾರಿಯ ಬೆಳೆ ಡೇಟಾ ರಘುರಾಮರಲ್ಲಿದೆ. ಅವರು ಕಾರಿನಲ್ಲಿ ಮನೆ ಹೊರಟರೆ ಸಾಕು, ಡಿಕ್ಕಿಯಲ್ಲಿ ತಾಜಾ ತರಕಾರಿ ಪ್ಯಾಕೆಟ್‍ಗಳು ಮುಗುಮ್ಮಾಗಿ ಕುಳಿತಿರುತ್ತವೆ! ಆಪ್ತರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಹಂಚುವುದು ಸ್ವ-ಭಾವ. ಇವರ ತರಕಾರಿಯನ್ನೇ ಕಾಯುವ ಆಪ್ತೇಷ್ಟರಿದ್ದಾರೆ! ಇವರ ಅಡುಗೆ ಮನೆಯಲ್ಲಿ ತಾಜಾ, ವಿಷರಹಿತ ಕಾಯಿಪಲ್ಲೆಯ ಖಾದ್ಯಗಳು ಸದಾ.

ಜವ್ವನದಲ್ಲೆ ಕೃಷಿಯ ಜವಾಬ್ದಾರಿ ಹೆಗಲಿಗೆ ಬಂದಾಗ ತನ್ನ ಅಜ್ಜ ಲಕ್ಷ್ಮೀನಾರಾಯಣ ಪೈಲೂರರ ಜತೆಗಿದ್ದ ಬಾಲ್ಯಾನುಭವು ಪಠ್ಯವಾಗಿ ಕಣ್ಣ ಮುಂದಿತ್ತು. ಮಡದಿ ಜೋತ್ಸ್ನಾ ರಘುರಾಮರ ತರಕಾರಿ ಆಸಕ್ತಿಗೆ ಹೆಗಲು ಕೊಡುತ್ತಾರೆ. ಮನೆಗೆ ಬಂದ ಅತಿಥಿಗಳು ಮರಳುವಾಗ ಅವರ ಕೈಯಲ್ಲಿ ತರಕಾರಿಯನ್ನೋ, ಅವುಗಳ ಬೀಜವನ್ನು ನೀಡಿದರೆ ಮಾತ್ರ ಈ ದಂಪತಿಗೆ ಖುಷಿ. ತಾನು ಬೆಳೆದು ತಿನ್ನುವುದಲ್ಲದೆ, ಇತರರ ಹೊಟ್ಟೆಯೂ ತಂಪಾಗಿರಬೇಕು ಎನ್ನುವ ಮನಃಸ್ಥಿತಿ ಹೊಂದಿರುವುದು ಗ್ರಾಮೀಣ ಭಾರತದ ಕೃಷಿಕರಲ್ಲಿ ಮಾತ್ರ.

ಇನ್ನೇನು ಮಳೆಗಾಲದ ನಿರೀಕ್ಷೆಯಲ್ಲಿ ಕನ್ನಾಡಿದೆ. ತರಕಾರಿ ಕೃಷಿಯ ಯೋಜನೆ, ಯೋಚನೆಯ ಯಶಕ್ಕೆ ರಘುರಾಮರಂತಹ ಸ್ವಾನುಭವಿಗಳ ಕೃಷಿ ಉಪಾಯಗಳು ನೆರವಿಗೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.