ADVERTISEMENT

ಚಂದ್ರಂಪಳ್ಳಿ: ಕಾಲುವೆಗಳಿಗೆ ಕಾಯಕಲ್ಪ ಎಂದು?

ಜಗನ್ನಾಥ ಡಿ.ಶೇರಿಕಾರ
Published 27 ಜನವರಿ 2020, 19:30 IST
Last Updated 27 ಜನವರಿ 2020, 19:30 IST
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ದುಸ್ಥಿತಿ
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ದುಸ್ಥಿತಿ   

ಚಿಂಚೋಳಿ: ಜಿಲ್ಲೆಯಲ್ಲಿಯೇ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆಗಳು ನವೀಕರಣಕ್ಕಾಗಿ ಕಾಯುತ್ತಿವೆ.

ಬಲದಂಡೆ ಹಾಗೂ ಎಡದಂಡೆ ಹೀಗೆ ಎರಡು ಮುಖ್ಯನಾಲೆಗಳನ್ನು ಹೊಂದಿರುವ ಈ ಯೋಜನೆಯ ಕಾಲುವೆಗಳು ಅಲ್ಲಲ್ಲಿ ಹಾಳಾಗಿವೆ. ಅಕ್ವಡಕ್ಟ್‌ಗಳು ಪುನರ್‌ ನಿರ್ಮಾಣಕ್ಕೆ ಕಾಯುತ್ತಿವೆ. ಜಲಾಶಯದಿಂದ ಕಾಲುವೆಗಳಿಗೆ ಬಿಟ್ಟ ನೀರು ಪೋಲಾಗುತ್ತಿದೆ.

ಬಲದಂಡೆ 14 ಕಿ.ಮೀ ಹಾಗೂ ಎಡದಂಡೆ 21 ಕಿ.ಮೀ ಉದ್ದ ಹೊಂದಿರುವ ಈ ಯೋಜನೆಗೆ ಬಚಾವತ್‌ ಐತೀರ್ಪಿನ ಅಡಿಯಲ್ಲಿ 1.05 ಟಿಎಂಸಿ ಅಡಿ ನೀರಿನ ಹಂಚಿಕೆಯಾಗಿದೆ. ಇದರಿಂದ 5223 ಹೆಕ್ಟೇರ್‌ ನೀರಾವರಿ ಗುರಿ ಹೊಂದಿದೆ. ಮುಲ್ಲಾಮಾರಿಯ ಉಪ ನದಿಯಾದ ಸರನಾಲ ನದಿಗೆ ಅಡ್ಡಲಾಗಿ ಚಂದ್ರಂಪಳ್ಳಿ ಬಳಿ ಜಲಾಶಯ ನಿರ್ಮಿಸಿದ್ದು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ತಾಣವಾಗಿ ಈ ಜಲಾಶಯ ಖ್ಯಾತಿ ಪಡೆದಿದೆ.

ADVERTISEMENT

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕನಸಿನ ಈ ಯೋಜನೆಗೆ ಜಿಲ್ಲೆಯಲ್ಲಿಯೇ ಕಾಲಮಿತಿಯಲ್ಲಿ ಪೂರ್ಣಗೊಂಡ ಯೋಜನೆ ಎಂಬ ಖ್ಯಾತಿ ಇದೆ. ಯೋಜನೆಯ ಮುಖ್ಯನಾಲೆ ಹಾಗೂ ವಿತರಣೆ ನಾಲೆಗಳು ಹಾಳಾಗಿದ್ದು, ನವೀಕರಣಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ತಾಲ್ಲೂಕಿನ ಕಲಭಾವಿ ತಾಂಡಾದಿಂದ ಚಂದಾಪುರ ಮಧ್ಯೆ ನಮ್ಮ ಹೊಲದ ಮೇಲ್ಭಾಗದಲ್ಲಿ ಕಾಲುವೆಗೆ ಸಿಸಿ ಲೈನಿಂಗ್ ಮಾಡದ ಕಾರಣ ಹೊಲಕ್ಕೆ ಕಾಲುವೆಯ ನೀರು ಬಸಿದು ಬೆಳೆ ಹಾಳಾಗಿದೆ. ಇದಕ್ಕೆ ನೀರಾವರಿ ಇಲಾಖೆಯ ಹೊಣೆ ಎಂದು ರೈತ ಸಾಯಿರೆಡ್ಡಿ ಅಡವಾಲ್‌ ದೂರಿದ್ದಾರೆ.

ನಾಲೆಯ ಸಿಸಿ ಲೈನಿಂಗ್‌ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಒಡೆದು ಹೋಗಿವೆ. ಹೀಗಾಗಿ ಪುನರ್‌ ನಿರ್ಮಾಣದ ಅಗತ್ಯವಿದೆ ಎನ್ನುತ್ತಾರೆ ಅಚ್ಚುಕಟ್ಟು ಪ್ರದೆಶ ರೈತರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಅರಿಶಿಣವನ್ನು ಈ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಎರಡು ವರ್ಷಗಳಿಂದ ಜಲಾಶಯ ಭರ್ತಿಯಾಗದೆ ರೈತರಿಗೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.