ಕೋಲಾರ: ‘ರೈತರಿಗೆ ಮಾವು ಬೆಳೆಯ ನೀರಿನ ನಿರ್ವಹಣೆಯಲ್ಲಿ ಇಂಗು ಗುಂಡಿಗಳ ಪಾತ್ರ ನಿರ್ಣಾಯಕ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.
ತೋಟಗಾರಿಕೆ ಮಹಾವಿದ್ಯಾಲಯವು ಮಾವು ಬೆಳೆ ಕುರಿತು ತಾಲ್ಲೂಕಿನ ಪಾರ್ಶಗಾನಹಳ್ಳಿ ಹಾಗೂ ಕೋನೆಪುರ ಗ್ರಾಮದಲ್ಲಿ ರೈತರಿಗೆ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಕೃಷಿಗೆ ಅತ್ಯಗತ್ಯವಾದ ನೀರಿನ ನಿರ್ವಹಣೆ ಬಹಳ ಮುಖ್ಯ’ ಎಂದು ತಿಳಿಸಿದರು.
‘ಮಾವಿನ ಇಳುವರಿ ಹೆಚ್ಚಿಸಲು ಹಸಿರೆಲೆ ಗೊಬ್ಬರವಾದ ಸೆಣಬು ಹಾಗೂ ನಸುಗುನ್ನಿಕಾಯಿ ಬೀಜ ಬಳಸಬೇಕು. ಮಾವು ಬೆಳೆಯು ಕ್ಯಾಲ್ಸಿಯಂ ಪೋಷಕಾಂಶ ಪ್ರೀತಿಸುವ ಗಿಡವಾಗಿದೆ. 10 ವರ್ಷದ ಗಿಡಕ್ಕೆ 2 ಕೆ.ಜಿ ಸುಣ್ಣ ಮಣ್ಣಿಗೆ ಸೇರಿಸುವುದರಿಂದ ಹೂವು ಉದುರುವಿಕೆ ತಡೆಯಬಹುದು. ಜತೆಗೆ ಕಾಯಿಯ ಸಂಖ್ಯೆ ಹೆಚ್ಚಲು ಕ್ಯಾಲ್ಸಿಯಂ ನೆರವಾಗುತ್ತದೆ. ಸ್ಪಂಜು ಅಂಗಾಂಶ ಎಂಬ ಶಾರೀರಿಕ ತೊಂದರೆ ಬಾದಾಮಿ ತಳಿ ಗಿಡಗಳಲ್ಲಿ ಕಡಿಮೆಯಾಗುತ್ತದೆ’ ಎಂದು ವಿವರಿಸಿದರು.
ವಿದ್ಯಾಲಯದ ವಿದ್ಯಾರ್ಥಿನಿಯರು ಮಾವು ಬೆಳೆ ಉತ್ಪಾದನೆ ಮತ್ತು ಮೇಲ್ಛಾವಣಿ ನಿರ್ವಹಣೆ, ಅಧಿಕ ಸಾಂದ್ರತೆ ನಾಟಿ ಪದ್ಧತಿಯ ತಾಂತ್ರಿಕತೆ, ಮಾವು ಸ್ಪೇಷಲ್ನ ಉಪಯೋಗ ಮತ್ತು ಬಳಸುವ ವಿಧಾನ, ಅನಿಯಮಿತ ತಳಿಯಾದ ಬಾದಾಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ವಾತಾವರಣ ವೈಪರೀತ್ಯಕ್ಕೆ ಅನುಗುಣವಾಗಿ ಮಾವು ಬೆಳೆ ರಕ್ಷಿಸುವ ವಿಧಾನಗಳನ್ನು ಚಿತ್ರಸಹಿತ ವಿವರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ರೈತರು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.