ADVERTISEMENT

PV Web Exclusive: ಚನ್ನಪಟ್ಟಣ ಗೊಂಬೆ ಕಲೆಗೆ ಹೊಸ ವಿನ್ಯಾಸ

ಕರಕುಶಲ ಕಲಾವಿದರಿಂದಿಗೆ ಕೈ ಜೋಡಿಸಿದ ಬೆಂಗಳೂರು ವಿದ್ಯಾರ್ಥಿ

ಆರ್.ಜಿತೇಂದ್ರ
Published 3 ಸೆಪ್ಟೆಂಬರ್ 2020, 7:38 IST
Last Updated 3 ಸೆಪ್ಟೆಂಬರ್ 2020, 7:38 IST
ಆಲೀಂ ವಿನ್ಯಾಸಗೊಳಿಸಿದ ಗೊಂಬೆ ದೀಪಗಳು
ಆಲೀಂ ವಿನ್ಯಾಸಗೊಳಿಸಿದ ಗೊಂಬೆ ದೀಪಗಳು   

ರಾಮನಗರ: ಚೀನಿ ಗೊಂಬೆಗಳ ಅಬ್ಬರಕ್ಕೆ ಚನ್ನಪಟ್ಟಣದ ಸಾಂಪ್ರದಾಯಿಕ ಗೊಂಬೆ ಕಲೆ ನಲುಗಿ ಹೋಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಈ ಕಲೆಗೆ ಹೊಸ ಸ್ಪರ್ಶ ನೀಡಿ ಕಲಾವಿದರನ್ನು ಸ್ಪರ್ಧಾತ್ಮಕ ಮಾರುಕಟ್ಟೆಗೆ ಅಣಿಗೊಳಿಸುವ ಕಾರ್ಯಕ್ಕೆ ವಿದ್ಯಾರ್ಥಿಯೊಬ್ಬರು ಕೈ ಜೋಡಿಸಿದ್ದಾರೆ.

ಬೆಂಗಳೂರಿನ ಎನ್‌ಐಸಿಸಿ ಇಂಟರ್‌ನ್ಯಾಷನಲ್‌ ಕಾಲೇಜ್‌ ಆಫ್‌ ಡಿಸೈನ್‌ನ ಪದವಿ ವಿದ್ಯಾರ್ಥಿ ಅಲೀಂ ನರಸಿಂಘಾನಿ ಚನ್ನಪಟ್ಟಣದ ಗೊಂಬೆ ಕಲಾವಿದರಿಗೆ ಹೊಸ ಬಗೆಯ ಕರಕುಶಲ ಕಲೆಯ ಪಾಠ ಹೇಳಿಕೊಟ್ಟಿದ್ದಾರೆ. ಒಂದು ವರ್ಷ ಕಾಲ ಅವರೊಟ್ಟಿಗೇ ಬೆರೆತು, ಅವರ ಸಮಸ್ಯೆ ಅರಿತು ಅದಕ್ಕೆ ಒಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ಕಲಾವಿದರಿಗೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಅವರೂ ಸಂತಸಗೊಂಡಿದ್ದಾರೆ.

ಹೊಸ ಮಾರುಕಟ್ಟೆ ಸೃಷ್ಟಿ: ಕಳೆದ ಮೂರು ದಶಕಗಳ ಹಿಂದೆ ಮನೆಮಾತಾಗಿದ್ದ ಚನ್ನಪಟ್ಟಣದ ಗೊಂಬೆಗಳು ಇಂದು ಬೇಡಿಕೆ ಕಳೆದುಕೊಳ್ಳುತ್ತಿವೆ. ಇಡೀ ಗೊಂಬೆ ತಯಾರಿಕೆ ಉದ್ಯಮವೇ ನಷ್ಟದಲ್ಲಿ ಇದೆ. 1990ರ ದಶಕದಲ್ಲಿ ಚೀನಿ ಗೊಂಬೆಗಳು ಭಾರತ ಪ್ರವೇಶಿಸಿದ ಮೇಲೆ ಇವುಗಳಿಗೆ ಬೇಡಿಕೆ ಕ್ರಮೇಣ ತಗ್ಗುತ್ತಿದೆ. ಇಲ್ಲಿನ ಸಾಂಪ್ರದಾಯಿಕ ಗೊಂಬೆಗಳಿಗೆ ಹೋಲಿಸಿದರೆ ಚೀನಿ ಗೊಂಬೆಗಳು ಅತೀ ಅಗ್ಗವಾಗಿದ್ದು, ಗ್ರಾಹಕರಿಗೂ ಕೈಗೆಟಕುವ ದರದಲ್ಲಿ ಸಿಗುತ್ತಿರುವುದು ಒಂದು ಕಾರಣ. ಜೊತೆಗೆ ಈ ಸಾಂಪ್ರದಾಯಿಕ ಗೊಂಬೆಗಳನ್ನೇ ನಕಲು ಮಾಡಿ ಕಡಿಮೆ ಖರ್ಚಿನಲ್ಲಿ ತಯಾರಿಸಿ ಅಗ್ಗದ ದರದಲ್ಲಿ ಮಾರುವ ನಕಲಿ ದಂದೆ ಸಹ ಕಾರಣ. ಹೀಗಾಗಿ ಗೊಂಬೆ ಉದ್ಯಮವೇ ತನ್ನನ್ನು ತಾನು ಬದಲಾವಣೆಗೆ ಒಳಪಡಬೇಕಾದ ಅಗತ್ಯ ಇದೆ.

ADVERTISEMENT

ಇದೇ ದಿಸೆಯಲ್ಲಿ ಅಲೀಂ ಕಾರ್ಯೋನ್ಮುಖರಾಗಿದ್ದು, ಗೊಂಬೆ ಕಲೆಯನ್ನು ಸಾಂಪ್ರದಾಯಿಕ ಚೌಕಟ್ಟಿನಿಂದ ಮುಂದೆ ಕೊಂಡೊಯ್ದು ಅದಕ್ಕೆ ಹೊಸ ಸ್ಪರ್ಶ ನೀಡುವ ಪ್ರಯತ್ನ ಮಾಡಿದ್ದಾರೆ. ಗೊಂಬೆ ತಯಾರಿಕೆಗೆ ಸಾಮಾನ್ಯವಾಗಿ ಆಲೆ ಮರವನ್ನು ಬಳಕೆ ಮಾಡಲಾಗುತ್ತದೆ. ಮೃದುವಾದ ಮೇಲ್ಮೈ ಹೊಂದಿರುವ ಇವುಗಳನ್ನು ಅಷ್ಟೇ ಸುಲಭದಲ್ಲಿ ಬೇಕಾದ ಆಕಾರಕ್ಕೆ ಬದಲಿಸಿಕೊಳ್ಳಬಹುದಾಗಿದೆ. ಜೊತೆಗೆ ಇವುಗಳಿಗೆ ನೈಸರ್ಗಿಕ ಅರಗು ಹಾಗೂ ಬಣ್ಣಗಳನ್ನು ಬಳಕೆ ಮಾಡಲಾಗುತ್ತದೆ.

ಈ ಎಲ್ಲ ಗುಣಗಳಿಂದಾಗಿಯೇ ಚನ್ನಪಟ್ಟಣದ ಗೊಂಬೆ ಕಲೆ ಉಳಿದವುಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಆದರೆ ಈ ಕಲೆಯನ್ನು ಗೊಂಬೆಗಳಿಗೆ ಸೀಮಿತಗೊಳಿಸದೇ ಅದನ್ನು ಈಗಿನ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ರೂಪಿಸಿದ್ದಾರೆ. ಆಟಿಕೆಗಳನ್ನೇ ಬಳಸಿಕೊಂಡು ವಿದ್ಯುತ್‌ ದೀಪಗಳನ್ನು ಸಿಂಗರಿಸಿದ್ದಾರೆ. ಪುಟ್ಟ ಪುಟ್ಟ ದೀಪಗಳ ವಿನ್ಯಾಸ ನೀಡಿದ್ದಾರೆ. ಹೀಗೆ ಹತ್ತು ಹಲವು ಮರುವಿನ್ಯಾಸ ಮಾಡಿ, ಅವುಗಳ ತಯಾರಿಕೆ ಬಗ್ಗೆ ಗೊಂಬೆ ಕರಕುಶಲಿಗರೊಂದಿಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

" ಪ್ರಧಾನಿ ಮೋದಿ ಕಳೆದ ಭಾನುವಾರವಷ್ಟೇ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಮಾತನಾಡಿದ್ದಾರೆ. ದೇಶೀಯವಾಗಿ ಇಂತಹ ಕಲೆಗಳಿಗೆ ಹೊಸ ರೂಪ ನೀಡಿ ಅದರ ಉತ್ಪಾದನೆ ಹೆಚ್ಚಿಸುವ ಆಶಯ ವ್ಯಕ್ತಪಡಿಸಿದ್ದಾರೆ. ನಮ್ಮ ಈ ಕೆಲಸವೂ ಅದಕ್ಕೆ ಪೂರಕವಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ಗಳು, ಹೊಸ ಮನೆಗಳೂ ಸೇರಿದಂತೆ ಒಳಾಂಗಣ ವಿನ್ಯಾಸಕ್ಕೆ ಅಗತ್ಯವಾದ ಕೆಲವು ಮಾದರಿಗಳನ್ನು ತಯಾರಿಸಲಾಗಿದೆ. ಇದರಿಂದ ಈ ಕಲಾವಿದರಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಇವರ ಕಷ್ಟಗಳಿಗೆ ಸ್ಪಂದಿಸಿದಕ್ಕೆ ಖುಷಿ ಇದೆ’ ಎನ್ನುತ್ತಾರೆ ಅಲೀಂ.

ಆಕಸ್ಮಿಕ ಸಂಪರ್ಕ

ಅಲೀಂಗೆ ಚನ್ನಪಟ್ಟಣದ ಕರಕುಶಲಿಗರ ಸಂಪರ್ಕ ದೊರೆತದ್ದು ಒಂದು ಆಕಸ್ಮಿಕ. ವೃತ್ತಿಪರ ವಿನ್ಯಾಸಿಗರಾಗಿ ರೂಪುಗೊಳ್ಳುತ್ತಿರುವ ಅವರು ಕಾಲೇಜಿನ ಪ್ರಾಜೆಕ್ಟ್‌ ಸಲುವಾಗಿ ಬೆಂಗಳೂರು-ಮೈಸೂರು ನಡುವೆ ಓಡಾಡುತ್ತಿದ್ದ ಸಂದರ್ಭ ಇಲ್ಲಿನ ಗೊಂಬೆ ಕಲೆ ಬಗ್ಗೆ ಅರಿತುಕೊಂಡರು. ಕಡೆಗೆ ಇಲ್ಲಿನ ಜನರೊಡನೆ ಬೆರೆತು ಅದನ್ನೇ ನಮ್ಮ ಪ್ರಾಜೆಕ್ಟ್‌ ಆಗಿ ರೂಪಿಸಿಕೊಂಡಿದ್ದಾರೆ. ಸುಮಾರು ಒಂದು ವರ್ಷ ಕಾಲ ಇಲ್ಲಿನ ಕಲಾವಿದರ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸದ್ಯ ಲಾಕ್‌ಡೌನ್ ಕಾರಣಕ್ಕೆ ಅವರು ಚನ್ನಪಟ್ಟಣಕ್ಕೆ ಬರುವುದು ಕಡಿಮೆ ಆಗಿದೆ. ಆದಾಗ್ಯೂ ಮತ್ತೆ ಇದನ್ನು ಮುಂದುವರಿಸುವುದಾಗಿ ಅಲೀಂ ಹೇಳುತ್ತಾರೆ.

ವಿನ್ಯಾಸಕ್ಕೆ ಮುನ್ನ ಅಧ್ಯಯನ

"ಹೊಸ ವಿನ್ಯಾಸಗಳಿಗೆ ಮುನ್ನ ಅಲ್ಲಿನ ಪರಿಸ್ಥಿತಿಯನ್ನೂ ಅಧ್ಯಯನ ಮಾಡಿದೆವು. ಆಕರ್ಷಕ ಮರು ವಿನ್ಯಾಸಗಳ ಕೊರತೆ, ಮೂಲ ಸೌಕರ್ಯಗಳು ಇಲ್ಲದಿರುವುದು. ಹೊಸ ಮಾರುಕಟ್ಟೆ ಸೃಷ್ಟಿಯ ಅಭಾವ. ಮಧ್ಯವತಿಗಳ ಹಾವಳಿ.... ಹೀಗೆ ಚನ್ನಪಟ್ಟಣದ ಗೊಂಬೆ ಉದ್ಯಮ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ತೊಡಕುಗಳು ನಿವಾರಣೆ ಆಗದೇ ಹೋದಲ್ಲಿ ಇದು ಮುಂದಿನ ಪೀಳಿಗೆಗಳಿಗೆ ತಲುಪುವ ಸಾಧ್ಯತೆಗಳು ಕಡಿಮೆ. ಇವುಗಳನ್ನು ನಿವಾರಿಸಿಕೊಂಡು ಹೊಸ ಮಾರುಕಟ್ಟೆ ಸೃಷ್ಟಿಸಿದ್ದೇ ಆದಲ್ಲಿ ಗೊಂಬೆ ಕಲೆ ಉಳಿದು ಬೆಳೆಯಲಿದೆ. ದೇಸಿ ಹಾಗೂ ಜಾಗತಿಕವಾಗಿ ಪ್ರದರ್ಶನಗಳ ಆಯೋಜನೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುವ ಅಗತ್ಯ ಇದೆ’ ಎನ್ನುತ್ತಾರೆ ಅಲೀಂ.

* ಈ ಹೊಸ ವಿನ್ಯಾಸಗಳು ಗೊಂಬೆ ಉದ್ಯಮದ ಬೆಳವಣಿಗೆಗೆ ಪೂರಕವಾಗಿವೆ. ಇದರಿಂದ ಹೊಸ ಮಾರುಕಟ್ಟೆ ತಲುಪಲು ಸಾಧ್ಯವಾಗಲಿದೆ.

-ಅಲೀಂ ನರಸಿಂಘಾನಿ, ವಿನ್ಯಾಸ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.