ADVERTISEMENT

PV Web Exclusive - ಕಾಫಿ ಘಮಲು, ಕ್ರಿಕೆಟ್‌ ಪ್ರೀತಿ: ಇವರೇ ಕೇಶವಮೂರ್ತಿ

ಪ್ರಮೋದ
Published 5 ಫೆಬ್ರುವರಿ 2021, 9:20 IST
Last Updated 5 ಫೆಬ್ರುವರಿ 2021, 9:20 IST
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಬೆಂಗಳೂರಿನಲ್ಲಿ ಚನ್ನಗಿರಿ ಕೇಶವಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಬೆಂಗಳೂರಿನಲ್ಲಿ ಚನ್ನಗಿರಿ ಕೇಶವಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ   

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಾಗಲಿ, ರಾಜಧಾನಿಯ ಹೊರಭಾಗದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮೈದಾನಗಳಲ್ಲಾಗಲಿ ಯಾವುದೇ ದೇಶಿ ಕ್ರಿಕೆಟ್‌ ಟೂರ್ನಿಯ ಪಂದ್ಯಗಳು ನಡೆದರೆ ಅಲ್ಲೊಬ್ಬ ವ್ಯಕ್ತಿ ಹಾಜರಿರುತ್ತಾರೆ. ಕೈಯಲ್ಲೊಂದು ಬಟ್ಟೆಯ ಚೀಲ; ತಮ್ಮ ಮುಂದೆ ಲ್ಯಾಪ್‌ಟಾಪ್‌ ಇಟ್ಟುಕೊಂಡು ಅಂಕಿಅಂಶಗಳ ಬಗ್ಗೆ ಬರೆಯುತ್ತಿರುತ್ತಾರೆ.

ಬೆಂಗಳೂರಿನಲ್ಲಿ ದೇಶಿ ಕ್ರಿಕೆಟ್‌ ಪಂದ್ಯಗಳನ್ನು ವರದಿ ಮಾಡಿದ ಪತ್ರಕರ್ತರಿಗೆಲ್ಲ ಅವರು ಚಿರಪರಿಚಿತರು. ಅದು ಯಾವುದೇ ರಾಜ್ಯದ ತಂಡವಾಗಿರಲಿ, ಯಾವ ತಂಡದ ಆಟಗಾರನೇ ಆಗಿರಲಿ ಅವರ ಬಗ್ಗೆ ತಕ್ಷಣವೇ ಸಮಗ್ರ ಮಾಹಿತಿ ಒದಗಿಸುತ್ತಾರೆ. ಅವರೇ ದೇಶಿ ಕ್ರಿಕೆಟ್‌ನ ಅಂಕಿಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ. ಇವರು ಕೆಎಸ್‌ಸಿಎ ಅಧಿಕೃತ ಅಂಕಿಅಂಶ ತಜ್ಞರಾಗಿ ಕೆಲಸ ಮಾಡಿದ್ದಾರೆ.

ರಣಜಿ, ವಿಜಯ ಹಜಾರೆ, ದೇವಧರ್‌ ಟ್ರೋಫಿ, ಇರಾನಿ ಕಪ್‌ ಹೀಗೆ ಯಾವುದೇ ದೇಶಿ ಟೂರ್ನಿಗಳಿದ್ದರೂ ಪ್ರತಿ ಆಟಗಾರನ ಹಾಗೂ ತಂಡಗಳ ದಾಖಲೆಗಳ ಹೂರಣವೇ ಕೇಶವಮೂರ್ತಿ ಅವರ ಬತ್ತಳಿಕೆಯಲ್ಲಿ ಸಂಗ್ರಹವಾಗಿರುತ್ತದೆ. ಕರ್ನಾಟಕ ತಂಡ ಚೊಚ್ಚಲ ರಣಜಿ ಟೂರ್ನಿಯಾಡಿದ 1934–35ನೇ ವರ್ಷದಿಂದ ತನ್ನ ಕೊನೆಯ ಪಂದ್ಯದ ತನಕದ ದೇಶಿ ಪಂದ್ಯಗಳಲ್ಲಿ ಆಡಿದ ಆಟಗಾರರು, ಅವರ ಸಾಧನೆ, ಶತಕ, ಅರ್ಧಶತಕ, ಪಡೆದ ವಿಕೆಟ್‌ಗಳು, ವಿಶೇಷ ಸಾಧನೆಗಳು ಹೀಗೆ ಪ್ರತಿ ಮಾಹಿತಿಯೂ ‘ದಾಖಲೆ ಬರಹಗಾರ’ ಕೇಶವಮೂರ್ತಿ ಅವರಲ್ಲಿ ಸಂಗ್ರಹವಾಗಿವೆ.

ADVERTISEMENT
ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಹಾಗೂ ಕ್ರಿಕೆಟಿಗ ರೋಜರ್‌ ಬಿನ್ನಿ ಅವರಿಗೆ ರಾಜ್ಯದ ಆಟಗಾರರನ್ನು ಒಳಗೊಂಡ ಚೌಕಟ್ಟು ನೀಡಿದ ಕೇಶವಮೂರ್ತಿ

ಸದ್ಯಕ್ಕೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿರುವ 82 ವರ್ಷ ವಯಸ್ಸಿನ ಕೇಶವಮೂರ್ತಿ ಅವರು ದೇಶಿ ಋತುವಿನ ಸಮಯದಲ್ಲಿ ಆಟಗಾರರು ಅಭ್ಯಾಸ ಆರಂಭಿಸುವುದಕ್ಕಿಂತ ಮೊದಲೇ ಕುತೂಹಲಕರ ಅಂಕಿಅಂಶಗಳನ್ನು ಹುಡುಕುವ ಕೆಲಸ ಶುರು ಮಾಡಿರುತ್ತಾರೆ. ಕಾಫಿ ಬೋರ್ಡ್‌ನಲ್ಲಿ ಕೆಲಸ ಮಾಡುವಾಗ ಕ್ರಿಕೆಟ್ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ.

ಇವರು ಕ್ರಿಕೆಟ್‌ ಬಗ್ಗೆ ಹೊಂದಿರುವ ಗೌರವ ಹಾಗೂ ಪ್ರೀತಿಯನ್ನು ಸಚಿನ್ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಜಾವಗಲ್ ಶ್ರೀನಾಥ, ಬಿ.ಎಸ್‌. ಚಂದ್ರಶೇಖರ್, ರೋಜರ್‌ ಬಿನ್ನಿ, ವಿನಯಕುಮಾರ್‌, ರಾಬಿನ್ ಉತ್ತಪ್ಪ ಹೀಗೆ ಹಲವಾರು ಹೆಸರಾಂತ ಕ್ರಿಕೆಟಿಗರು ಮೆಚ್ಚಿಕೊಂಡಿದ್ದಾರೆ. ಕೇಶವಮೂರ್ತಿ ಅವರ ಕಾಯಕ ಪ್ರೀತಿ ಮೆಚ್ಚಿಕೊಂಡು ಅನಿಲ್‌ ಕುಂಬ್ಳೆ ಅವರೇ ಖುದ್ದು ಕೇಶವಮೂರ್ತಿ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು.

ಕೇಶವಮೂರ್ತಿ ಕಾಫಿ ಮಂಡಳಿಯಲ್ಲಿ ಸಹಾಯಕ ಪ್ರಚಾರಾಧಿಕಾರಿಯಾಗಿ, ‘ಇಂಡಿಯನ್‌ ಕಾಫಿ’ ಮಾಸ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. 1989ರಿಂದ ಐದು ವರ್ಷಗಳ ಕಾಲ ಪಾಕಿಸ್ತಾನದ ಕ್ರಿಕೆಟ್‌ ಹೆರಾಲ್ಡ್‌ ಕ್ರೀಡಾ ಮಾಸ ಪತ್ರಿಕೆಗೆ ಅಂಕಿಅಂಶಗಳನ್ನು ಒದಗಿಸುವ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ವೆಬ್‌ಸೈಟ್‌ ‘ದಿ ಕ್ರಿಕೆಟ್ ಆರ್ಕೈವ್‌’ನಲ್ಲಿ 2010ರಿಂದ ಒಂದು ವರ್ಷ ಡಾಟಾ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ.

ಹೀಗೆ ನಿರಂತರವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವ ಕೇಶವಮೂರ್ತಿ ಅವರು ಕನ್ನಡದಲ್ಲಿ ವಿರಳವಾಗಿರುವ ಕ್ರೀಡಾ ಪುಸ್ತಕಗಳನ್ನು ಬೆರೆದು ಕನ್ನಡ ಕ್ರೀಡಾ ಪುಸ್ತಕಗಳ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದಾರೆ. 2003ರಲ್ಲಿ ಭಾರತೀಯ ಕ್ರಿಕೆಟ್‌ ಇತಿಹಾಸ, 2011ರಲ್ಲಿ ಭಾರತ ಕ್ರಿಕೆಟ್‌ ನಾಯಕರು ಮತ್ತು 2016ರಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕ ಆಟಗಾರರು ಪುಸ್ತಕಗಳನ್ನು ಬರೆದಿದ್ದಾರೆ. 2014ರಲ್ಲಿ ಮುಂಬೈನಿಂದ ಆಂಗ್ಲ ಭಾಷೆಯಲ್ಲಿ ಪ್ರಕಟವಾದ ಇರಾನಿ ಕಪ್‌ ಪುಸ್ತಕ ಬರೆದಿದ್ದಾರೆ.

ಮಾಜಿ ಕ್ರಿಕೆಟಿಗ ಬಿ.ಎಸ್‌. ಚಂದ್ರಶೇಖರ ಅವರ ಜೊತೆ ಚನ್ನಗಿರಿ ಕೇಶವಮೂರ್ತಿ

ಕಾಫಿ ಬೋರ್ಡ್‌ನಿಂದ ನಿವೃತ್ತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ ಅಂಕಿಅಂಶಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಕೇಶವಮೂರ್ತಿ ತೊಡಗಿದ್ದಾರೆ. ಯಾರಿಂದಲೂ ನಯಾಪೈಸೆ ಬಯಸದೆ ತಮ್ಮ ಬದುಕಿನ ಖುಷಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಷ್ಠೆಯ ದೇಶಿ ಟೂರ್ನಿಯಾದ ರಣಜಿಯಲ್ಲಿ ಆಡಿದ ಎಲ್ಲ ಆಟಗಾರರ ಮಾಹಿತಿಯನ್ನು ಒಂದೇ ಚೌಕಟ್ಟಿನಲ್ಲಿ ಸಂಗ್ರಹಿಸುವ ಕಾರ್ಯ ಮಾಡಿದ್ದು ವಿಶೇಷ.

ಈ ಚೌಕಟ್ಟಿನಲ್ಲಿ ರಾಜ್ಯ ಕ್ರಿಕೆಟ್‌ ತಂಡದಲ್ಲಿ ಮೊಟ್ಟಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ ಆಟಗಾರ, ಶತಕ ಹೊಡೆದಿದ್ದು ಯಾರು, ವಿಕೆಟ್‌ ಉರುಳಿಸಿದ ಆಟಗಾರ, ಕ್ಯಾಚ್‌ ಪಡೆದ ಆಟಗಾರ ಹೀಗೆ ಪ್ರತಿ ಮಾಹಿತಿಯೂ ಲಭ್ಯವಿದೆ. ರಾಜ್ಯ ತಂಡದ ನಾಯಕರನ್ನು ಗುರುತಿಸಲು ಪ್ರತ್ಯೇಕವಾಗಿ ಬಣ್ಣ ಬಳಸಿದ್ದು ವಿಶೇಷ.

ಪುಸ್ತಕ ಪ್ರೀತಿ, ಬರವಣಿಗೆ ಆಸಕ್ತಿ: ಕೇಶವಮೂರ್ತಿ ಕ್ರಿಕೆಟ್‌ ಅಂಕಿಅಂಶಗಳ ಸಂಗ್ರಹ ಜೊತೆಗೆ ಸಾಹಿತ್ಯ ವಲಯದಲ್ಲಿಯೂ ಕೆಲಸ ಮಾಡಿದ್ದಾರೆ.

ಬಯಲಾಗದ ರಹಸ್ಯ, ಆ ಸುಂದರ ತರುಣಿ, ವಿಷಸರ್ಪ, ಅವಳೇಕೆ ಸತ್ತಳು, ಗುರುತು ಸಿಗದ ಶವ, ಅವನಲ್ಲ ಅಪರಾಧಿ, ನೀಲಿ ಕುಪ್ಪುಸ, ಪತ್ತೇದಾರ ರಮೇಶ ಮತ್ತು ಬೆದರಿಕೆ ಪತ್ರ ಎನ್ನುವ ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ಅಭಿಲಾಷೆ ಮತ್ತು ಚಿನ್ನದ ಸರ ಸಾಮಾಜಿಕ ಕಾದಂಬರಿಗಳನ್ನು ರಚಿಸಿದ್ದಾರೆ. 9 ಪತ್ತೇದಾರಿ, ಎರಡು ಸಾಮಾಜಿಕ, ಒಂದು ನಾಟಕ, ಮೂರು ಕ್ರೀಡೆ, ಎರಡು ವಿಜ್ಞಾನ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಮನೆಯ ಮೊದಲ ಮಹಡಿ ಪೂರ್ತಿ ಪುಸ್ತಕಗಳೇ ತುಂಬಿರುವುದು ಅವರ ಪುಸ್ತಕ ಪ್ರೀತಿಗೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.