ADVERTISEMENT

ಸಂಸ್ಕೃತ ಭಾರತಿ | ಸಕಲವೂ ಸಂಸ್ಕೃತಕ್ಕಾಗಿ, ಸಂಸ್ಕೃತಿಗಾಗಿ: ಜನಾರ್ದನ ಹೆಗಡೆ

‘ಸಂಸ್ಕೃತ ಭಾರತಿ’ ಆರಂಭಿಸಿದ ಜನಾರ್ದನ ಹೆಗಡೆ ಅವರ ಸಂದರ್ಶನ

ಗಣೇಶ ವೈದ್ಯ
Published 7 ಜನವರಿ 2023, 11:48 IST
Last Updated 7 ಜನವರಿ 2023, 11:48 IST
ಜನಾರ್ದನ ಹೆಗಡೆ –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಜನಾರ್ದನ ಹೆಗಡೆ –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಹತ್ತನೇ ತರಗತಿಯವರೆಗೆ ಸಾಮಾನ್ಯ ಶಿಕ್ಷಣ ಪಡೆದ ಜನಾರ್ದನ ಹೆಗಡೆ ಅವರ ಆಸಕ್ತಿ ಇದ್ದಿದ್ದು ವಿಜ್ಞಾನದಲ್ಲಿ. ಮುಂದೆ ಕಾರಣಾಂತರಗಳಿಂದ ಸಂಸ್ಕೃತದ ಸಂಪರ್ಕಕ್ಕೆ ಬಂದರು. ಎರಡು ವರ್ಷ ವೇದಾಧ್ಯಯನವನ್ನೂ ಮಾಡಿದರು. ಆದರೆ ಇದೇ ಮಾರ್ಗದಲ್ಲಿ ಮುಂದುವರಿದರೆ ತನ್ನದು ಚಾಚುವ ಕೈ ಆಗುತ್ತದೆ, ಬದಲಿಗೆ ತನ್ನದು ಕೊಡುಗೈ ಆಗಬೇಕು ಎಂಬ ನಿಲುವು ತೊಟ್ಟು ಅದರಿಂದ ವಿಮುಖರಾದರು. ಜೀವನದ ಬಗೆಗೆ ಆ ಹಂತದಲ್ಲಿಯೇ ಸ್ಪಷ್ಟವಾದ ಕಲ್ಪ‍ನೆ ಅವರಿಗಿತ್ತು. ಸಾಹಿತ್ಯ ಶಾಸ್ತ್ರದಲ್ಲಿ ಸಂಸ್ಕೃತ ಅಧ್ಯಯನ ಮುಂದುವರಿಸಿ ಅದರಲ್ಲಿ ಜ್ಞಾನ ಸಂಪಾದನೆಗೆ ಆದ್ಯತೆ ನೀಡಿದರು.

ಸರಳ ವ್ಯಕ್ತಿತ್ವದ ಜನಾರ್ದನ ಹೆಗಡೆ ಅವರ ಜೀವನವೂ ಅಷ್ಟೇ ಸರಳ. ಹೀಗಾಗಿ ಅವರಿಗೆ ಉಪಜೀವನದ ಕುರಿತು ದೊಡ್ಡ ಚಿಂತೆ ಆಗಲಿಲ್ಲ. ‘ಸಂಸ್ಕೃತದಲ್ಲಿ ಮುಂದುವರಿಯದೇ ಹೋದರೆ ಊರಿನಲ್ಲಿ ಕೃಷಿ ಮಾಡಿಕೊಂಡು ಇರುತ್ತಿದ್ದೆ, ಆದರೆ ಬೇರೆಯವರ ಕೈ ಕೆಳಗೆ ಸಂಬಳಕ್ಕಾಗಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ’ ಎನ್ನುತ್ತಾರೆ ಅವರು.

‘ಸಂಸ್ಕೃತ ಭಾರತಿ’ ಸ್ಥಾಪನೆ

ADVERTISEMENT

ತಮ್ಮ 23ನೇ ವಯಸ್ಸಿನಲ್ಲಿ ಸ್ನೇಹಿತ ಚ.ಮೂ. ಕೃಷ್ಣ ಶಾಸ್ತ್ರಿ ಜೊತೆಗೂಡಿ ‘ಸಂಸ್ಕೃತ ಭಾರತಿ’ ಎಂಬ ಸಂಸ್ಥೆಯೊಂದನ್ನು ಆರಂಭಿಸಿದರು. ಸಂಸ್ಕೃತ ಭಾಷೆ ಕಲಿಸುವುದು ಅದರ ಮೂಲ ಉದ್ದೇಶವಾಗಿತ್ತು. ಸಂಸ್ಥೆಯ ಅಡಿ 24 ವರ್ಷಗಳ ಕಾಲ ಹೆಗಡೆ ಅವರು ‘ಚಂದಮಾಮ’ ಪತ್ರಿಕೆಯ ಸಂಸ್ಕೃತ ಆವೃತ್ತಿಯ ಸಂಪಾದನ ಮಾಡಿದರು.

‘ಚಂದಮಾಮ’ ಪತ್ರಿಕೆಗೆಂದು ಒಂದು ಸಮಿತಿ ರಚಿಸಿಕೊಳ್ಳಲಾಗಿತ್ತು. ಅಲ್ಲಿ ಅನುವಾದ ಕಾರ್ಯಗಳಾಗುತ್ತಿದ್ದವು. ಆ ಅನುವಾದವನ್ನು ತಿದ್ದುವುದು, ಭಾಷೆಯನ್ನು ಶುದ್ಧಗೊಳಿಸುವ ಕಾರ್ಯವನ್ನು ಹೆಗಡೆ ಅವರು ನಿರ್ವಹಿಸುತ್ತಿದ್ದರು. ಓದಿದ ಶಾಸ್ತ್ರ ಬೇರೆ ಆಗಿದ್ದರೂ ‘ಭಾಷಾ ಶುದ್ಧಿ’ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಅವರಿಗೆ ಅನಿವಾರ್ಯವೂ ಆಯಿತು, ಆಪ್ಯಾಯಮಾನವೂ ಆಯಿತು. ಮುಂದೆ ‘ಸಂಭಾಷಣ ಸಂದೇಶಃ’ ಸಂಸ್ಕೃತ ಮಾಸಪತ್ರಿಕೆಯ ಸಂಪಾದಕರಾದರು.

ಸಂಸ್ಕೃತ ಭಾಷೆಯನ್ನು ಹೆಚ್ಚಿನ ಜನರಿಗೆ ತಲುಪಿಸುವ ದಿಸೆಯಿಂದ ಕೆಲಸ ಮಾಡುತ್ತಿರುವ ‘ಸಂಸ್ಕೃತ ಭಾರತಿ’ ಮೂಲಕ ಈವರೆಗೆ ಒಂದು ಕೋಟಿಗೂ ಅಧಿಕ ಜನರಿಗೆ ಸಂಸ್ಕೃತ ಹೇಳಿಕೊಡಲಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನ 49 ದೇಶಗಳಲ್ಲಿ ಸಂಸ್ಥೆಯಿಂದ ಸಂಸ್ಕೃತ ಕಲಿಕಾ ಚಟುವಟಿಕೆಗಳು ನಡೆದಿವೆ. 19 ದೇಶಗಳಲ್ಲಿ ಈ ಚಟುವಟಿಕೆ ನಿರಂತರವಾಗಿದೆ. ಈವರೆಗೆ 350ಕ್ಕೂ ಹೆಚ್ಚಿನ ಪುಸ್ತಕಗಳನ್ನು ‘ಸಂಸ್ಕೃತ ಭಾರತಿ’ ಪ್ರಕಟಿಸಿದೆ. ಅವುಗಳಲ್ಲಿ 100ಕ್ಕೂ ಹೆಚ್ಚಿನವು ಸಂಸ್ಕೃತ ಭಾಷೆ ಕಲಿಕೆಗೆ ಪೂರಕವಾದವು. ಸಾಕಷ್ಟು ಭಾಷೆಗಳಿಂದ ಸಂಸ್ಕೃತಕ್ಕೆ ಸಾಹಿತ್ಯಗಳನ್ನು ಅನುವಾದಿಸುವ ಕೆಲಸಗಳೂ ಪ್ರಗತಿಯಲ್ಲಿವೆ.

ಅಮೆರಿಕದ ಎಲ್ಲ ರಾಜ್ಯಗಳಲ್ಲೂ ‘ಸಂಸ್ಕೃತ ಭಾರತಿ’ ಶಾಖೆಗಳಿವೆ. ಒಟ್ಟಾರೆಯಾಗಿ 4,880 ಶಾಖೆಗಳಲ್ಲಿ 70 ಪೂರ್ಣಾವಧಿ ಕಾರ್ಯಕರ್ತರು ಮತ್ತು 16,000ಕ್ಕೂ ಅಧಿಕ ಅರೆಕಾಲಿಕ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಕೊಂಡಿದ್ದು, ಅವಕಾಶ–ಸಮಯ ಸಿಕ್ಕಾಗಲೆಲ್ಲ ‘ಸಂಸ್ಕೃತ ಭಾರತಿ’ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಸ್ಕೃತ ವಿಕಿಪೀಡಿಯಾವನ್ನೂ (sa.wikipedia.org) ಅಭಿವೃದ್ಧಿಪಡಿಸಿದ್ದಾರೆ.

‘ಜನರು ಸಂಸ್ಕೃತವನ್ನು ಇಷ್ಟಪಡುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಸಂಸ್ಕೃತ ಕಲಿಸುತ್ತೇವೆ’ ಎನ್ನುವ ಹೆಗಡೆ ಅವರು, ‘ಕಲಿಯುವವರ ಅನುಕೂಲ ತಕ್ಕಂತೆ ಕಲಿಸಲು ಸಿದ್ಧರಿದ್ದೇವೆ. ನಮ್ಮ ಸಮಯಕ್ಕೆ ತಕ್ಕಂತೆಯೇ ಕಲಿಯಬೇಕು ಎಂದರೆ ಸಾಧ್ಯವಿಲ್ಲ. ಅದಕ್ಕಾಗಿ ನೂರಾರು ಮಾದರಿಗಳು ಬೇಕಾಗುತ್ತವೆ, ‘ಸಂಸ್ಕೃತ ಭಾರತಿ’ ಆ ಮಾದರಿಗಳನ್ನು ರೂಪಿಸಿಕೊಂಡು ಅನುಷ್ಠಾನಕ್ಕೆ ತರುತ್ತದೆ’ ಎನ್ನುತ್ತಾರೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳೊಂದಿಗೂ ಕೈಜೋಡಿಸಿದ್ದಾರೆ. ಸಂಸ್ಕೃತ ಕಲಿಸುವವರನ್ನು ತರಬೇತುಗೊಳಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಬೇರೆ ಬೇರೆ ಹಂತದ ಶಿಕ್ಷಣಾರ್ಥಿಗಳಿಗೆ ಬೇರೆ ಬೇರೆ ಕಲಿಕೆಯ ಮಾದರಿ ಬೇಕಾಗುತ್ತದೆ, ಅದನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತದೆ ‘ಸಂಸ್ಕೃತ ಭಾರತಿ’.

‘ಶಾಲೆಗಳಲ್ಲಿಯೂ ಸಂಸ್ಕೃತವನ್ನು ಸಂಸ್ಕೃತ ಮಾಧ್ಯಮದಲ್ಲಿ ಪಾಠ ಮಾಡುತ್ತಿಲ್ಲ. ಬೇರೆ ಭಾಷೆಗಳ ಮೂಲಕ ಹೇಳಿಕೊಡುತ್ತಾರೆ, ಇದು ಬದಲಾಗಬೇಕು. ಎಲ್ಲ ಕಡೆಯಲ್ಲಿಯೂ ಸಂಸ್ಕೃತ ಮಾಧ್ಯಮ ಬಳಕೆ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಸಂಸ್ಕೃತ ಕಲಿಕೆ ಆರಂಭ ಆಗಬೇಕು. ಹೀಗೆ ಅನೇಕ ಉದ್ದೇಶಗಳನ್ನಿಟ್ಟುಕೊಂಡು ಸರ್ಕಾರದ ಮಟ್ಟದಲ್ಲಿ ಮನವೊಲಿಸುವ ಪ್ರಯತ್ನಗಳೂ ನಡೆಯುತ್ತಿರುತ್ತದೆ. ಹೊಸ ವಿಚಾರಗಳ ಕುರಿತು ಚರ್ಚಾ ಗೋಷ್ಠಿ, ಸಂಕೀರ್ಣಗಳನ್ನು ನಡೆಸಲು ಕೈಜೋಡಿಸಲಾಗುತ್ತದೆ’ ಎಂದು ‘ಸಂಸ್ಕೃತ ಭಾರತಿ’ಯ ಕಾರ್ಯಕ್ರಮಗಳನ್ನು ಅವರು ವಿವರಿಸಿದರು.

ವಿದೇಶಗಳಲ್ಲಿ ಸಂಸ್ಕೃತ

‘ವಿದೇಶಗಳಲ್ಲಿ ಸಂಸ್ಕೃತ ಕಲಿಸುವ ಮುಖ್ಯ ಉದ್ದೇಶವೂ ಭಾರತದ ಹಿತದೃಷ್ಟಿಯಿಂದಲೇ’ ಎಂದು ಹೇಳುವ ಹೆಗಡೆ ಅವರು, ‘ವಿದೇಶಗಳಲ್ಲಿನ ಭಾರತೀಯರು ಸಂಸ್ಕೃತ ಕಲಿತರೆ ಭವಿಷ್ಯದಲ್ಲಿ ಭಾರತಕ್ಕೇ ಒಳ್ಳೆಯದಾಗುತ್ತದೆ’ ಎನ್ನುತ್ತಾರೆ.

ಉದಾಹರಣೆ ಸಹಿತ ವಿವರಿಸುವ ಅವರು, ‘ಉದ್ಯೋಗ ನಿಮಿತ್ತ ಅಮೆರಿಕದಲ್ಲಿ ನೆಲೆಸಿದ ಭಾರತದ ದಂಪತಿಗೆ ತಮ್ಮ ಮಕ್ಕಳನ್ನು ಭಾರತೀಯರನ್ನಾಗಿ ಉಳಿಸಿಕೊಳ್ಳುವುದು ಸವಾಲಾಗಿದೆ. ಶಿಕ್ಷಣ, ಸಂಸ್ಕೃತಿ ದೃಷ್ಟಿಯಿಂದ ಅವರು ಭಾರತೀಯತೆಯಿಂದ ಬಹಳ ದೂರ ಹೋಗಿದ್ದಾರೆ. ಅಲ್ಲಿ ಹತ್ತನೇ ತರಗತಿ ಮುಗಿದ ನಂತರ ಪಾರ್ಟಿ ಕೊಡಬೇಕು. ಆ ಪಾರ್ಟಿಗೆ ಸಂಗಾತಿ ಇಲ್ಲದವರಿಗೆ ಪ್ರವೇಶವೇ ಇಲ್ಲ. ಆ ಸಂಸ್ಕೃತಿಯನ್ನು ಭಾರತೀಯ ಪೋಷಕರು ಇಷ್ಟಪಡುವುದಿಲ್ಲ. ಇಂತಹ ಸಮಸ್ಯೆಗಳಿಂದ ಹೊರಬರಲು ಸಂಸ್ಕೃತ ಕಲಿಸುವತ್ತ ಹೆತ್ತವರು ಮುಖ ಮಾಡುತ್ತಿದ್ದಾರೆ’ ಎಂದು ತಿಳಿಸುತ್ತಾರೆ.

ಇಂತಹ ಮಕ್ಕಳಿಗಾಗಿ ಎಸ್‌ಎಎಫ್‌ಎಲ್ (ವಿದೇಶಿ ಭಾಷೆಯಾಗಿ ಸಂಸ್ಕೃತ) ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ ಹಂತದಲ್ಲಿ ಈ ಕೋರ್ಸ್ ಆಯ್ಕೆ ಮಾಡಿಕೊಂಡವರಿಗೆ ಮಾನ್ಯತೆಯೂ ಇದೆ. ‘ಅಂಚೆ ಮೂಲಕ ಸಂಸ್ಕೃತ’ ಎಂಬ ಯೋಜನೆಯನ್ನೂ ರೂಪಿಸಿದೆ. ಹೀಗೆ ಪ್ರಾದೇಶಿಕವಾಗಿ ಯಾವ ರೀತಿ ಸಂಸ್ಕೃತ ಕಲಿಸುವ ಕಾರ್ಯವಾಗಬೇಕು ಎಂದು ಅಲ್ಲಿಯ ಸ್ಥಾನೀಯ ಕಾರ್ಯಕರ್ತರೇ ನಿರ್ಧರಿಸುತ್ತಾರೆ.

ಮನೆ, ಕಾರ್ಯಾಲಯ ಸಂಸ್ಕೃತಮಯ

ಜನಾರ್ದನ ಹೆಗಡೆ ಅವರು ಮದುವೆ ಆಗುವ ಸಂದರ್ಭದಲ್ಲಿ ತಮ್ಮ ಭಾವಿ ಪತ್ನಿಗೆ ಹೇಳಿದ ಮಾತುಗಳೆಂದರೆ, ‘ನಾನು ಸರಳ ಜೀವನ ನಡೆಸುವವನು. ನನ್ನ ಮನೆಯ ಭಾಷೆ ಸಂಸ್ಕೃತವೇ ಆಗಬೇಕು. ಇದನ್ನು ಒಪ್ಪಿದರೆ ಮುಂದುವರಿಯಬಹುದು’ ಎಂದು. ಅದು ಇಂದಿಗೂ ಮುಂದುವರಿದಿದೆ. ಅವರ ಧರ್ಮಪತ್ನಿಯೂ ಸಂಸ್ಕೃತ ಓದಿದವರು. ಮನೆಯಲ್ಲಿ ಸಂಸ್ಕೃತದ ಹೊರತು ಬೇರೆ ಭಾಷೆಯನ್ನೇ ಬಳಸುವುದಿಲ್ಲ. ಪರಿಣಾಮವಾಗಿ ಅವರ ಮಗನ ಮಾತೃಭಾಷೆಯೇ ಸಂಸ್ಕೃತವಾಯಿತು.

ಹೆಗಡೆ ಅವರು ಹೊರಗಿನ ವ್ಯವಹಾರದಲ್ಲಿಯೂ ಸಾಧ್ಯವಾದಷ್ಟೂ ಸಂಸ್ಕೃತವನ್ನೇ ಬಳಸುತ್ತಾರೆ. ಅನಿವಾರ್ಯ ಎನಿಸಿದಾಗ ಸಂವಹನಕ್ಕೆ ಅಗತ್ಯವಿದ್ದ ಭಾಷೆಯನ್ನೂ ಬಳಸುತ್ತಾರೆ. ಆದರೆ ತನ್ನೊಂದಿಗೆ ಸಂಸ್ಕೃತದಲ್ಲೇ ಮಾತನಾಡಬೇಕು ಎಂದು ಯಾರಿಗೂ ಒತ್ತಾಯಿಸಿದವರಲ್ಲ. ‘ಸಂಸ್ಕೃತ ಭಾರತಿ’ಯ ಎಲ್ಲ ಕಾರ್ಯಾಲಯಗಳೂ ಸಂಸ್ಕೃತಮಯ.

ಜನಾರ್ದನ ಹೆಗಡೆ ಅವರು ರಚಿಸಿದ ‘ಬಾಲಕಥಾಸ‍ಪ್ತತಿಃ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಹಾಗೂ ಎಸ್.ಎಲ್. ಭೈರಪ್ಪ ಅವರ ‘ಧರ್ಮಶ್ರೀ’ ಕೃತಿಯ ಸಂಸ್ಕೃತ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ಪುರಸ್ಕಾರ, ಎರಡು ಗೌರವ ಡಾಕ್ಟರೇಟ್, ಡಿ.ಲಿಟ್. ಪದವಿ ಅವರನ್ನು ಅರಸಿ ಬಂದಿದೆ.

ಸದ್ಯ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಮಕ್ಕಳಿಗಾಗಿ ಸ್ವಾತಂತ್ರ್ಯ ಯೋಧರ ಕುರಿತಾದ 75 ಕಥೆಗಳನ್ನೊಳಗೊಂಡ ಪುಸ್ತಕವೊಂದನ್ನು ಹೊರತರಲಾಗುತ್ತಿದೆ.

ಸಂಸ್ಕೃತವೂ ಅನ್ನದ ಭಾಷೆಯೇ...

ಸಂಸ್ಕೃತವೂ ಅನ್ನದ ಭಾಷೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಜನಾರ್ದನ ಹೆಗಡೆ ಪ್ರತಿಪಾದಿಸುತ್ತಾರೆ. ಬ್ಯಾಂಕ್ ನೌಕರಿಯೊಂದಕ್ಕೆ ಲಕ್ಷಾಂತರ ಅರ್ಜಿಗಳು ಬರುತ್ತವೆ. ಆದರೆ ಸಂಸ್ಕೃತ ಶಿಕ್ಷಕ ಹುದ್ದೆಯೊಂದಕ್ಕೆ 20–25 ಅರ್ಜಿಗಳು ಬರಬಹುದು. ಇಲ್ಲಿ ಸ್ಪರ್ಧೆ ಕಡಿಮೆ ಇರುತ್ತದೆ ಎಂಬುದು ಅವರ ಅಭಿಪ್ರಾಯ.

‘ಜುಲೈ ತಿಂಗಳಲ್ಲಿ ಶಾಲೆ–ಕಾಲೇಜುಗಳಿಗೆ ಸಂಸ್ಕೃತ ಶಿಕ್ಷಕರನ್ನು ಹುಡುಕಿದರೆ ಸಿಗುತ್ತಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಅಷ್ಟು ಬೇಡಿಕೆ ಇದೆ. ಪ್ರತಿವರ್ಷ 10–15 ಹುದ್ದೆಗೆ ಶಿಕ್ಷಕರು ಬೇಕು, ಕಳುಹಿಸಿಕೊಡಿ ಎಂದು ನಮ್ಮನ್ನೂ ಕೇಳುತ್ತಾರೆ. ಅಂತಹ ಸಂದರ್ಭದಲ್ಲಿ, ಸಂಸ್ಕೃತ ಕಲಿತವರನ್ನು ನಾವು ಅವರಿಗೆ ಪರಿಚಯಿಸುತ್ತೇವೆ. ಕೇರಳದಿಂದಲೂ ಕರ್ನಾಟಕಕ್ಕೆ ಸಂಸ್ಕೃತ ಶಿಕ್ಷಕರನ್ನು ಕರೆಯಿಸಿದ ಉದಾಹರಣೆಗಳಿವೆ. ಕೆಲವೊಮ್ಮೆ ಸಂಸ್ಕೃತ ಶಿಕ್ಷಕರ ಕೊರತೆಯ ಕಾರಣಕ್ಕೇ ಕೋರ್ಸ್ ಮುಚ್ಚಿದ್ದೂ ಇದೆ. ಇಂತಹ ಅವಕಾಶಗಳು ಬೇರೆ ಯಾವ ಭಾಷೆಯಲ್ಲಿ ಇದೆ’ ಎಂದು ಪ್ರಶ್ನಿಸುತ್ತಾರೆ.

ಸಂಸ್ಕೃತ ಓದಿ ಐಎಎಸ್, ಬ್ಯಾಂಕ್, ಉದ್ಯಮ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರೂ ಸಾಕಷ್ಟು ಜನರಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಕ್ಕೆ ಈ ವರ್ಷ 129 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ‘ಸಂಸ್ಕೃತ ಭಾರತಿ’ಯ ಪರೋಕ್ಷ ಪ್ರಯತ್ನದ ಫಲ ಎನ್ನುತ್ತಾರೆ ಅವರು.

ಇ–ಭಾರತಿಸಂಪತ್

ಸಂಸ್ಕೃತದ ಸಾಕಷ್ಟು ಗ್ರಂಥಗಳು ಅಂತರ್ಜಾಲದಲ್ಲಿ ಪಿಡಿಎಫ್ ಮಾದರಿಗಳಲ್ಲಿವೆ. ಆದರೆ ಅದರಲ್ಲಿ ಒಂದು ನಿರ್ದಿಷ್ಟ ಪದವನ್ನು ಹುಡುಕಿದರೆ ಸಿಗುವುದಿಲ್ಲ. ಈ ಕೊರತೆ ನಿವಾರಿಸಲು, ಕೃತಿಗಳನ್ನು ‘ಒಸಿಆರ್’ ಮಾದರಿಗೆ ಪರಿವರ್ತಿಸಿ, ಅಕ್ಷರ ದೋಷಗಳನ್ನು ಸರಿಪಡಿಸಿ ಅಂತರ್ಜಾಲದಲ್ಲಿ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಮಾಡುವ ‘ಇ–ಭಾರತಿಸಂಪತ್’ (ebharatisampat.in) ಯೋಜನೆಯನ್ನೂ ‘ಸಂಸ್ಕೃತ ಭಾರತಿ’ ಕಾರ್ಯರೂಪಕ್ಕೆ ತರುತ್ತಿದೆ. ಯುನಿಕೋಡ್‌ನಲ್ಲಿ ಒಂದು ಪದವನ್ನು ಬರೆದು ಹುಡುಕಿದರೆ ಆ ಪದವನ್ನು ಒಳಗೊಂಡಿರುವ ಎಲ್ಲ ಗ್ರಂಥಗಳೂ ಒಂದೇ ಕಡೆ ಸಿಗುವಂತಾಗುತ್ತದೆ. ಅಧ್ಯಯನ ಮಾಡುವವರಿಗೆ ಇದು ಸಹಾಯವಾಗಲಿದೆ. ಯೋಜನೆಗೆ ಪ್ರಾಥಮಿಕವಾಗಿ ಸುಮಾರು ಎಂಬತ್ತು ಸಾವಿರ ಗ್ರಂಥಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಗ್ರಂಥಗಳನ್ನು ಪರಿವರ್ತಿಸಲಾಗಿದೆ.

‘ಗೂಗಲ್, ವಿಕಿಪೀಡಿಯಾಗಳು ಭಾರತೀಯರ ನಿಯಂತ್ರಣದಲ್ಲಿ ಇಲ್ಲ. ನಾವು ನಮ್ಮ ಎಲ್ಲ ಭೌದ್ಧಿಕ ಸಂಪತ್ತುಗಳನ್ನು ವಿದೇಶಿಗರ ಕೈಗೆ ಕೊಟ್ಟು ಕುಳಿತರೆ ಮುಂದೊಂದು ದಿನ ಅದನ್ನು ಅವರು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಎಂತಹ ಅಪಾಯ ಎದುರಾಗಬಹುದು ಎಂಬ ಕಲ್ಪನೆಯೂ ನಮಗಿಲ್ಲ. ಆದ್ದರಿಂದ ನಮ್ಮ ಸ್ವತ್ತು ನಮ್ಮಲ್ಲಿಯೇ ಇರಬೇಕು ಎಂಬ ಉದ್ದೇಶದಿಂದ ಇ–ಭಾರತಿಸಂಪತ್’ ಆರಂಭಿಸಿದ್ದೇವೆ. ಇದು ನಮ್ಮ ಸರ್ವರ್‌ಗಳಲ್ಲೇ ಇರುತ್ತದೆ’ ಎಂದು ‘ಸಂಸ್ಕೃತ ಭಾರತಿ’ಯ ದೂರದೃಷ್ಟಿಯನ್ನು ಅವರು ವಿವರಿಸುತ್ತಾರೆ. ಇದಕ್ಕಾಗಿ ಭಾರತದ್ದೇ ಆದ ‘ಒಸಿಆರ್’ ಅಭಿವೃದ್ಧಿಪಡಿಸುವ ಕೆಲಸವೂ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.