ADVERTISEMENT

ಬೊಂಬೆನಗರಿಯ ಕಾಮದೇವ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 19:30 IST
Last Updated 27 ಮಾರ್ಚ್ 2021, 19:30 IST
ಚನ್ನಪಟ್ಟಣದ ಕಾಮದೇವನಿಗೆ ಬುಲೆಟ್‌ ಬೇಕೇಬೇಕು
ಚನ್ನಪಟ್ಟಣದ ಕಾಮದೇವನಿಗೆ ಬುಲೆಟ್‌ ಬೇಕೇಬೇಕು   

ಬೊಂಬೆನಗರಿ ಎಂದೇ ಪ್ರಸಿದ್ಧಿಯಾದ ಚನ್ನಪಟ್ಟಣದಲ್ಲಿ ಆಚರಿಸುವ ಕಾಮನಹಬ್ಬದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇಲ್ಲಿನ ಮಂಡಿಪೇಟೆಯಲ್ಲಿ ಆಚರಿಸುವ ಕಾಮನ ಹಬ್ಬದ ಸೊಬಗು ಬಲು ವಿಶಿಷ್ಟವಾದುದು. ಶಿವರಾತ್ರಿ ಅಮಾವಾಸ್ಯೆಯಂದು ಹೊರಗೆ ಕಾಮಣ್ಣನ ಪ್ರತಿಷ್ಠಾಪನೆಯ ಮೂಲಕ ಹಬ್ಬದ ಆಚರಣೆ ಶುರುವಾಗುತ್ತದೆ. ಈ ಕಾಮಣ್ಣನ ಮೂರ್ತಿಯನ್ನು ಪೊರಕೆ ಕಾಮಣ್ಣನೆಂದೂ ಕರೆಯುತ್ತಾರೆ. ಏಕೆಂದರೆ ಈ ಕಾಮಣ್ಣನ ಮೂರ್ತಿಯು ಪೊರಕೆ, ಬಿದಿರಿನ ಮೊರ, ಪುರಿ ಉಂಡೆ, ಬೆರಣಿ ಹಾಗೂ ಹೂವಿನಿಂದ ತಯಾರಾಗಿರುತ್ತದೆ.

ಪೊರಕೆ ಕಾಮಣ್ಣನ ಪ್ರತಿಷ್ಠಾಪನೆಯ ನಂತರ ಹೋಳಿ ಹುಣ್ಣಿಮೆಯವರೆಗೆ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅವುಗಳಿಗೆ ದಿನಕ್ಕೊಂದು ವೇಷಭೂಷಣದಿಂದ ಅಲಂಕಾರಿಸಲಾಗುತ್ತದೆ. ಉತ್ಸವದ ಪ್ರತಿದಿನವೂ ಹಬ್ಬದ ಕಳೆ ರಂಗೇರುವಂತೆ ಆಚರಣೆಗಳು ನಡೆಯುತ್ತವೆ.

ವರನಿಗೆ ಕಚ್ಚೆ ಪಂಚೆ, ಕೋಟು, ವಧುವಿಗೆ ಸೀರೆ, ತೋಳುಬಂದಿ, ಬೈತಲೆಬೊಟ್ಟು, ಸರ, ಕಿವಿಯೋಲೆ, ನಡುವಿನ ಡಾಬು, ಒಡವೆ, ಮೊಗ್ಗಿನ ಜಡೆ ಮುಂತಾದವುಗಳ ಅಲಂಕಾರ. ಪ್ರತಿದಿನ ಸಂಜೆ ವಿವಿಧ ರೀತಿಯ ಆಚರಣೆಗಳು. ಉದಾಹರಣೆಗೆ ನಿಶ್ಚಿತಾರ್ಥ ಪ್ರಸಂಗ, ವೈವಾಹಿಕ ಪ್ರಸಂಗ, ವಿವಾಹದ ನಂತರ ಸತ್ಯನಾರಾಯಣ ಪೂಜೆಯ ಸನ್ನಿವೇಶ ಹೀಗೆ. ನಿಶ್ಚಿತಾರ್ಥ ಹಾಗೂ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ವಿಧಿವತ್ತಾಗಿ ನಾದಸ್ವರ ಮತ್ತು ಮಂಗಳ ವಾದ್ಯಗಳೊಂದಿಗೆ ನಡೆಸಲಾಗುತ್ತದೆ. ಹದಿನೈದು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಒಂದೂವರೆ ತಿಂಗಳಿನಿಂದಲೇ ಸಿದ್ಧತೆಗಳು ನಡೆಯುತ್ತವೆ.

ADVERTISEMENT

ಹುಣ್ಣಿಮೆ ದಿನದ ಹಿಂದಿನ ಸಂಜೆ ಕಾಮದೇವನು ಶಿವನಿಗೆ ಹೂಬಾಣ ಬಿಡುವ ಸ್ತಬ್ಧಚಿತ್ರವನ್ನು ವೇದಿಕೆಯಲ್ಲಿ ಸಿದ್ಧಪಡಿಸಿ ಪುರಾಣದ ಸನ್ನಿವೇಶವನ್ನು ಮರುಕಳಿಸುವಂತೆ ಪ್ರತಿವರ್ಷವೂ ಸೃಷ್ಟಿಸುವುದು ವಿಶೇಷ. ಅದೇ ದಿನ ಸಂಜೆ ಮೈಸೂರಿನ ದಸರಾ ಜಂಬೂಸವಾರಿ ಹೋಲುವ ರೀತಿಯಲ್ಲಿ ದೇಶೀಯ ಜಂಬೂ ಸವಾರಿಯನ್ನು ಕಾಮದೇವನ ಮೂರ್ತಿಯೊಂದಿಗೆ ಮಾಡಲಾಗುತ್ತದೆ. ಪಟಾವಳಿ ಕಾಮಣ್ಣನ ಚಿತ್ರವೂ ಜತೆಗಿರುತ್ತದೆ. ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕರಗ, ಪೌರಾಣಿಕ ವೇಷಭೂಷಣ, ಕತ್ತಿವರಸೆ, ದೊಣ್ಣೆ ವರಸೆ ಮೊದಲಾದ ಮೇಳಗಳೊಂದಿಗೆ ನಗರದ ತುಂಬಾ ನಡೆಯುತ್ತದೆ.

ರತಿ–ಮನ್ಮಥರ ಬೈಕ್‌ ಸವಾರಿ

ಉತ್ಸವ ಸಾಗುತ್ತ ಮುಂದೆ ಹೋದಂತೆ ರಸ್ತೆಯುದ್ದಕ್ಕೂ ಮಜ್ಜಿಗೆ ಪಾನಕ ಸಿಹಿತಿಂಡಿ ಪ್ರಸಾದಗಳನ್ನು ತಮ್ಮ ತಮ್ಮ ಮನೆಗಳ ಮುಂದೆ ವಿತರಿಸಿ ಜನರ ದಣಿವನ್ನು ಕಡಿಮೆ ಮಾಡುತ್ತಾರೆ. ಹೀಗೆ ಕಾಮರತಿಯ ಉತ್ಸವದ ಮೆರವಣಿಗೆ ಮುಗಿಸಿ ಸ್ಥಳಕ್ಕೆ ಬಂದ ನಂತರ ದಹನ ಮಾಡುವ ಜಾಗದಲ್ಲಿ ಕೊರಕಿ ಕಾಮಣ್ಣನನ್ನು ನಿಲ್ಲಿಸಿ ಅದಕ್ಕೆ ಕಟ್ಟಿಗೆ ಸೌದೆ, ಬೆರಣಿ, ಹಳೆ ಚಾಪೆ, ಒಣಗರಿಗಳನ್ನು ಹಾಕಿ ಕಾಮದಹನಕ್ಕೆ ಜಾಗ ಸಿದ್ಧಪಡಿಸುತ್ತಾರೆ.

ಕಾಮನ ಉತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಿ ಕಾಮನ ಶಿರವನ್ನು ತಕ್ಷಣ ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಅನಂತರ ಪಟಾವಳಿ ಕಾಮಣ್ಣನ ಚಿತ್ರವನ್ನು ಉತ್ಸವ ಮಂಟಪದಿಂದ ತೆಗೆದು ದಹನಕ್ಕೆ ಸಿದ್ಧಪಡಿಸಿರುವ ಜಾಗದ ಸುತ್ತ ಸುತ್ತು ಹಾಕಿ ಅದನ್ನು ದಹನ ಜಾಗಕ್ಕೆ ಸೇರಿಸುತ್ತಾರೆ. ಅದೇ ಸಮಯಕ್ಕೆ ಕಾಮನ ಅಣಕು ಶವಯಾತ್ರೆ ಮಾಡಿ ದಹನ ಮಾಡುವ ಮುನ್ನ ಶಾಸ್ತ್ರಾನುಸಾರ ಚಟ್ಟ ಸಿದ್ಧಪಡಿಸುತ್ತಾರೆ. ದಹನದ ಜಾಗದಲ್ಲಿ ಪೊರಕೆ ಕಾಮಣ್ಣ ಹಾಗೂ ಪಟಾವಳಿ ಕಾಮಣ್ಣನ ಚಿತ್ರಪಟವನ್ನು ಕಾಮನ ಪ್ರತಿರೂಪವಾಗಿ ಇಟ್ಟು ಅದಕ್ಕೆ ಬೆಂಕಿಯನ್ನು ಹಚ್ಚಿ ದಹಿಸುತ್ತಾರೆ. ಇದು ಕಾಮದಹನದ ಸಂಕೇತ.

ಹುಣ್ಣಿಮೆ ಚಂದ್ರನ ಬೆಳಕಲ್ಲಿ ರತಿ ತನ್ನ ಪತಿ ಕಾಮದೇವನನ್ನು ಕಳೆದುಕೊಂಡು ದುಃಖಭರಿತಳಾಗಿ ತನ್ನ ಪತಿಗೆ ಮರುಜನ್ಮ ನೀಡಿ ಎಂದು ಶಿವನಲ್ಲಿ ಬೇಡುವ ಹಾಗೆ ಬಿಳಿ ಸೀರೆ ಉಡಿಸಿ, ತಮಟೆ, ಬ್ಯಾಂಡ್, ಭಜಂತ್ರಿಗಳ ಸದ್ದಿನ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಶಿವನ ಅನುಗ್ರಹ ಪಡೆದು ಕಾಮದೇವನು ಮರುಜನ್ಮ ತಾಳುವ ಕತೆಯ ಪ್ರತೀಕವಾಗಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವವನ್ನು ಆಚರಿಸುವ ಪದ್ಧತಿ ಇಲ್ಲಿದೆ. ಅಂದಿನ ದಿನ ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಉತ್ಸವವನ್ನು ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.