ADVERTISEMENT

ಹಿರಣ್ಣಯ್ಯ ಹೆಸರು ಹೇಳದಿದ್ದರೆ ರಂಗಭೂಮಿ ಚರಿತ್ರೆಯೇ ಅಪೂರ್ಣ

ಮಲ್ಲಿಕಾರ್ಜುನ ಕಡಕೋಳ
Published 2 ಮೇ 2019, 5:56 IST
Last Updated 2 ಮೇ 2019, 5:56 IST
   

ಅಪ್ಪ ಕೆ. ಹಿರಣ್ಣಯ್ಯ, ಮಗ ಮಾಸ್ಟರ್ ಹಿರಣ್ಣಯ್ಯ. ಈ ಎರಡೂ ಹೆಸರು ಹೇಳದಿದ್ದರೆ ಕನ್ನಡ ರಂಗಭೂಮಿಯ ಚರಿತ್ರೆಯೇ ಅಪೂರ್ಣ, ನರಸಿಂಹಮೂರ್ತಿ ಎಂಬುದು ಮಾಸ್ಟರ್ ಹಿರಣ್ಣಯ್ಯನವರ ನಿಜ ನಾಮಧೇಯ. ಮಾಸ್ಟರ್‌ಗೆ ಅಭಿನಯ, ರಂಗಮಾತು, ಒಟ್ಟಾರೆ ರಂಗ ಸಂಸ್ಕೃತಿಯನ್ನು ಕಲಿಸಿದ್ದು ಬದುಕಿನ ರಂಗಶಾಲೆ. ಎಳಮೆಯಿಂದಲೇ ಅಸ್ತಿತ್ವಕ್ಕಾಗಿ ಹೋರಾಟ. ರಂಗಸ್ಥಳಕ್ಕೆ ಕಾಲಿಟ್ಟ ಮೇಲೆ ಅಪ್ಪನನ್ನೇ ಮೀರಿಸಿದಂಥಅಪ್ರತಿಮ ಪ್ರತಿಭಾಶಾಲಿ, ಲಂಚವಿನ್ನೂ ಸಾಮಾಜಿಕ 'ಮೌಲ್ಯದಲೇಪ' ಧರಿಸುವಾಗಲೇ ಇವರಿಂದ ಲಂಚಾವತಾರ ನಾಟಕ ರಚನೆ, ಅದು ಎಂಟು ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡ ದೊಡ್ಡ ದಾಖಲೆ.

ಕೆ.ಹಿರಣ್ಣಯ್ಯ ಮಿತ್ರಮಂಡಳಿಯ ದೇವದಾಸಿ, ಸದಾರಮೆ, ಮಕ್ಮಲ್ ಟೋಪಿ, ಕಪಿಮುಷ್ಟಿ ಮುಂತಾದ ನಾಟಕಗಳಿಗೆ ತಮ್ಮ ನವಿರು ಚಿಂತನೆಯ ಮಾತುಗಳ ಮೂಲಕ ಮಾಸ್ಟರ್ ಹಿರಣ್ಣಯ್ಯ ಹೊಸ ರಂಗ ಆಯಾಮ ಸೃಷ್ಟಿಸಿದರು.ಅದು ಇಡೀ ವೃತ್ತಿರಂಗಭೂಮಿ ಕಂಡ ಕೌತುಕದ ಬೆಳವಣಿಗೆಯೂ ಹೌದು.ಆರಂಭದಲ್ಲಿ ಪಟ್ಟ ಪಡಿಪಾಟಿವ ಅಷ್ಟಿಷ್ಟಲ್ಲ, ಮುಂದೆ ಅದೆಲ್ಲವೂ ನೆಟ್ಟಗಾಯಿತೆಂದೆಲ್ಲ. ಆದರೆ ಈ ರಂಗಛಲಗಾರಜೀವನೋತ್ಸಾಹ, ರಂಗ ಚೀತೋಹಾರಿತನ ಮಾತ್ರ ಯಾವತ್ತೂ ಕಳೆದುಕೊಳ್ಳಲಿಲ್ಲ.

ADVERTISEMENT

ಅವರೊಳಗೊಬ್ಬ ಮೊನಚು ಮಾತಿನ ಬೀಚಿ, ನಾಡುನುಡಿ ಪ್ರೇಮಿ ಅನಕೃ, ಹೀಗೆ ಹತ್ತು ಹಲವು ಸಾಂಸ್ಕೃತಿಕ ವ್ಯಕ್ತಿತ್ವಗಳು ಒಬ್ಬುಳಿಗೊಂಡಿದ್ದವು. ಪರಂಪರೆ ಮತ್ತು ಪ್ರಗತಿಪರತೆ ಎರಡನ್ನೂ ಸಮನಾಗಿ ತೂಗಿ ನೋಡುವ ಮಮಕಾರ, ಅಧಿಕಾರಶಾಹಿ ರಾಜಕಾರಿಣಿಗಳಿಗೆ ಹಿಣ್ಣಯ್ಯನವರ ಚಾಟಿ ಏಟಿನ ಮಾತುಗಳೆಂದರೆ ಕೆಂಡದುಂಡೆಗಳ ಸಿಡಿತ. ಆ ವಿನೋದ ವ್ಯಕ್ತಿತ್ವವೇ ಅಂಥದ್ದು. ಬಗೆದಷ್ಟು ಮಿಕ್ಕುವ ಭಾವರಂಗಾನುಭಾವದ ಗಣಿ. ಅಪ್ಪನಿಂದ ಮಗನವರಗೆ ಭೋರ್ಗರೆವ ರಂಗಧಾರೆ.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಣ್ಣಯ್ಯ ಹೊರರಾಜ್ಯ–ಹೊರದೇಶಗಳಲ್ಲೂ ನಾಟಕ ಪ್ರದರ್ಶಿಸಿದ ಹೆಗ್ಗಳಿಕೆಯುಳ್ಳವರು. ಬೆಳ್ಳಿತೆರೆಯಲ್ಲೂ ಮಾಸ್ಟರ್ ಹೆಜ್ಜೆ ಗುರುತುಗಳು, ನಾಟಕ–ಕಿರುತೆರೆ–ಹಿರಿತೆರೆ ಎಲ್ಲಿ ನೋಡಿದರೂ ಮಾಸ್ಟರ್ ಮಾಸ್ಟರ್ ಆಗಿಯೇ ಕೇಳಿಸುತ್ತಾರೆ. ತೆರೆ ಯಾವುದೇ ಇರಲಿ ಮಾಸ್ಟರ್ ಮಾತು ಮಾತ್ರ ಖರೇ. ಅಷ್ಟು ಮಾತ್ರವಲ್ಲ ಅದು ‘ತೆರೆ’ದ ಮನದ ಮಾತು. ಅಂತೆಯೇ ರಂಗಭೂಮಿ ಚರಿತ್ರೆಯಲ್ಲಿ ಮಾಸ್ಟರ್‌ಗೆ ವಿಶಿಷ್ಟ ಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.